ಮಂಗಳೂರು ಮನಪಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ
![ಮಂಗಳೂರು ಮನಪಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಂಗಳೂರು ಮನಪಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ](https://www.varthabharati.in/sites/default/files/images/articles/2016/07/24/bhat_240716_townhall9.jpg)
ಮಂಗಳೂರು, ಜು.24: ಮಂಗಳೂರು ಮಹಾನಗರ ಪಾಲಿಕೆಯಿಂದ 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು 1 ಕೋಟಿ ರೂ. ವೆಚ್ಚದಲ್ಲಿ ಬಂದರು ಕಸಬಾ ಬಜಾರ್ನಲ್ಲಿ ನಿರ್ಮಾಣಗೊಂಡಿರುವ ರಾತ್ರಿ ವಸತಿ ರಹಿತ ನಾಗರಿಕರಿಗೆ ವಸತಿ ವ್ಯವಸ್ಥೆಯ ನೆಲಂತಸ್ತಿನ ಕಟ್ಟಡವನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.
ಬಂದರು ಕಸಬಾ ಬಜಾರ್ನಲ್ಲಿ ರಾತ್ರಿ ವಸತಿ ರಹಿತ ನಾಗರಿಕರಿಗೆ ವಸತಿ ವ್ಯವಸ್ಥೆಯನ್ನು ಉದ್ಘಾಟಿಸಲಾಯಿತು. ನಗರದ ಪುರಭವನದಲ್ಲಿ 99.85 ಲಕ್ಷ ರೂ. ವೆಚ್ಚದಲ್ಲಿ ಭೋಜನ ಗೃಹ ನಿರ್ಮಿಸಲು, 50 ಲಕ್ಷ ರೂ. ವೆಚ್ಚದಲ್ಲಿ ಅಳಕೆ ಮಾರುಕಟ್ಟೆಯ ಮೊದಲನೆ ಹಂತದ ನಿರ್ಮಾಣ, 1ಕೋಟಿ ರೂ. ವೆಚ್ಚದಲ್ಲಿ ಕಾವೂರು ಮಾರುಕಟ್ಟೆಯ ಮೊದಲನೆ ಹಂತದ ನಿರ್ಮಾಣ, 1.5 ಕೋಟಿ ರೂ. ವೆಚ್ಚದಲ್ಲಿ ಕಾವೂರು ಜಂಕ್ಷನ್ ಅಭಿವೃದ್ದಿಗಾಗಿ ಶಿಲಾನ್ಯಾಸವನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಪುರಭವನದಲ್ಲಿ ಸಾಂಸ್ಕೃತಿಕ, ಕಲಾ, ಸರಕಾರಿ ಕಾರ್ಯಕ್ರಮಗಳು ಹಾಗೂ ಮದುವೆ ಸಮಾರಂಭ ಇನ್ನಿತರ ಕಾರ್ಯಕ್ರಮಗಳಿಗೆ ಒಳಾಂಗಣ ಸುಸಜ್ಜಿತಗೊಳಿಸಲಾಗಿತ್ತು. ಆದರೆ ಇಲ್ಲಿನ ಕಾರ್ಯಕ್ರಮಗಳಿಗೆ ಭೋಜನ ವ್ಯವಸ್ಥೆಗೆ ಭೋಜನ ಗೃಹದ ವ್ಯವಸ್ಥೆಯಿರಲಿಲ್ಲ. ಇದೀಗ 500 ಜನರಿಗೆ ಭೋಜನ ವ್ಯವಸ್ಥೆ ಕಲ್ಪಿಸಲು ಭೋಜನ ಗೃಹ ನಿರ್ಮಿಸಲು ಉದ್ದೇಶಿಸಲಾಗಿದೆ. ರಾತ್ರಿ ವಸತಿ ರಹಿತ ನಾಗರಿಕರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲು ನಿರ್ಣಯಿಸಿದಂತೆ ಇದೀಗ ನೆಲ ಅಂತಸ್ತಿನಲ್ಲಿ 75 ಜನರಿಗೆ ಬೇಕಾದ ಕಾಮಗಾರಿಯನ್ನು ಪೂರ್ಣಗೊಳಿಸಿ ಉದ್ಘಾಟಿಸಲಾಗಿದೆ ಎಂದರು.
ಅಳಕೆ ಮಾರುಕಟ್ಟೆ ಮತ್ತು ಕಾವೂರು ಮಾರುಕಟ್ಟೆ ನಿರ್ಮಾಣದ ಜೊತೆಗೆ ಕಾವೂರು ಜಂಕ್ಷನ್ ಅಭಿವೃದ್ದಿಗೂ ಮಹಾನಗರಪಾಲಿಕೆ ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಮಂಗಳೂರು ಮಹಾನಗರಪಾಲಿಕೆ ಮೇಯರ್ ಹರಿನಾಥ್, ಇಂದು ಶಂಕುಸ್ಥಾಪನೆ ನೆರವೇರಿಸಿರುವ ಎಲ್ಲಾ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಜೆ.ಆರ್. ಲೋಬೊ, ಮೊಯ್ದಿನ್ ಬಾವ, ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಮೂಡ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮನಪಾ ಕಮೀಷನರ್ ಮುಹಮ್ಮದ್ ನಝೀರ್, ಮನಪ ಉಪ ಆಯುಕ್ತ ಗೋಕುಲ್ ದಾಸ್ ನಾಯಕ್, ಸಚೇತಕ ಶಶಿಧರ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಲ್ಯಾನ್ಸ್ಲಾಟ್ಪಿಂಟೋ ಮೊದಲಾದವರು ಉಪಸ್ಥಿತರಿದ್ದರು.