ಸಮಗ್ರ ಮೀನುಗಾರಿಕೆ- ಕ್ರೀಡಾ ನೀತಿ ಜಾರಿಗೆ ಪ್ರಯತ್ನ: ಪ್ರಮೋದ್ ಮಧ್ವರಾಜ್
ದ.ಕ. ಜಿಲ್ಲಾ ಸಮಸ್ತ ಮೊಗವೀರ ಸಂಘಟನೆಗಳಿಂದ ಅಭಿನಂದನೆ
ಮಂಗಳೂರು,ಜು.23: ಕರಾವಳಿಯಲ್ಲಿ ಮತ್ಸಕ್ಷಾಮ ತಲೆದೋರದಂತೆ ಸಮಗ್ರ ಮೀನುಗಾರಿಕಾ ನೀತಿ ಹಾಗೂ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗಾಗಿ ಸಮಗ್ರ ಕ್ರೀಡಾ ನೀತಿಯೊಂದನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ರಾಜ್ಯದ ನೂತನ ಯುವಜನ ಸೇವಾ ಮತ್ತು ಕ್ರೀಡೆ ಹಾಗೂ ಮೀನುಗಾರಿಕಾ ಸಚಿವರಾಗಿರುವ ಪ್ರಮೋದ್ ಮಧ್ವರಾಜ್ ಭರವಸೆ ನೀಡಿದ್ದಾರೆ.
ನಗರದ ಪುರಭವನದಲ್ಲಿ ಇಂದು ದ.ಕ. ಜಿಲ್ಲಾ ಸಮಸ್ತ ಮೊಗವೀರ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಲಾದ ಅಭಿನಂದನೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಸಮಗ್ರ ಮೀನುಗಾರಿಕಾ ನೀತಿಯನ್ನು ಕೇವಲ ಕರ್ನಾಟಕಕ್ಕೆ ಮಾತ್ರ ಮಾಡಲಾಗದು. ಸಮುದ್ರದಲ್ಲಿ ಯಾವುದೇ ಗಡಿ ಸೀಮೆ ಇಲ್ಲದಿರುವುದರಿಂದ ಕೇಂದ್ರ ಸರಕಾರವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲಾ ರಾಜ್ಯಗಳ ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸಿ ಸಮಗ್ರ ಮೀನುಗಾರಿಕಾ ನೀತಿ ಜಾರಿಗೊಳಿಸಬೇಕಿದೆ. ಕ್ರೀಡೆಗೆ ಸಂಬಂಧಿಸಿ ಈಗಾಗಲೇ ಕರ್ನಾಟಕದಲ್ಲಿ ಕ್ರೀಡಾ ನೀತಿ ರೂಪಿಸಲು ಸಮಿತಿ ರಚನೆಯಾಗಿದ್ದರೂ ವರದಿ ನೀಡಿಲ್ಲ. ತನ್ನ ಅವಧಿಯಲ್ಲಿ ಕ್ರೀಡಾ ನೀತಿಯನ್ನು ಕೂಡಾ ಜಾರಿಗೊಳಿಸಲು ಪ್ರಯತ್ನಿಸುವುದಾಗಿ ಅವರು ಹೇಳಿದರು.
ಮಂಗಳೂರು ಮೀನು ಮಾರುಕಟ್ಟೆ ಸಮಸ್ಯೆಗೆ ಪರಿಹಾರ
ಮಂಗಳೂರು ಮೀನು ಮಾರುಕಟ್ಟೆ ಸಮಸ್ಯೆ ತಾನು ಮೀನುಗಾರಿಕಾ ಮಹಾಸಭಾದ ಅಧ್ಯಕ್ಷನಾದಾಗಿನಿಂದ ಕೇಳುತ್ತಿದ್ದೇನೆ. ಆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸ್ಥಳೀಯ ಶಾಸಕರ ಜತೆ ವಿಚಾರ ವಿನಿಮಯ ಮಾಡಿ ಕ್ರಮ ಕೈಗೊಳ್ಳುವುದಾಗಿ ಸಚಿವ ಪ್ರಮೋದ್ ಹೇಳಿದರು.
ಕಾರ್ಯಕ್ರಮವನ್ನು ಉಡುಪಿ ಶ್ಯಾಮಿಲಿ ಟ್ರಸ್ಟ್ನ ಅಧ್ಯಕ್ಷ ಹಾಗೂ ಮೊಗವೀರ ಮುಖಂಡ ನಾಡೋಜ ಜಿ. ಶಂಕರ್ ಉದ್ಘಾಟಿಸಿ, ಎಲ್ಲಾ ರಾಜಕೀಯ ಪಕ್ಷಗಳು ಪ್ರಾತಿನಿಧ್ಯ ನೀಡುವಾಗ ಜಾತಿಯನ್ನು ಗಣನೆಗೆ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಅಪಾರ ಸಂಖ್ಯೆಯಲ್ಲಿರುವ ಮೊಗವೀರ ಸಮುದಾಯ ಸಂಘಟಿತರಾಗಬೇಕಿದೆ ಎಂದರು.
ಸಚಿವರಾಗಿ ಪ್ರಮೋದ್ ಮಧ್ವರಾಜ್ ಮೊಗವೀರ ಸಮುದಾಯ ಮಾತ್ರವಲ್ಲದೆ ಮೀನುಗಾರಿಕೆಯಲ್ಲಿ ತೊಡಗಿರುವ ಇತರ ಸಮುದಾಯದವರನ್ನೂ ಒಗ್ಗೂಡಿಸಿ ಅವರ ಎಲ್ಲಾ ರೀತಿಯ ಬವಣೆಗಳನ್ನು ಬಗೆಹರಿಸಬೇಕೆಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ದ.ಕ. ಜಿಲ್ಲೆಯ ಅಭಿವೃದ್ಧಿಯಲ್ಲಿ ಮೊಗವೀರ ಸಮುದಾಯದ ತ್ಯಾಗ ಮಹತ್ತರದ್ದಾಗಿದೆ. ಅವರ ತ್ಯಾಗದ ಪರಿಣಾಮವಾಗಿಯೇ ಇಂದು ಕೆಆರ್ಇಸಿ, ಎನ್ಎಂಪಿಟಿ, ಎಂಸಿಎಫ್, ಎಂಆರ್ಪಿಎಲ್, ನಾಗಾರ್ಜುನ ಮೊದಲಾದ ಬೃಹತ್ ಉದ್ದಿಮೆಗಳು ಜಿಲ್ಲೆಗೆ ಕಾಲಿಡಲು ಸಾಧ್ಯವಾಗಿದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ವಿಧಾನ ಪರಿಷತ್ನ ಮುಖ್ಯ ಸಚೇತಕ ಐವನ್ ಡಿಸೋಜ, ಶಾಸಕ ಜೆ.ಆರ್. ಲೋಬೊ, ಬಿ.ಎ. ಮೊಯ್ದಿನ್ ಬಾವ ಮಾತನಾಡಿ ಶುಭ ಹಾರೈಸಿದರು.
ಇದೇ ವೇಳೆ, ಪ್ರಸಕ್ತ ಸಾಲಿನ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಗಳಿಸಿದ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗಂಗಾಧರ ಹೊಸಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಯಶವಂತ ಮೆಂಡನ್ ಸಚಿವ ಪ್ರಮೋದ್ ಮಧ್ವರಾಜ್ರನ್ನು ಅಭಿನಂದಿಸಿ ಮಾತನಾಡಿದರು.
ವೇದಿಕೆಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ಹಿರಿಯಣ್ಣ ಟಿ., ದ.ಕ. ಮತ್ತು ಉಡುಪಿ ಮೀನು ಮಾರಾಟ ಮಂಡಳಿಯ ಅಧ್ಯಕ್ಷ ಯಶಪಾಲ್ ಸುವರ್ಣ, ಮಾಜಿ ಶಾಸಕ ಲಾಲಾಜಿ ಮೆಂಡನ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮೊಗವೀರ ಸಮುದಾಯದ ನಾಯಕರಾದ ರಾಜೀವ್ ಕಾಂಚನ್ ತಣ್ಣೀರುಬಾವಿ, ಸರಳ ಕಾಂಚನ್, ಅಹಲ್ಯ ಎಸ್. ಕಾಂಚನ್, ವಾಸುದೇವ ಬೋಳೂರು, ನಿತಿನ್ ಕುಮಾರ್, ಶರತ್ ಗುಡ್ಡೆಕೊಪ್ಲ, ದಿವಾಕರ ಕಾಂಚನ್, ಚೇತನ್ ಬೆಂಗ್ರೆ, ಕವಿತಾ ವಾಸು, ಮೀರಾ ಕರ್ಕೇರ, ಲತಾ ಸಾಲ್ಯಾನ್, ಲೋಕನಾಥ ಬೋಳಾರ, ಕೇಶವ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.
ಮೊಗವೀರ ಯುವ ವೇದಿಕೆಯ ಅಧ್ಯಕ್ಷ ಲೀಲಾಧರ್ ತಣ್ಣೀರುಬಾವಿ ಸ್ವಾಗತಿಸಿದರು. ವಿ.ಜಿ. ಪಾಲ್ ಕಾರ್ಯಕ್ರಮ ನಿರೂಪಿಸಿದರು.
ಭ್ರಷ್ಟಾಚಾರ ರಹಿತ ಆಡಳಿತದ ಭರವಸೆ ಈಡೇರಿಸುವೆ
ಮೀನುಗಾರ ಕೋಟಾದಲ್ಲಿ ತನಗೆ ರಾಜ್ಯದಲ್ಲಿ ಮಂತ್ರಿ ಸ್ಥಾನವನ್ನು ನೀಡಲಾಗಿದೆ. ಹಾಗಾಗಿ ಆ ಸಮುದಾಯದ ಅಭಿವೃದ್ದಿಯ ಜತೆಗೆ ಎಲ್ಲಾ ಪಕ್ಷಗಳು, ಸಮುದಾಯಗಳನ್ನು ಗಮನದಲ್ಲಿರಿಸಿಕೊಂಡು ಸಮಾಜದ ಋಣ ತೀರಿಸಲು ಪ್ರಯತ್ನಿಸುತ್ತೇನೆ. ಮಂತ್ರಿಯಾಗಿ ಆಯ್ಕೆಯಾದ ವೇಳೆ ಕಾಂಗ್ರೆಸ್ನ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಭ್ರಷ್ಟಾಚಾರ ರಹಿತ ಶುದ್ಧ ಹಸ್ತದ ಆಡಳಿತ ನೀಡುವ ಭರವಸೆ ನೀಡಿದ್ದು, ಅದನ್ನು ಈಡೇರಿಸುತ್ತೇನೆ ಎಂದು ಸಚಿವ ಪ್ರಮೋದ್ ಈ ಸಂದರ್ಭ ವಾಗ್ದಾನ ಮಾಡಿದರು.
ಬಿಜೆಪಿಯವರೂ ನನಗೆ ಓಟು ಹಾಕಿದ್ದಾರೆ!
ಕಾಂಗ್ರೆಸ್ ಪಕ್ಷದಿಂದ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದ 31 ಮಂದಿಯಲ್ಲಿ ನನ್ನನ್ನು ಸೇರಿದಂತೆ 2 ಸಚಿವನಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಮುಖಮಂತ್ರಿ ಸಿದ್ಧರಾಮಯ್ಯನವರು ನನಗೆ ನೀಡಿದ್ದಾರೆ. ವಿಧಾನಸಭಾ ಚುನಾಣೆಯಲ್ಲಿ ನಾನು 40,000 ಮತಗಳ ಅಂತರದಿಂದ ಗೆಲ್ಲಲು ಬಿಜೆಪಿಯವರೂ ನನಗೆ ಓಟು ಹಾಕಿದ್ದರಿಂದ ಸಾಧ್ಯವಾಗಿದೆ. ಆದ್ದರಿಂದ ನಾನು ಪಕ್ಷ, ಜಾತಿ ಸಮುದಾಯದ ತಾರತಮ್ಯವಿಲ್ಲದೆ ನನ್ನ ಜವಾಬ್ಧಾರಿ ನಿರ್ವಹಿಸುವುದಾಗಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
3 ವರ್ಷ ಸೇವೆ ಸಲ್ಲಿಸುವ ಅವಕಾಶ: ಅಭಯ
ಮಾಜಿ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲೇ ಮೊಗವೀರ ಸಮುದಾಯದ ಜನಪ್ರತಿನಿಧಿಗೆ ಮೀನುಗಾರಿಕಾ ಸಚಿವನ ಸ್ಥಾನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನೀಡುವ ಮೂಲಕ ಸಮುದಾಯಕ್ಕೆ ನ್ಯಾಯ ಒದಗಿಸಿದ್ದಾರೆ ಎಂದರು.
ತನಗೂ ಮೂರು ವರ್ಷಗಳ ಕಾಲ ಸಚಿವನಾಗಿ ಸೇವೆಗೆ ಅವಕಾಶ ನೀಡಿದ ಮುಖ್ಯಮಂತ್ರಿಯವರು, ಯಾವುದೇ ರೀತಿಯಲ್ಲಿ ಹಸ್ತಕ್ಷೇಪವನ್ನು ಅವರು ಮಾಡಿರಲಿಲ್ಲ ಎಂದು ಮಾಜಿ ಸಚಿವ ಅಭಯ ನುಡಿದರು.