ಮಂಗಳೂರಿನಲ್ಲೂ ನಡೆಯಲಿದೆ ಕೆಎಸ್ಸಾರ್ಟಿಸಿ ನೌಕರರ ಮುಷ್ಕರ

ಮಂಗಳೂರು, ಜು.24; ಖಾಸಗಿ ಬಸ್ಗಳ ಪ್ರಾಬಲ್ಯವಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕೆಎಸ್ಸಾರ್ಟಿಸಿ ನೌಕರರು ಇಂದು ಮಧ್ಯರಾತ್ರಿಯಿಂದಲೇ ಮುಷ್ಕರವನ್ನು ಆರಂಭಿಸಲು ನಿರ್ಧಸಿದ್ದಾರೆ.
ಮೂಲವೇತನದಲ್ಲಿ ಶೇ.35ರಷ್ಟು ಹೆಚ್ಚಿಸಬೇಕು, ವೈಟೇಜ್ ಫಾರ್ ಸರ್ವೀಸ್ ಬೇಡಿಕೆಯಲ್ಲಿದ್ದಂತೆ ಕೊಡಬೇಕು. ಎಲ್ಲಾ ಬಾಟ ಹಾಗೂ ಭತ್ಯೆಯನ್ನು ಬೇಡಿಕೆಯಲ್ಲಿದ್ದಂತೆ ಹೆಚ್ಚಿಸಬೇಕು, ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು, ಎನ್ಐಎನ್ಸಿ ಪ್ರಕರಣಗಳಲ್ಲಿ ನಿರ್ವಾಹಕರ ಮೇಲೆ ಯಾವುದೆ ಕ್ರಮ ತೆಗೆದುಕೊಳ್ಳಬಾರದು, ನಿರ್ವಾಹಕರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಗೊಳಿಸಬೇಕು, ಚಾಲಕರನ್ನು ಅಪಘಾತ ಪ್ರಕರಣಗಳಲ್ಲಿ ಹೊಣೆಯನ್ನಾಗಿ ಮಾಡಬಾರದು, ಫಾರಂ 4ನ್ನು ಕಾನೂನಿನಂತೆ ಪುನರ್ರೂಪಿಸಬೇಕು, ಚಾಲಕ ನಿರ್ವಾಹಕರಿಗೆ ರನ್ನಿಂಗ್ ಟೈಮ್ನಂತೆ ವೇತನವನ್ನು, ಒಟಿಯನ್ನು ಕೊಡಬೇಕು, ಚಾಲಕ ಕಂ ನಿರ್ವಾಹಕರಿಗೆ ಅವರು ಇಚ್ಛೆಪಡುವ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಬೇಕು. ಇನ್ನು ಮುಂದೆ ಚಾಲಕ ಕಂ ನಿರ್ವಾಹಕ ಹುದ್ದೆ ರದ್ದು ಮಾಡಬೇಕು, ಚಾಲಕರು,ನಿರ್ವಾಹಕರು, ಯಾಂತ್ರಿಕ ಸಿಬ್ಬಂದಿಯ ವೇತನದಲ್ಲಿ ಅಕ್ರಮ ಕಡಿತ ಪೂರ್ಣವಾಗಿ ರದ್ದು ಮಾಡಬೇಕು, ಮಹಿಳೆಯರಿಗೆ ಎಲ್ಲಾ ಕಡೆ ವಿಶ್ರಾಂತಿ ಗೃಹ ಮತ್ತು ಕ್ರೀಚ್ ನಿರ್ಮಿಸುವುದು ಮತ್ತು ಮಹಿಳೆಯರಿಗೆ ಕಾರ್ಯಸ್ಥಾನದಲ್ಲಿ ಕಿರುಕುಳ ತಪ್ಪಬೇಕು, ಟ್ರೈನಿ ಪದ್ದತಿಯನ್ನು ರದ್ದು ಮಾಡಬೇಕು, ತರಬೇತಿದಾರರನ್ನು ಕೆಲಸಕ್ಕೆ ಸೇರಿದ ದಿನದಿಂದ ಖಾಯಂಗೊಳಿಸಬೇಕು, ಅಮಾನತ್ತಿನಲ್ಲಿಡುವ ಪದ್ದತಿಯನ್ನು ರದ್ದು ಮಾಡಬೇಕು, ಆಪೇಕ್ಷೆಪಟ್ಟ ನೌಕರರಿಗೆ ಒಂದು ನಿಗಮದಿಂದ ಇನ್ನೊಂದು ನಿಗಮಕ್ಕೆ ವರ್ಗಾವಣೆಗೆ ಅವಕಾಶ ನೀಡಬೇಕು, ಎಲ್ಲಾ ಸಾರಿಗೆ ನೌಕರರಿಗೆ, ಅವಲಂಬಿತ ತಂದೆ, ತಾಯಿಗಳನ್ನೊಳಗೊಂಡ ಪೂರ್ಣ ಮೆಡಿಕಲ್ ರಿಯಂಬರ್ಸ್ಮೆಂಟ್ ಮಾಡಬೇಕು ಸೇರಿದಂತೆ 44 ಬೇಡಿಕೆಗಳನ್ನಿಟ್ಟುಕೊಂಡು ಮುಷ್ಕರವನ್ನು ರಾಜ್ಯಾದ್ಯಾಂತ ನಡೆಸಲು ನಿರ್ಧರಿಸಲಾಗಿದೆ.
ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಶನ್(ಎಐಟಿಯುಸಿ), ಅಖಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ(ಐಎನ್ಟಿಯುಸಿ), ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಮತ್ತು ಕರಾರಸಾಸಂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ದು ಸಂಘಗಳ ಜಂಟಿ ಸಮಿತಿ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದೆ.
ದ.ಕ ಜಿಲ್ಲೆಯಲ್ಲಿ ಮಂಗಳೂರು ವಿಭಾಗದಲ್ಲಿ 500 ಬಸ್ಗಳಿದ್ದು 2,500 ಕಾರ್ಮಿಕರಿದ್ದಾರೆ. ಪುತ್ತೂರು ವಿಭಾಗದಲ್ಲಿ 550 ಬಸ್ಗಳಿದ್ದು 5,500 ಕಾರ್ಮಿಕರಿದ್ದಾರೆ. ಇವರೆಲ್ಲರೂ ಮುಷ್ಕರದಲ್ಲಿ ಭಾಗವಹಿಸುವ ಸಾಧ್ಯತೆ ಹೆಚ್ಚಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಸೋಮವಾರದಿಂದ ಕೆಎಸ್ಸಾರ್ಟಿಸಿ ಬಸ್ಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ರವಿರಾತ್ರಿ 12 ಗಂಟೆಯಿಂದಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಬಸ್ಗಳು ಸಂಚರಿಸುವುದಿಲ್ಲ. ಎಲ್ಲಾ ಕಾರ್ಮಿಕರು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಮುಷ್ಕರದಿಂದ ಸಾರ್ವಜನಿಕರಿಗೆ ಆಗುವ ಸಮಸ್ಯೆಗೆ ವಿಷಾದ ವ್ಯಕ್ತಪಡಿಸುತ್ತೇವೆ. ಸರಕಾರ ಕೆಎಸ್ಸಾರ್ಟಿಸಿ ನೌಕರರ ಬೇಡಿಕೆಯನ್ನು ಈಡೇರಿಸಬೇಕು.
- ಪ್ರವೀಣ್ ಕುಮಾರ್, ಪ್ರ.ಕಾರ್ಯದರ್ಶಿ, ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ).







