ಉಡುಪಿ ‘ಮನೆ ಬೆಳಕು ಯೋಜನೆ’ ಅನುಷ್ಠಾನ
ಬಡ ವಿದ್ಯಾರ್ಥಿಗಳ ಮನೆಗೆ ಸೌರ ವಿದ್ಯುತ್ ಸೌಲಭ್ಯ

ಉಡುಪಿ, ಜು.22: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಕರ್ಣಾಟಕ ಬ್ಯಾಂಕ್ ಮತ್ತು ಸೆಲ್ಕೋ ಫೌಂಡೇಶನ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಬಡ ವಿದ್ಯಾರ್ಥಿಗಳಿಗೆ ಮನೆ ಬೆಳಕು ಯೋಜನೆ ಅನುಷ್ಠಾನ ಕಾರ್ಯಕ್ರಮ ಸಗ್ರಿಯಲ್ಲಿರುವ ಬಾದಾಮಿಯ ವಾಲೇಕರ್ ಸಹೋದರರ ಮನೆಯಲ್ಲಿ ಜರಗಿತು.
ವಿದ್ಯಾರ್ಥಿಗಳಿರುವ, ವಿದ್ಯುತ್ ಇಲ್ಲದ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮನೆಗಳಿಗೆ ಸೋಲಾರ್ ವಿದ್ಯುತ್ ಒದಗಿಸುವ ‘ಮನೆ ಬೆಳಕು ಯೋಜನೆ’ಯ ಮೊದಲ ಹಂತದಲ್ಲಿ ಉಡುಪಿ ಜಿಲ್ಲೆಯ 100ಮನೆಗಳಿಗೆ ಸೌರ ವಿದ್ಯುತ್ ಅಳವಡಿಸಲಾಗಿದ್ದು, ಇದನ್ನು ಸಗ್ರಿಯಲ್ಲಿರುವ ವಲಸೆ ಕಾರ್ಮಿಕ ಲೆಂಕ್ಯಾಪ್ಪ ವಾಲೇಕಾರ್ ಹಾಗೂ ಶ್ರೀಕಾಂತ್ ವಾಲೇಕಾರ್ ಮನೆಯಲ್ಲಿ ಕರ್ಣಾಟಕ ಬ್ಯಾಂಕ್ನ ಮುಖ್ಯಮಹಾಪ್ರಬಂಧಕ ಎಂ.ಮಹಾ ಬಲೇಶ್ವರ ಭಟ್ ಅನುಷ್ಠಾನಗೊಳಿಸಿದರು.
ಕಳೆದ ನವೆಂಬರ್ನಲ್ಲಿ ಜಾರಿಯಾದ ಈ ಯೋಜನೆಗೆ ಕರ್ಣಾಟಕ ಬ್ಯಾಂಕ್ ಪ್ರತೀ ಮನೆಗೆ 5 ಸಾವಿರ ರೂ. ನಂತೆ 100 ಮನೆಗಳಿಗೆ 5 ಲಕ್ಷ ರೂ. ಮತ್ತು ಭಾರತೀಯ ವಿಕಾಸ ಟ್ರಸ್ಟ್ ತಲಾ 500 ರೂ. ಸಹಾಯಧನ ಒದಗಿಸಿದೆ. ಈ ಯೋಜನೆ ದುರುಪಯೋಗವಾಗದಂತೆ ಪ್ರತೀ ಫಲಾನುಭವಿಗಳಿಂದ 4,000 ರೂ. ಪಡೆದುಕೊಳ್ಳಲಾಗಿದೆ. 9,500 ರೂ. ಮೊತ್ತದ ಈ ಯೋಜನೆಯಲ್ಲಿ ಒಂದು ಮನೆಗೆ 2 ಲೈಟ್, ಸೋಲಾರ್ ಪ್ಯಾನೆಲ್ ಹಾಗೂ ಬ್ಯಾಟರಿ ಒದಗಿಸಲಾಗುತ್ತದೆ.
ಲೆಂಕ್ಯಾಪ್ಪ ವಾಲೇಕರ್ ಕಳೆದ 21 ವರ್ಷಗಳಿಂದ ಸಗ್ರಿಯಲ್ಲಿ ವಾಸವಾಗಿದ್ದು, ಕತ್ತಲಲ್ಲಿ ತಮ್ಮ ಬದುಕು ನಡೆಸುತ್ತಿದ್ದರು. ಕೂಲಿ ಕಾರ್ಮಿಕರಾಗಿರುವ ಲೆಂಕ್ಯಾಪ್ಪ ಹಾಗೂ ಶಾಂತಾ ದಂಪತಿಗೆ 5ನೆ ತರಗತಿ ಕಲಿಯುವ ಗಣೇಶ್ ಹಾಗೂ 2ನೆ ತರಗತಿಯ ಕಮಲಾಕ್ಷಿ ಎಂಬ ಇಬ್ಬರು ಮಕ್ಕಳಿದ್ದಾರೆ. ಅದೇ ರೀತಿ ಶ್ರೀಕಾಂತ್ ವಾಲೇಕರ್ ಹಾಗೂ ರೇಣುಕಾ ದಂಪತಿಗೆ 2 ನೆ ತರಗತಿ ಕಲಿಯುವ ಪ್ರವೀಣ್ ಎಂಬ ಮಗನಿದ್ದಾನೆ. ಈ ಮಕ್ಕಳು ಸಗ್ರಿ ನೋಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಸೆಲ್ಕೋ ಸೋಲಾರ್ ಲೈಟ್ನ ಉಪ ಮಹಾಪ್ರಬಂಧಕ ಜಗದೀಶ್ ಪೈ, ಟ್ರಸ್ಟ್ನ ಆಡಳಿತ ಟ್ರಸ್ಟಿ ಕೆ.ಎಂ.ಉಡುಪ, ಫಲಾನುಭವಿಗಳ ಹೆಸರನ್ನು ಈ ಯೋಜನೆಗೆ ಸೂಚಿಸಿದ ಸಗ್ರಿಯ ಕೃಷ್ಣ ಹೆಬ್ಬಾರ್ ಹಾಗೂ ಜ್ಯೋತಿ ಹೆಬ್ಬಾರ್ ಉಪಸ್ಥಿತರಿದ್ದರು.
ಟ್ರಸ್ಟ್ನ ಸಲಹೆಗಾರ ಅನಂತರ ಪ್ರಭು ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಹರ್ ಕಟ್ಗೇರಿ ವಂದಿಸಿದರು. ಪಿ.ಕೃಷ್ಣಾನಂದ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
‘ವಿದ್ಯುತ್ ಇಲ್ಲದಾಗ ಕತ್ತಲಾಗುವ ಮೊದಲೇ ಓದು ಮುಗಿಸಿ ಮಲಗುತ್ತಿದ್ದೆ. ಈಗ ರಾತ್ರಿ 9 ಗಂಟೆಯವರೆಗೂ ಓದುತ್ತಿದ್ದೇನೆ. ಮುಂದೆ ಓದಿ ಇಂಜಿನಿಯರ್ ಆಗಬೇಕೆಂಬುದು ನನ್ನ ಆಸೆ’
-ಗಣೇಶ್, ವಿದ್ಯಾರ್ಥಿ
‘ಮೊದಲು ಕತ್ತಲಲ್ಲಿಯೇ ಬದುಕು ನಡೆಸುತ್ತಿದ್ದ ನಮಗೆ ಈ ಯೋಜನೆಯಿಂದ ಕಳೆದ 5 ತಿಂಗಳುಗಳಿಂದ ಬೆಳಕು ಬಂದಿದೆ. ಶಾಲೆಗೆ ಹೋಗುವ ಮನೆಯ ಮಕ್ಕಳಿಗೆ ಇದರಿಂದ ತುಂಬಾ ಅನುಕೂಲವಾಗಿದೆ’
-ಲೆಂಕ್ಯಾಪ್ಪ ವಾಲೇಕರ್, ಸಗ್ರಿ ನಿವಾಸಿ





