ನೆಕ್ಕಿಲಾಡಿ: ಮತ್ತೊಮ್ಮೆ ಅಪಘಾತಕ್ಕೀಡಾಯಿತು ಜಿಲ್ಲಾಧಿಕಾರಿ ಪುತ್ರನಿದ್ದ ಕಾರು
ಉಪ್ಪಿನಂಗಡಿ, ಜು.23: ಶಿರಾಡಿ ಗ್ರಾಮದ ಕೊಡ್ಯಕ್ಕಲ್ ಎಂಬಲ್ಲಿ ಜಿಲ್ಲಾಧಿಕಾರಿಯವರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದರೆ, ಘಟನಾ ಸ್ಥಳದಿಂದ ಅವರ ಪುತ್ರ ಚಲಾಯಿಸಿಕೊಂಡು ಹೋಗಿದ್ದ ಮತ್ತೊಂದು ಫಾರ್ಚುನರ್ ಕೂಡಾ ಅಪಘಾತಕ್ಕೀಡಾಗಿದೆ.
ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿ ಬಳಿ ಅಪಘಾತ ಸಂಭವಿಸಿದೆ. ಜಿಲ್ಲಾಧಿಕಾರಿಯವರ ಕಾರು ಅಪಘಾತಕ್ಕೀಡಾಗಿ ಅವರ ಪತ್ನಿ ಗಾಯಗೊಂಡ ಕಾರಣ ಜಿಲ್ಲಾಧಿಕಾರಿಯವರು ಪತ್ನಿಯೊಂದಿಗೆ ಆ್ಯಂಬುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ಪ್ರಯಾಣಿಸಿದ್ದರು.
ಇತ್ತ ಕಾರಿನಲ್ಲಿದ್ದ ಜಿಲ್ಲಾಧಿಕಾರಿಯವರ ಮಗ 22 ವರ್ಷ ಪ್ರಾಯದ ರಝಾಕ್ ಅಪಘಾತಕ್ಕೀಡಾದ ಕಾರಿನಲ್ಲಿದ್ದ ಸಾಮಾನು ಸರಂಜಾಮುಗಳನ್ನು ನೆಲ್ಯಾಡಿಯ ರಬ್ಬರ್ ಉದ್ಯಮಿ ವರ್ಗೀಸ್ ಎಂಬವರ ಫಾರ್ಚೂನರ್ ಕಾರಿನಲ್ಲಿರಿಸಿ ಮಂಗಳೂರಿಗೆ ಹಿಂತಿರುಗುತ್ತಿದ್ದರು. ಉಪ್ಪಿನಂಗಡಿ ಸಮೀಪದ 34ನೆ ನೆಕ್ಕಿಲಾಡಿಯ ಮಸೀದಿ ಬಳಿ ಕಾರು ಸಂಚರಿಸುತ್ತಿದ್ದಾಗ ಎದುರುಗಡೆಯಿಂದ ಬಂದ ನ್ಯಾನೋ ಕಾರಿಗೆ ಢಿಕ್ಕಿ ಹೊಡೆಯಿತು. ಈ ಪರಿಣಾಮ ಫಾರ್ಚೂನರ್ ಕಾರಿನಲ್ಲಿದ್ದ ಜಿಲ್ಲಾದಿಕಾರಿಯವರ ಪುತ್ರ ರಝಾಕ್ ಯಾವುದೇ ಅಪಾಯವಿಲ್ಲದೆ ಪಾರಾದರೆ, ನ್ಯಾನೋ ಕಾರಿನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಧಾವಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.