ಸಜಿಪಮೂಡ: ಗ್ರಾ.ಪಂ. ಸೂಚಿಸಿದ ಸ್ಥಳದಲ್ಲಿ ಸ್ಮಶಾನ ನಿರ್ಮಾಣಕ್ಕೆ ಡಿಸಿ ಆದೇಶ
![ಸಜಿಪಮೂಡ: ಗ್ರಾ.ಪಂ. ಸೂಚಿಸಿದ ಸ್ಥಳದಲ್ಲಿ ಸ್ಮಶಾನ ನಿರ್ಮಾಣಕ್ಕೆ ಡಿಸಿ ಆದೇಶ ಸಜಿಪಮೂಡ: ಗ್ರಾ.ಪಂ. ಸೂಚಿಸಿದ ಸ್ಥಳದಲ್ಲಿ ಸ್ಮಶಾನ ನಿರ್ಮಾಣಕ್ಕೆ ಡಿಸಿ ಆದೇಶ](https://www.varthabharati.in/sites/default/files/images/articles/2016/07/23/DSC_2160.jpg)
ಬಂಟ್ವಾಳ, ಜು. 23: ಸಜಿಪಮೂಡ ಗ್ರಾಮ ಪಂಚಾಯತ್ ಸೂಚಿಸಿರುವ ಸ್ಥಳದಲ್ಲೇ ಹಿಂದೂ ರುದ್ರಭೂಮಿಯನ್ನು ನಿರ್ಮಿಸಲು ಜಿಲ್ಲಾಧಿಕಾರಿ ಆದೇಶ ನೀಡಿದ್ದು, ಸಜಿಪಮೂಡ ಗ್ರಾಮದ ಹಿಂದೂ ರುದ್ರಭೂಮಿಗೆ ಸಂಬಂಧಿಸಿದ ಜಾಗದ ಸಮಸ್ಯೆಯ ವಿವಾದಕ್ಕೆ ತೆರೆಬಿದ್ದಿದೆ.
ಸಜಿಪಮೂಡ ಗ್ರಾಮದ ಸರ್ವೇ ನಂಬ್ರ 246 1ಎ -1ರಲ್ಲಿ 45 ಎಕರೆ ಸರಕಾರಿ ಜಮೀನನ್ನು ಸಾರ್ವಜನಿಕ ಸ್ಮಶಾನಕ್ಕಾಗಿ ಈ ಹಿಂದೆ ಕಾದಿರಿಸಲಾಗಿದ್ದು, ಈ ನಂಬರಿನ ಜಾಗದ ಆಯ್ಕೆಯ ಕುರಿತಂತೆ ನಕ್ಷೆಯಲ್ಲಿದ್ದ ಗೊಂದಲದ ಹಿನ್ನೆಲೆಯಲ್ಲಿ ಮರು ಅಳತೆ ಮತ್ತು ಸರ್ವೇ ನಡೆಸಿ ನಕ್ಷೆಯನ್ನು ಗುರುತಿಸಿದ ಹಿನ್ನೆಲೆಯಲ್ಲಿ ಹಿಂದೂ ರುದ್ರಭೂಮಿಯ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.
ಈಗಾಗಲೇ ಹಿಂದೂ ರುದ್ರಭೂಮಿಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಸಚಿವ ರಮಾನಾಥ ರೈ ಇಲ್ಲಿ ಶಿಲಾನ್ಯಾಸವನ್ನೂ ನೆರವೇರಿಸಿದ್ದರು. ಪಂಚಾಯತ್ ವತಿಯಿಂದಲೇ 4.20 ಲಕ್ಷ ರೂ. ವೆಚ್ಚದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸುಸಜ್ಜಿತವಾದ ಹಿಂದೂ ರುದ್ರಭೂಮಿಯನ್ನು ನಿರ್ಮಿಸಲಾಗುವುದು ಎಂದು ಸಜಿಪಮೂಡ ಗ್ರಾಮ ಪಂಚಾಯತ್ ಅಧ್ಯಕ್ಷ ಗಣಪತಿ ಭಟ್ ತಿಳಿಸಿದ್ದಾರೆ.