ದ.ಕ.: ಮರಳುಗಾರಿಕೆಗೆ ನಿಷೇಧವಿದ್ದರೂ ಮರಳು ಲಭ್ಯ!
ಮುಟ್ಟುಗೋಲು ಹಾಕಲಾದ ಮರಳು ವಿಲೇಗೆ ಕ್ರಮ
![ದ.ಕ.: ಮರಳುಗಾರಿಕೆಗೆ ನಿಷೇಧವಿದ್ದರೂ ಮರಳು ಲಭ್ಯ! ದ.ಕ.: ಮರಳುಗಾರಿಕೆಗೆ ನಿಷೇಧವಿದ್ದರೂ ಮರಳು ಲಭ್ಯ!](https://www.varthabharati.in/sites/default/files/images/articles/2016/07/22/PwashedConcreteSand-(Small).gif)
ಮಂಗಳೂರು, ಜು.22: ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಮುಟ್ಟುಗೋಲು ಹಾಕಿರುವ ಮರಳನ್ನು ಬಹಿರಂಗ ಹರಾಜಿನ ಮೂಲಕ ಜಿಲ್ಲಾಡಳಿತ ವಿಲೇಗೆ ಕ್ರಮ ಕೈಗೊಂಡಿರುವ ಹಿನ್ನೆಲೆ ಯಲ್ಲಿ ದ.ಕ.ಜಿಲ್ಲೆಯಲ್ಲಿ ಆಗಸ್ಟ್ 15ರವರೆಗೆ ಮರಳುಗಾರಿಕೆಗೆ ನಿಷೇಧ ವಿದ್ದರೂ ಕಟ್ಟಡ ಕಾಮಗಾರಿಗಳಿಗೆ ಮರಳಿನ ಕೊರತೆ ಎದುರಾಗದು. ದ.ಕ. ಜಿಲ್ಲೆಯಲ್ಲಿ ಜೂ.15ರಿಂದ ಆಗಸ್ಟ್ 15ರವರೆಗೆ ಮರಳುಗಾರಿಕೆಯನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶಿಸಿತ್ತು.
ಮಾತ್ರವಲ್ಲದೆ, ನಿಷೇಧ ಆರಂಭದ ದಿನದಿಂದ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಮರಳುರಾಶಿಯನ್ನು ಮುಟ್ಟುಗೋಲು ಹಾಕುವ ಕಾರ್ಯ ಕೂಡಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಯಿಂದ ನಡೆದಿತ್ತು. ಮುಟ್ಟುಗೋಲು ಹಾಕಲಾದ ಮರಳನ್ನು ವಿಲೇ ಮಾಡುವ ಕಾರ್ಯವನ್ನು ಜುಲೈ 20ರಿಂದ ಇಲಾಖೆ ಆರಂಭಿಸಿದೆ.
ಅದರಂತೆ ಕೆಲವೊಂದು ಶರತ್ತುಗಳನ್ನು ವಿಧಿಸಿ ಹರಾಜು ಹಾಕಲಾದ ಮರಳನ್ನು ಜಿಲ್ಲೆಯಲ್ಲಿ ಸ್ಥಳೀಯ ಉಪಯೋಗಕ್ಕೆ ಮಾತ್ರವೇ ಬಳಸಲು ಅನುಮತಿ ನೀಡಲಾಗಿದೆ. ಬೆಳಗ್ಗೆ 6ರಿಂದ ಸಂಜೆ 6ರೊಳಗೆ ಮಾತ್ರವೇ ಮರಳು ಸಾಗಾಟಕ್ಕೆ ಅವಕಾಶವಿದ್ದು, ಮರಳು ಪರವಾನಿಗೆ ಪಡೆಯಲು ಇಲಾಖೆಗೆ ವಾಹನಗಳ ಸಂಖ್ಯೆ, ದಿನಾಂಕ, ಎಲ್ಲಿಂದ ಎಲ್ಲಿಗೆ ಸಾಗಾಟ ಎಂಬ ಬಗ್ಗೆ ಸ್ಪಷ್ಟವಾಗಿ ನಮೂದಿಸಿ ನೀಡಬೇಕಾಗಿದೆ. ಜಪ್ಪಿನಮೊಗರು ಗ್ರಾಮದ ಕಡೆಕಾರು, ಅಡಂಕುದ್ರು ಕಲ್ಲಾಪು, ಕಣ್ಣೂರು ಗ್ರಾಮ, ಅರ್ಕುಳ, ಅಡ್ಯಾರು, ಗುರುಪುರ ಕೈಕಂಬ, ಪರಾರಿ, ಉಳಾಯಿಬೆಟ್ಟು ಹಾಗೂ ವಾಮಂಜೂರು ಗ್ರಾಮಗಳು ಸೇರಿದಂತೆ ಒಟ್ಟು 15 ಪ್ರದೇಶಗಳಲ್ಲಿ ಮುಟ್ಟುಗೋಲು ಹಾಕಿ ಸಂಗ್ರಹಿಸಲಾಗಿರುವ ಒಟ್ಟು 4,400 ಲೋಡ್ ಮರಳನ್ನು ಬಹಿರಂಗ ಹರಾಜು ಪ್ರಕ್ರಿಯೆ ನಡೆಸಿ ಇದೀಗ ವಿತರಣೆ ಕಾರ್ಯ ನಡೆಯುತ್ತಿದೆ. ‘‘ನಿಷೇಧಿತ ಅವಧಿಯಲ್ಲಿ ಜಿಲ್ಲೆಯಲ್ಲಿನ ಕಟ್ಟಡ ಕಾಮಗಾರಿಗಳಿಗೆ ಸಾಕಾಗುವಷ್ಟು ಮರಳಿನ ದಾಸ್ತಾನು ಇರುವುದರಿಂದ ಆಗಸ್ಟ್ 15ರವರೆಗೆ ಮರಳುಗಾರಿಕೆಗೆ ಅವಕಾಶವಿಲ್ಲದಿದ್ದರೂ ಜಿಲ್ಲೆಯಲ್ಲಿ ಮರಳಿನ ಕೊರತೆ ಎದುರಾಗದು.
ಮಳೆಗಾಲದಲ್ಲಿ ನದಿ ಹಾಗೂ ಸಮುದ್ರಗಳಲ್ಲಿ ಮೀನುಗಳ ಸಂತಾನೋತ್ಪತ್ತಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ 2 ತಿಂಗಳ ಅವಧಿಗೆ ಮರಳುಗಾರಿಕೆಯನ್ನು ನಿಷೇಧಿಸಲಾಗುತ್ತದೆ. ಆದರೆ ಇದರಿಂದ ಜಿಲ್ಲೆಯಲ್ಲಿ ಮರಳಿನ ಕೊರತೆ ಸಾಮಾನ್ಯವಾಗಿ ಬಾಧಿಸುತ್ತದೆ. ಆದರೆ ಇದೀಗ ಮುಟ್ಟುಗೋಲು ಹಾಕಲಾದ ಮರಳನ್ನು ವಿಲೇ ಮಾಡುತ್ತಿರುವುದರಿಂದ ಈ ಬಾರಿ ಅಂತಹ ತೊಂದರೆ ಎದುರಾಗದು. ಸಿಆರ್ಝೆಡ್ ವ್ಯಾಪ್ತಿಗೊಳಪಡುವ ಪ್ರದೇಶಗಳಿಂದ ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ 2,360 ಲೋಡ್ ಹಾಗೂ ಸಿಆರ್ಝೆಡೇತರ ಪ್ರದೇಶಗಳಲ್ಲಿ ದಾಸ್ತಾನು ಇರಿಸಿದ್ದ 2,064 ಲೋಡ್ ಮರಳನ್ನು ಇಲಾಖೆ ಮುಟ್ಟುಗೋಲು ಹಾಕಿತ್ತು. ಅದನ್ನೀಗ ಹರಾಜು ಪ್ರಕ್ರಿಯೆ ನಡೆಸಿ ಪರವಾನಿಗೆದಾರರಿಗೆ ವಿತರಿಸಲಾಗುತ್ತಿದೆ’’ ಎಂದು ನಾಗೇಂದ್ರಪ್ಪ ಹೇಳಿದ್ದಾರೆ. ದ.ಕ.ಜಿಲ್ಲೆಯು ಸಿಆರ್ಝೆಡ್ ಹಾಗೂ ಸಿಆರ್ಝೆಡೇತರ 680 ಎಕರೆ ಪ್ರದೇಶಗಳು ಮರಳುಗಾರಿಕಾ ವ್ಯಾಪ್ತಿಯನ್ನು ಹೊಂದಿದೆ. ಜಿಲ್ಲೆಯಲ್ಲಿ ಸಿಆರ್ಝೆಡ್ ವ್ಯಾಪ್ತಿಯಲ್ಲಿ ಒಟ್ಟು 427 ಮಂದಿ ಮರಳುಗಾರಿಕೆ ಪರವಾನಿಗೆದಾರರಿದ್ದಾರೆ. ವಾರ್ಷಿಕ ಈ ಮರಳುಗಾರಿಕೆ ಪ್ರದೇಶಗಳಿಂದ ಒಟ್ಟು 79,813 ಲೋಡ್ ಮರಳು ಎತ್ತಲು ಅವಕಾಶವಿದ್ದು, ಪರವಾನಿಗೆದಾರರೊಬ್ಬರಿಗೆ ವಾರ್ಷಿಕ ಅಂದಾಜು 250 ಲೋಡ್ ಮರಳುಗಾರಿಕೆಗೆ ಅವಕಾಶವಿದೆ ಎಂದು ನಾಗೇಂದ್ರಪ್ಪ ವಿವರ ನೀಡಿದ್ದಾರೆ.
2015-16ರಲ್ಲಿ 2.55 ಕೋ.ರೂ. ದಂಡ ಸಂಗ್ರಹ
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಅಕ್ರಮ ಮರಳು ಗಾರಿಕೆ, ಸಾಗಾಟ ಸೇರಿದಂತೆ ವಿವಿಧ ದಾಳಿಗಳ ಮೂಲಕ 2015-16ನೆ ಸಾಲಿನಲ್ಲಿ 1,443 ಪ್ರಕರಣಗಳನ್ನು ದಾಖ ಲಿಸಿ 2.53 ಕೋ.ರೂ. ದಂಡ ಸಂಗ್ರಹ ಮಾಡಿದೆ. ದಾಖ ಲಾದ ಪ್ರಕರಣಗಳಲ್ಲಿ 44 ಪ್ರಕರಣಗಳ ವಿರುದ್ಧ ಎಫ್ಐಆರ್ ಕೂಡಾ ದಾಖಲಾಗಿತ್ತು. ಪ್ರಸಕ್ತ ಸಾಲಿನ (2016-17ನೆ) ಎಪ್ರಿಲ್ನಿಂದ ಜೂನ್ವರೆಗೆ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿ ಒಟ್ಟು 478 ಪ್ರಕರಣಗಳು ದಾಖಲಾಗಿದ್ದು, 44 ಪ್ರಕರಣಗಳಿಗೆ ಎಫ್ಐಆರ್ ದಾಖ ಲಾಗಿದೆ. ಈ ಅವಧಿಯಲ್ಲಿ ಒಟ್ಟು 46.990 ಲಕ್ಷ ರೂ. ದಂಡ ಸಂಗ್ರಹವಾಗಿದೆ ಎಂದು ನಾಗೇಂದ್ರಪ್ಪ ಮಾಹಿತಿ ನೀಡಿದ್ದಾರೆ.
ಜೂ.15ರಿಂದ ಮರಳುಗಾರಿಕೆ ನಿಷೇಧಿಸಲ್ಪಟ್ಟಾಗಿನಿಂದ ಇಲಾಖೆಯು ಜಿಲ್ಲೆಯ ವಿವಿಧೆಡೆಗಳಲ್ಲಿ ಮುಟ್ಟುಗೋಲು ಹಾಕಿದ್ದ ಮರಳು ದಾಸ್ತಾನನ್ನು ವಿಲೇ ಮಾಡುವ ಸಂಬಂಧ ಜು.12ರಂದು ಬಹಿರಂಗ ಹರಾಜು ನಡೆಸಲಾಗಿದೆ. ಈ ಮರಳನ್ನು ಜಿಲ್ಲೆಯ ಸ್ಥಳೀಯ ಬಳಕೆಗೆ ಮಾತ್ರ ಸಾಗಾಟ ಮಾಡಬೇಕೆಂಬ ಶರತ್ತಿನೊಂದಿಗೆ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಹರಾಜಿನಲ್ಲಿ ಭಾಗವಹಿಸಿ ರಾಜಧನ ಪಾವತಿಸಿದ ಮರಳು ಸಾಗಾಟ ಪರವಾನಿಗೆದಾರರಿಗೆ ಮರಳನ್ನು ನೀಡಲಾಗುತ್ತಿದೆ. ಜು.20ರಂದು 113 ಲೋಡ್ ಹಾಗೂ ಜು.21ರಂದು 90 ಲೋಡ್ ಮರಳನ್ನು ವಿಲೇ ಮಾಡಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಭಾರ ಉಪನಿರ್ದೇಶಕ ಕೆ.ಎಸ್. ನಾಗೇಂದ್ರಪ್ಪ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.