ಕೇರಳ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ: ರಮೇಶ್ ಚೆನ್ನಿತ್ತಲ
![ಕೇರಳ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ: ರಮೇಶ್ ಚೆನ್ನಿತ್ತಲ ಕೇರಳ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ: ರಮೇಶ್ ಚೆನ್ನಿತ್ತಲ](https://www.varthabharati.in/sites/default/files/images/articles/2016/07/23/chennitala.jpg)
ಕಾಸರಗೋಡು, ಜು.23: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ. ನೆಮ್ಮದಿಯಿಂದ ಮನೆಯಲ್ಲಿ ನಿದ್ರಿಸಲಾಗದ ಪರಿಸ್ಥಿತಿ ತಲೆದೋರಿದೆ ಎಂದು ಕೇರಳ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ.
ಶನಿವಾರ ಕಾಸರಗೋಡು ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಕಣ್ಣೂರಿನಲ್ಲಿ ನಡೆದ ಕೊಲೆ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳು ಈ ಆರೋಪಕ್ಕೆ ಸಾಕ್ಷಿ. ಎಲ್ಡಿಎಫ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ 48 ಕೊಲೆಗಳು ನಡೆದಿದೆ ಎಂದು ಹೇಳಿದರು.
ಬೆಲೆ ಏರಿಕೆಯಿಂದ ರಾಜ್ಯದ ಜನತೆ ತತ್ತರಿಸುವಂತಾಗಿದೆ. ಜುಲೈ 8ರಂದು ಮಂಡಿಸಿದ ಮುಂಗಡಪತ್ರದಲ್ಲಿ ಜನಸಾಮಾನ್ಯರ ಮೇಲೆ 805 ಕೋಟಿ ರೂ . ಗಳ ಅಧಿಕ ಹೊರೆ ಹೊರಿಸಲಾಗಿದೆ. ಸರಕು ಸಾಗಾಟ ವೆಚ್ಚ, ತೆರಿಗೆ ಹೆಚ್ಚಿಸಲಾಗಿದೆ. ಇದು ಮತ್ತಷ್ಟು ಬೆಲೆ ಏರಿಕೆಗೆ ಕಾರಣವಾಗಿದೆ ಎಂದರು.
ಅತೀವೇಗ ರೈಲ್ವೆ ಯೋಜನೆಯಲ್ಲಿ ಕಾಸರಗೋಡು ಜಿಲ್ಲೆಯನ್ನು ಕೈಬಿಟ್ಟಿರುವುದಕ್ಕೆ ರಾಜ್ಯ ಸರಕಾರದ ನಿರ್ಲಕ್ಷ ಕಾರಣವಾಗಿದೆ. ರೈಲನ್ನು ಮಂಗಳೂರು ತನಕ ವಿಸ್ತರಿಸಲು ಸರಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಹೇಳಿದರು .
ಈ ಸಂದರ್ಭ ಯುಡಿಎಫ್ ಜಿಲ್ಲಾ ಸಂಚಾಲಕ ಚೆರ್ಕಳಂ ಅಬ್ದುಲ್ಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಕೆ. ಶ್ರೀಧರನ್, ಸಿ.ಟಿ. ಅಹ್ಮದಾಲಿ, ಪಿ.ಎ. ಅಶ್ರಫಾಲಿ, ಕೆ.ನೀಲಕಂಠನ್ ಮೊದಲಾದವರು ಉಪಸ್ಥಿತರಿದ್ದರು.