ಅಪಘಾತಗಳಿಂದ ಹೆಚ್ಚುತ್ತಿರುವ ಸಾವಿನ ಪ್ರಮಾಣ: ಕಳವಳ
ಮೋಟಾರು ವಾಹನ ಕಾಯ್ದೆ ಹಾಗೂ ಮಕ್ಕಳ ಹಕ್ಕು ಕಾಯ್ದೆ ಕುರಿತು ಮಾಹಿತಿ
![ಅಪಘಾತಗಳಿಂದ ಹೆಚ್ಚುತ್ತಿರುವ ಸಾವಿನ ಪ್ರಮಾಣ: ಕಳವಳ ಅಪಘಾತಗಳಿಂದ ಹೆಚ್ಚುತ್ತಿರುವ ಸಾವಿನ ಪ್ರಮಾಣ: ಕಳವಳ](https://www.varthabharati.in/sites/default/files/images/articles/2016/07/23/kanunu-mahithi.jpg)
ಸುಳ್ಯ, ಜು.23: ಕಾನೂನು ಮಾಹಿತಿ ಕಾರ್ಯಾಗಾರವು ಸುಳ್ಯದ ಗ್ರೀನ್ವ್ಯೆ ಶಾಲಾ ಸಭಾಂಗಣದಲ್ಲಿ ನಡೆಯಿತು.
ತಾಲೂಕು ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಪೊಲೀಸ್, ಕಂದಾಯ, ಶಿಕ್ಷಣ ಇಲಾಖೆ ಹಾಗೂ ಗ್ರೀನ್ವ್ಯೆ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಾಗಾರವನ್ನು ಪುತ್ತೂರಿನ ಹಿರಿಯ ವಿಭಾಗದ ವ್ಯವಹಾರಿಕ ನ್ಯಾಯಾಧೀಶ ವಿ.ನಾಗರಾಜ್ ಡೋಲು ಬಾರಿಸುವ ಮೂಲಕ ಉದ್ಘಾಟಿಸಿದರು.
ಮಕ್ಕಳ ಶಿಕ್ಷಣ ಕಾಯ್ದೆಯಡಿ 14 ವರ್ಷದೊಳಗಿನ ಮಕ್ಕಳು ಶಾಲೆಯಿಂದ ಹೊರಗುಳಿದರೆ ಅಂತಹ ಪ್ರಕರಣಗಳನ್ನು ಬಾಲ ಕಾರ್ಮಿಕ ಎಂದು ಗುರುತಿಸಿ ಪೋಷಕರಿಗೆ 2 ವರ್ಷ ಶಿಕ್ಷೆ ವಿಧಿಸುವ ಅವಕಾಶವಿದೆ ಎಂದ ಅವರು, ಇಂದು ಕಾಯಿಲೆಗಳಿಂದ ಸಾಯುವುದಕ್ಕಿಂತ ಹೆಚ್ಚು ವಾಹನ ಅಪಘಾತಗಳಿಂದ ಜನರು ಸಾಯುತ್ತಿದ್ದಾರೆ. ನ್ಯಾಯಾಲಯಗಳಿಗೆ ಬರುವ ಹೆಚ್ಚಿನ ಕೇಸುಗಳು ಅಪಘಾತಗಳದ್ದೇ ಆಗಿದೆ ಎಂದರು.
ಅತಿಥಿಯಾಗಿದ್ದ ಸುಳ್ಯದ ಸಿವಿಲ್ ನ್ಯಾಯಾಧೀಶ ಎಸ್.ಸರವಣನ್ ಕಾನೂನು ಸೇವಾ ಸಮಿತಿ ಹಾಗೂ ಪ್ರಾಧಿಕಾರಗಳ ಕುರಿತು ಮಾಹಿತಿ ನೀಡಿದರು. ಜನಸಾಮಾನ್ಯರಿಗೆ ಕಾನೂನುಗಳನ್ನು ಪರಿಚಯಿಸುವುದು, ಕಾನೂನು ತೊಡಕುಗಳನ್ನು ನಿವಾರಿಸುವುದು, ಅರ್ಜಿ ಸಲ್ಲಿಸಿದ ದುರ್ಬಲ ವರ್ಗದವರಿಗೆ ಉಚಿತವಾಗಿ ವಕೀಲರನ್ನು ನೇಮಕ ಮಾಡುವುದು ಇತ್ಯಾದಿ ಕಾರ್ಯಗಳನ್ನು ಕಾನೂನು ಸೇವಾ ಸಮಿತಿ ಮತ್ತು ಪ್ರಾಧಿಕಾರಗಳು ಮಾಡುತ್ತವೆ ಎಂದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಇಸ್ಮಾಯಿಲ್ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ನಳಿನ್ ಕುಮಾರ್ ಕೋಡ್ತುಗಳಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಗ್ರೀನ್ವ್ಯೆ ಶಾಲಾ ಯೋಜನಾಧಿಕಾರಿ ಕೆ.ಎಂ.ಮುಸ್ತಫಾ ಅತಿಥಿಯಾಗಿದ್ದರು.
ಮೋಟಾರು ವಾಹನ ವಿಮಾ ಪರಿಹಾರದ ಕುರಿತು ಶಾಲಾ ಸಂಚಾಲಕ ಬಿ.ಎಸ್.ಶರೀಫ್, ಮೋಟಾರು ವಾಹನ ಕಾಯ್ದೆ ಕುರಿತು ವಕೀಲ ಜಗದೀಶ್ ಹುದೇರಿ, ಮಕ್ಕಳ ಶಿಕ್ಷಣ ಕಾಯ್ದೆ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಕೆಂಪಲಿಂಗಪ್ಪ, ಮಕ್ಕಳ ಹಕ್ಕುಗಳ ಕುರಿತು ನಿವೃತ್ತ ಸಿಡಿಪಿಒ ನಾರಾಯಣ ನೀರಬಿದಿರೆ ಮಾಹಿತಿ ನೀಡಿದರು.
ಕಾನೂನು ಸಲಹೆಗಾರ ಎಂ.ಎಂ.ಬೊಳ್ಳಪ್ಪ, ನಾರಾಯಣ ಜಟ್ಟಿಪಳ್ಳ, ವೀಲಕ ಸಂಘದ ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಲು, ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಎಂ.ಮೊಯ್ದೀನ್, ಪ್ರಧಾನ ಕಾರ್ಯದರ್ಶಿ ಕೆ.ಬಿ.ಇಬ್ರಾಹೀಂ ವೇದಿಕೆಯಲ್ಲಿದ್ದರು. ಶಿಕ್ಷಕಿ ಸ್ನೇಹಲತಾ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಅಮರನಾಥ್ ಕಾರ್ಯಕ್ರಮ ನಿರೂಪಿಸಿದರು.