ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ದಾಳಿ
![ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ದಾಳಿ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ದಾಳಿ](https://www.varthabharati.in/sites/default/files/images/articles/2016/07/24/bhat_240716_raid4.jpg)
ಮಂಗಳೂರು, ಜು.24: ಮಂಗಳೂರು ನಗರ ಪೊಲೀಸರು ಇಂದು ಜೈಲು ಅಧಿಕಾರಿಗಳ ಸಹಯೋಗದೊಂದಿಗೆ ಜಿಲ್ಲಾ ಕಾರಗೃಹದಲ್ಲಿ ದಿಡೀರ್ ದಾಳಿ ನಡೆಸಿ ಖೈದಿಗಳ ಬಳಿಯಿದ್ದ 2 ಮೊಬೈಲ್ ಪೋನ್ ಮತ್ತು 2 ಸಿಮ್ ವಶಪಡಿಸಿಕೊಂಡಿದ್ದಾರೆ.
ಕಾನೂನು ಸುವ್ಯವಸ್ಥೆ ಡಿಸಿಪಿ ಕೆ.ಎಂ ಶಾಂತರಾಜು ನೇತೃತ್ವದಲ್ಲಿ ಅಪರಾಧ ಮತ್ತು ಸಂಚಾರ ಡಿಸಿಪಿ ಡಾ.ಸಂಜೀವ್ ಪಾಟೀಲ್ , ನಗರದ ಎಲ್ಲಾ ಎಸಿಪಿ ಮತ್ತು ಇನ್ಸ್ಪೆಕ್ಟರ್ಗಳು ಮತ್ತು ಜೈಲು ಅಧಿಕಾರಿಗಳು ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
ಮುಂಜಾನೆ 5.40 ರಿಂದ 8 ಗಂಟೆಯವರೆಗೆ ಕಾರಾಗೃಹದಲ್ಲಿ ಶೋಧ ಕಾರ್ಯ ನಡೆಸಲಾಯಿತು.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಕಾನೂನು ಸುವ್ಯವಸ್ಥೆ ಡಿಸಿಪಿ ಕೆ.ಎಂ ಶಾಂತರಾಜು, ಇಂತಹ ದಿಡೀರ್ ದಾಳಿಯನ್ನು ಸಾಮಾನ್ಯವಾಗಿ ಮಾಡುತ್ತಲೆ ಇರುತ್ತೇವೆ. ಇಂದು ನಡೆದ ದಾಳಿಯಲ್ಲಿ ಎರಡು ಮೊಬೈಲ್ ಪೋನ್ ಮತ್ತು ಎರಡು ಸಿಮ್ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಮೊಬೈಲ್ ಜಾಮರ್ ಇದ್ದರೂ ಮೊಬೈಲ್ ಉಪಯೋಗ
ಮಂಗಳೂರು ಕಾರಗೃಹದಲ್ಲಿ ಕೆಲವು ತಿಂಗಳ ಹಿಂದೆ ಮೊಬೈಲ್ ಜಾಮರ್ ಅಳವಡಿಸಲಾಗಿತ್ತು. ಕಾರಾಗೃಹದಲ್ಲಿ ಡಬ್ಬಲ್ ಮರ್ಡರ್ ಘಟನೆ ನಡೆದ ನಂತರ ಜೈಲಿನಲ್ಲಿ ಮುಂದೆ ಯಾವುದೇ ಅನಾಹುತಗಳು ನಡೆಯಬಾರದೆಂದು ನಿರ್ಧರಿಸಿ ಮೊಬೈಲ್ ಜಾಮರ್ ಅಳವಡಿಸಲಾಗಿತ್ತು. ಅಲ್ಲದೆ ಮಂಗಳೂರು ಕಾರಗೃಹದ ಭದ್ರತೆಗೆ ರಾಜ್ಯ ಕೈಗಾರಿಕಾ ಭದ್ರತಾ ದಳವನ್ನು ನೇಮಿಸಲಾಗಿದೆ. ಸ್ಥಳೀಯ ಪೊಲೀಸರು ತಪಾಸಣೆಯನ್ನು ನಡೆಸುತ್ತಿದ್ದರು. ಇಷ್ಟೆಲ್ಲ ಇದ್ದರೂ ಜೈಲಿನಲ್ಲಿ ಖೈದಿಗಳು ಮೊಬೈಲ್ ಬಳಸುತ್ತಿರುವುದು ಸಾರ್ವಜನಿಕರಲ್ಲಿ ಅನುಮಾನಗಳನ್ನು ಸೃಷ್ಟಿಸಿದೆ.