ಮ್ಯೂನಿಕ್ ದಾಳಿಗೆ ಖಂಡನೆ, ದಲಿತರ ಮೇಲಿನ ದಾಳಿಗೆ ಖುಷಿ!
ಸಾಮಾಜಿಕ ಜಾಲ ತಾಣಗಳಲ್ಲಿ ಮೋದಿಗೆ ಚುಚ್ಚು
ಹೊಸದಿಲ್ಲಿ, ಜು.24: ಮ್ಯೂನಿಕ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ದಲಿತರ ಮೇಲೆ ನಡೆದ ದಾಳಿಯನ್ನು ಖುಷಿಯಿಂದ ಆಸ್ವಾದಿಸುತ್ತಿದ್ದಾರೆ ಎಂಬ ವ್ಯಂಗ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವ್ಯಕ್ತವಾಗಿದೆ.
ಮ್ಯೂನಿಕ್ ದಾಳಿ ಬಗ್ಗೆ ಮೋದಿ ಶನಿವಾರ ಟ್ವೀಟ್ ಮಾಡಿ, ಇಂಥ ಭೀಬತ್ಸ ದಾಳಿಯಿಂದ ತೀವ್ರ ಖೇದವಾಗಿದೆ. ಮೃತರ ಹಾಗೂ ಗಾಯಾಳುಗಳ ಕುಟುಂಬಗಳಿಗೆ ನಮ್ಮ ಸಾಂತ್ವನ ಎಂದು ಹೇಳಿದ್ದರು. ಮ್ಯೂನಿಕ್ನ ಜನದಟ್ಟಣೆಯ ಮಾಲ್ನಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ದಾಳಿಗೆ ಒಂಬತ್ತು ಮಂದಿ ಬಲಿಯಾಗಿ 21 ಮಂದಿ ಗಾಯಗೊಂಡಿದ್ದರು. ಇನ್ನೊಂದೆಡೆ ಭಾರತದ ಗುಜರಾತ್ನಲ್ಲಿ ಸತ್ತ ದನದ ಚರ್ಮ ಸುಲಿಯುತ್ತಿದ್ದ ದಲಿತರ ಮೇಲೆ ಗೋಸಂರಕ್ಷರು ಹಲ್ಲೆ ನಡೆಸಿದ ಘಟನೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಂತೆಯೇ ಕಾಶ್ಮೀರದಲ್ಲಿ ಬುರ್ಹಾನ್ ವಾನಿ ಹತ್ಯೆ ಹಿನ್ನೆಲೆಯಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಇದುವರೆಗೆ 77 ಮಂದಿ ಬಲಿಯಾಗಿದ್ದಾರೆ. ಆದರೂ ಪ್ರಧಾನಿ ಈ ಬಗ್ಗೆ ಮಾತನಾಡಿಲ್ಲ ಎನ್ನುವುದು ಸಾಮಾಜಿಕ ಜಾಲತಾಣ ಬಳಕೆದಾರರ ಆಕ್ರೋಶ.
ಇಂಥ ಆಕ್ರೋಶದ ಕೆಲ ಸ್ಯಾಂಪಲ್ಗಳು ಇಲ್ಲಿವೆ
ಎರಿಕ್ ಕೊಹೆಲೊ: ಅಂತಾರಾಷ್ಟ್ರೀಯ ದಾಳಿಗೆ ಇಷ್ಟು ವೇಗವಾಗಿ ಖಂಡಿಸುವ ಮೋದಿ, ದಲಿತರ ಮೇಲೆ ಹಲ್ಲೆ ನಡೆದಾಗ, ಹೇಳಿಕೆ ನೀಡಲು ಗೃಹ ಸಚಿವರಿಗೆ ಸೂಚಿಸಿದರು. ಅವರ ಹೊಣೆಯನ್ನು ನಿಭಾಯಿಸುವ ಶಕ್ತಿ ಅವರಿಗಿಲ್ಲ ಎನಿಸುತ್ತದೆ. ಇದೀಗ ಭಾರತಕ್ಕೆ ಇಬ್ಬರು ಪ್ರಧಾನಿಗಳು ಬೇಕು. ಒಬ್ಬ ಪ್ರಧಾನಿ ವಿದೇಶ ಪ್ರವಾಸಕ್ಕೆ, ಅದು ಮೋದಿ. ಮತ್ತೊಬ್ಬರು ಭಾರತವನ್ನು ಆಳಲು.
ಸ್ಟಾನ್ಲಿ ವಾಸ್: ವಿದೇಶಿ ದಾಳಿ ಖಂಡಿಸಲು ಮೋದಿಗೆ ಸಮಯವಿದೆ. ಆದರೆ ನಮ್ಮ ನಾಗರಿಕರ ಮೇಲೆ ಗೋರಕ್ಷಕರಿಂದ ಹಲ್ಲೆ ನಡೆದಾಗ ಖಂಡಿಸಲು ಸಮಯ ಇಲ್ಲ.
ಪಕ್ಕಿರೇಶ್.ಜಿ.ಕೆ: ವ್ಹಾವ್... ಇವರು ಭಾರತದ ಪ್ರಧಾನಿ ಅಲ್ಲ... ಬೇರೆ ದೇಶದಲ್ಲಿ ನಡೆದ ಹಲ್ಲೆಗೆ ನೀವು ಎಷ್ಟು ವೇಗವಾಗಿ ಪ್ರತಿಕ್ರಿಯೆ ನೀಡುತ್ತೀರಿ... ನಿಮ್ಮದೇ ಗುಜರಾತ್ನಲ್ಲಿ ದಲಿತರ ಮೇಲೆ ನಡೆದ ಹಲ್ಲೆಗೆ ಏನು ಹೇಳುತ್ತೀರಿ... ಮೇರಾ ಪ್ಯಾರೇ ಪ್ರಧಾನ್ ಸೇವಕ್...
ರಂಜನ್ ರಾಜ್: ಭಾರತದಲ್ಲಿ ನಡೆದ ದಾಳಿಗೆ ಖಂಡನೆಯೂ ಇಲ್ಲ; ಕ್ರಮವೂ ಇಲ್ಲ... ದೇಶದಲ್ಲಿ ನಡೆದ ದಾಳಿಗೆ ಟ್ವೀಟ್ ಮಾಡದ ಟ್ವಿಟ್ಟರ್ ಪಿಎಂ ವಿದೇಶಿ ದಾಳಿಗೆ ಟ್ವೀಟ್ ಮಾಡುತ್ತಾರೆ...
ಇಂಥ ಹಲವು ಟೀಕೆಗಳು ಮೋದಿ ವಿರುದ್ಧ ವ್ಯಕ್ತವಾಗಿವೆ.