ಪುತ್ತೂರು: ಜುಲೈ 25ರಿಂದ ವಿವಿಧ ಸ್ಕಾಲರ್ಶಿಪ್ಗಳ ಬಗ್ಗೆ ಮಾಹಿತಿ ಕಾರ್ಯಾಗಾರ
![ಪುತ್ತೂರು: ಜುಲೈ 25ರಿಂದ ವಿವಿಧ ಸ್ಕಾಲರ್ಶಿಪ್ಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಪುತ್ತೂರು: ಜುಲೈ 25ರಿಂದ ವಿವಿಧ ಸ್ಕಾಲರ್ಶಿಪ್ಗಳ ಬಗ್ಗೆ ಮಾಹಿತಿ ಕಾರ್ಯಾಗಾರ](https://www.varthabharati.in/sites/default/files/images/articles/2016/07/25/scholarship_stock.jpg)
ಪುತ್ತೂರು, ಜು.25: ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ಶಾಲಾ-ಕಾಲೇಜುಗಳು ಈಗಾಗಲೇ ಪ್ರಾರಂಭಗೊಂಡಿದ್ದು, ಪಾಠ ಪ್ರವಚನಗಳೂ ಆರಂಭಗೊಂಡಿವೆ. ಆರ್ಥಿಕ ಸಮಸ್ಯೆಗಳಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸದೆ, ಉನ್ನತ ಶಿಕ್ಷಣದ ಕಡೆಗೆ ಉತ್ತೇಜಿಸುವ ಸಲುವಾಗಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು, ವಿವಿಧ ವಿದ್ಯಾರ್ಥಿವೇತನ ಯೋಜನೆಗಳು ಸೇರಿದಂತೆ ವಿವಿಧ ಸರಕಾರೇತರ ಸಂಘ ಸಂಸ್ಥೆಗಳೂ ವಿದ್ಯಾರ್ಥಿವೇತನಗಳನ್ನು ಒದಗಿಸುತ್ತಿವೆ.
ವಿವಿಧ ಇಲಾಖೆಗಳಿಂದ ಲಭಿಸುವ ವಿದ್ಯಾರ್ಥಿವೇತನಗಳ ಮಾಹಿತಿ ಸಮರ್ಪಕವಾಗಿ ಅರ್ಹ ವಿದ್ಯಾರ್ಥಿಗಳು ಇಂತಹ ವಿದ್ಯಾರ್ಥಿವೇತನಗಳಿಂದ ವಂಚಿತರಾಗುತ್ತಾರೆ. ಇಂತಹ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ, ಕ್ರಸ್ಟ್ ಸಂಸ್ಥೆಯು, 9ನೆ ತರಗತಿಯಿಂದ ಪಿಯುಸಿ, ಪದವಿ ಸೇರಿದಂತೆ ಸ್ನಾತ್ತಕೋತ್ತರ ಪದವಿ ತರಗತಿಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿವಿಧ ಇಲಾಖೆಗಳ ಮತ್ತು ಸಂಘ ಸಂಸ್ಥೆಗಳ ವಿದ್ಯಾರ್ಥಿವೇತನಗಳ ವಿವರಗಳು ಮತ್ತು ಅರ್ಜಿ ಸಲ್ಲಿಸುವ ಸೂಕ್ತ ವಿಧಾನಗಳ ಬಗ್ಗೆ ಸವಿವರವಾದ ಮಾಹಿತಿಯನ್ನು ಒದಗಿಸಲು ಉಚಿತ ಮಾಹಿತಿ ಶಿಬಿರ ಆಯೋಜಿಸಿದೆ.
ಜುಲೈ 25 ರಿಂದ ಸೆಪ್ಟೆಂಬರ್ 25ರವರೆಗೆ ಸಂಸ್ಥೆಯ ಕಚೇರಿಯಲ್ಲಿ ಮಾಹಿತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲ್ಲದೆ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ವಾರ್ಷಿಕ 1,12,000 ರೂ.ವರೆಗೆ ಲಭಿಸುವ ವಿವಿಧ ವಿದ್ಯಾರ್ಥಿವೇತನಗಳ ಮಾಹಿತಿಯನ್ನು ಶಿಬಿರದಲ್ಲಿ ನೀಡಲಾಗುವುದು. ಜೊತೆಗೆ ವಿದ್ಯಾರ್ಥಿವೇತನಗಳ ಅರ್ಜಿಯನ್ನು ಸೂಕ್ತ ರೀತಿಯಲ್ಲಿ ಸಲ್ಲಿಸಲು ವಿಶೇಷವಾದ ವ್ಯವಸ್ಥೆಯನ್ನು ಕೂಡ ಸಂಸ್ಥೆಯಲ್ಲಿಯೇ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ.: 9901520223ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಮುಖ್ಯಸ್ಥ ಶರತ್ ಆಳ್ವ ಕರಿಂಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.