ಡಾ. ಸಬಿಹಾ ಭೂಮಿಗೌಡಗೆ ಅಭಿನಂದನೆ
![ಡಾ. ಸಬಿಹಾ ಭೂಮಿಗೌಡಗೆ ಅಭಿನಂದನೆ ಡಾ. ಸಬಿಹಾ ಭೂಮಿಗೌಡಗೆ ಅಭಿನಂದನೆ](https://www.varthabharati.in/sites/default/files/images/articles/2016/07/23/1-(2).jpg)
ಮಂಗಳೂರು, ಜು.23: ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ನೇಮಕಗೊಂಡಿರುವ ಡಾ. ಸಬಿಹಾ ಭೂಮಿಗೌಡರಿಗೆ ನಗರದ ಕರಾವಳಿ ಲೇಖಕಿಯರ- ವಾಚಕಿಯರ ಸಂಘದ ವತಿಯಿಂದ ಇಂದು ಅಭಿನಂದನಾ ಸಮಾರಂಭ ನಡೆಯಿತು.
ಉರ್ವಾಸ್ಟೋರ್ನ ಸಂಘದ ಸಾಹಿತ್ಯ ಸದನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರಾವಳಿ ಲೇಖಕಿಯರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಲೇಖಕಿಯರ ಸಂಘವು ಮಹಿಳಾ ಗುಂಪಿನ ಜತೆ ಭಾವನಾತ್ಮಕ ಸಂಬಂಧವನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದರು.
ಲೇಖಕಿಯರ ಸಂಘದಲ್ಲಿದ್ದು ತಾನು ಬರವಣಿಗೆಯ ಸಾಮರ್ಥ್ಯ ಇರುವ ಮಹಿಳೆಯರ ಸಾಮರ್ಥ್ಯ ಗುರುತಿಸಿ ಅವರ ಪ್ರತಿಭೆಯನ್ನು ಮುನ್ನೆಲೆಗೆ ತರುವ ಪ್ರಯತ್ನ ಮಾಡಿದ್ದೇನೆ. ಈ ನಡುವೆ ತನಗೆ ಸಂಘದ ಕಿರಿಯ ಹಾಗೂ ಹಿರಿಯ ಲೇಖಕಿಯರ ಜತೆಗಿನ ಒಡನಾಟವು ಅವಿಸ್ಮರಣೀಯ ಎಂದವರು ಹೇಳಿದರು.
ಹಿರಿಯ ಸಾಹಿತಿ ಸಾರಾ ಅಬೂಬಕರ್, ಸಾವಿತ್ರಿ ಎಂ. ಭಟ್, ಚಂದ್ರಕಲಾ ನಂದಾವರ, ಪ್ರೊ. ಭುವನೇಶ್ವರಿ ಹೆಗಡೆ, ಮಾಲತಿ, ಮನೋರಮಾ ಎಂ. ಭಟ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಅನುಪಮ ಮಾಸಿಕದ ಸಂಪಾದಕಿ ಶಹನಾಝ್, ಮೋಲಿ ಮಿರಾಂದ ಹಾಗೂ ಇನ್ನಿತರರು ಡಾ. ಸಬಿಹಾರ ಜತೆಗಿನ ಒಡನಾಟವನ್ನು ಹಂಚಿಕೊಂಡರು. ಗುಣವತಿ ರಮೇಶ್ ಅಭಿನಂದನಾ ಪತ್ರ ವಾಚಿಸಿದರು.
ಉಪನ್ಯಾಸಕಿ ಜ್ಯೋತಿ ಇರ್ವತ್ತೂರು ಕಾರ್ಯಕ್ರಮ ನಿರೂಪಿಸಿದರು.