ಜಾಟ್ ಮೀಸಲಾತಿ ಹಿಂಸಾಚಾರ: ಪ್ರಕಾಶ್ ಸಿಂಗ್ ಸಮಿತಿ ಕುರಿತು ಸ್ಪಷ್ಟ ನಿಲುವಿಗೆ ಹರ್ಯಾಣ ಸರಕಾರಕ್ಕೆ ಹೈಕೋರ್ಟ್ ನಿರ್ದೇಶ
ಚಂಡೀಗಡ,ಜು.23: ಕಳೆದ ಫೆಬ್ರುವರಿಯಲ್ಲಿ ಜಾಟ್ ಮೀಸಲಾತಿ ಪ್ರತಿಭಟನೆ ಸಂದರ್ಭ ಸರಕಾರಿ ಅಧಿಕಾರಿಗಳ ಪಾತ್ರ ಕುರಿತು ತನಿಖೆ ನಡೆಸಿರುವ ಉತ್ತರ ಪ್ರದೇಶದ ಮಾಜಿ ಪೊಲೀಸ್ ಮುಖ್ಯಸ್ಥ ಪ್ರಕಾಶ್ ಸಿಂಗ್ ಸಮಿತಿಯ ವರದಿ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಶನಿವಾರ ಹರ್ಯಾಣ ಸರಕಾರಕ್ಕೆ ನಿರ್ದೇಶ ನೀಡಿದೆ.
ತನಗೆ ನೆರವಾಗಲು ನ್ಯಾಯಾಲಯವು ನೇಮಿಸಿಕೊಂಡಿರುವ ಅನುಪಮ್ ಗುಪ್ತಾ ಅವರು 10 ದಿನಗಳಿಗೂ ಅಧಿಕ ಕಾಲ ನಡೆದಿದ್ದ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಪೊಲೀಸ್ ವೈಫಲ್ಯದ ನಿದರ್ಶನಗಳನ್ನು ಓದಿ ಹೇಳಿದ ನಂತರ ನ್ಯಾ.ಎಸ್.ಎಸ್.ಸರನ್ ಅವರ ಪೀಠವು ಈ ಆದೇಶವನ್ನು ನೀಡಿತು.
ತ್ರಿಶಂಕು ಸ್ಥಿತಿಯಲ್ಲಿ ಮುರ್ಥಲ್ ಸಾಮೂಹಿಕ ಅತ್ಯಾಚಾರ ಪ್ರಕರಣ
ಜಾಟ್ ಪ್ರತಿಭಟನೆ ಸಂದರ್ಭ ಸೋನೆಪತ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮುರ್ಥಲ್ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಹರ್ಯಾಣ ಸರಕಾರವು ತ್ರಿಶಂಕು ಸ್ಥಿತಿಯನ್ನು ಕಾಣಿಸಿದಂತಿದೆ.
ಪ್ರಕರಣದಲ್ಲಿಯ ಸ್ಥಿತಿಗತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಆದರೆ ನ್ಯಾಯಾಲಯ ಮತ್ತು ಗುಪ್ತಾ ತೃಪ್ತಿಗೊಂಡಂತೆ ಕಂಡು ಬಂದಿಲ್ಲ. ಈವರೆಗೆ ಯಾವುದೇ ಅತ್ಯಾಚಾರ ಸಂತ್ರಸ್ತ ಮಹಿಳೆಯನ್ನು ಗುರುತಿಸುವಲ್ಲಿ ಸರಕಾರವು ವಿಫಲಗೊಂಡಿರುವುದರಿಂದ ಈ ವಿಷಯವನ್ನು ಸಿಬಿಐಗೆ ಒಪ್ಪಿಸುವ ಅಗತ್ಯವಿದೆ ಎಂದು ಗುಪ್ತಾ ನ್ಯಾಯಾಲಯಕ್ಕೆ ತಿಳಿಸಿದರು.