ಹೈದರಾಬಾದ್ ವಿವಿಯಿಂದ ದೇಶ ವಿರೋಧಿ ಅಧ್ಯಾಪಕರನ್ನು ಹೊರಗೆ ಹಾಕಿ:ವಿಹಿಂಪ
![ಹೈದರಾಬಾದ್ ವಿವಿಯಿಂದ ದೇಶ ವಿರೋಧಿ ಅಧ್ಯಾಪಕರನ್ನು ಹೊರಗೆ ಹಾಕಿ:ವಿಹಿಂಪ ಹೈದರಾಬಾದ್ ವಿವಿಯಿಂದ ದೇಶ ವಿರೋಧಿ ಅಧ್ಯಾಪಕರನ್ನು ಹೊರಗೆ ಹಾಕಿ:ವಿಹಿಂಪ](https://www.varthabharati.in/sites/default/files/images/articles/2016/07/25/vhp_1.jpg)
ಹೊಸದಿಲ್ಲಿ,ಜುಲೈ 25: ಹೈದರಾಬಾದ್ ವಿಶ್ವವಿದ್ಯಾನಿಲಯದಿಂದ ದೇಶವಿರೋಧಿ ಅಧ್ಯಾಪಕರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ವಿಶ್ವಹಿಂದೂ ಪರಿಷತ್ ಮತ್ತೆ ರಂಗಪ್ರವೇಶಿಸಿದೆ. ವಿಶ್ವವಿದ್ಯಾನಿಲಯದ ಹಾಸ್ಟೆಲ್ಗಳಲ್ಲಿ ಅನಧಿಕೃತವಾಗಿ ವಾಸಿಸುವ ವಿದ್ಯಾರ್ಥಿಗಳನ್ನು ತೆರವುಗೊಳಿಸಬೇಕು. ದೇಶದ್ರೋಹ ನಿಲುವು ಹೊಂದಿರುವ ಅಧ್ಯಾಪಕರ ವಿರುದ್ಧ ದೂರು ನೀಡಲಾಗಿದೆ. ದೇಶದ್ರೋಹಿಗಳು, ಭಯೋತ್ಪಾದಕರ ಪರ ರ್ಯಾಲಿಗಳನ್ನು ನಡೆಸಿದವರ ವಿರುದ್ಧವೂ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಲಾಯಿತೆಂದು ತೆಲಂಗಾಣ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಎಂ.ರಾಮರಾಜು ಹೇಳಿದ್ದಾರೆಂದು ವರದಿಯಾಗಿದೆ.
ಜುಲೈ 28ರಂದುವಿಶ್ವವಿದ್ಯಾನಿಲಯಕ್ಕೆ “ಚಲೋ ಯುನಿವರ್ಸಿಟಿ” ಎಂಬ ಹೆಸರಿನಲ್ಲಿ ಜಾಥಾ ನಡೆಸುವ ಯೋಜನೆಯನ್ನು ಸಂಘಪರಿವಾರ ಸಂಘಟನೆಗಳು ಹಾಕಿಕೊಂಡಿವೆ ಎಂದು ತಿಳಿದು ಬಂದಿದೆ. ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾರ ಮರಣಕ್ಕೆ ಸಂಬಂಧಿಸಿ ವಿಶ್ವವಿದ್ಯಾನಿಲಯದಲ್ಲಿ ನಡೆದಿದ್ದ ಬೆಳವಣಿಗೆಗಳು ತಣ್ಣಗಾಗಿರುವ ಹೊತ್ತಿನಲ್ಲಿ ಸಂಘಪರಿವಾರದ ಸಂಘಟನೆಗಳು ಪುನಃ ಉದ್ವಿಗ್ನತೆ ಸೃಷ್ಟಿಯಾಗಬಹುದಾದ ಚಟುವಟಿಕೆಗಳೊಂದಿಗೆ ಮುಂದೆ ಬಂದಿವೆ ಎಂದು ವರದಿ ತಿಳಿಸಿದೆ. ಅಧಿಕಾರಿಗಳು ತಮ್ಮಬೇಡಿಕೆಗೆ ಸ್ಪಂದಿಸದಿದ್ದರೆ ಸೂಕ್ತ ಪ್ರತಿಭಟನೆಗಳನ್ನು ನಡೆಸಲಿರುವುದಾಗಿ ರಾಮರಾಜು ತಿಳಿಸಿದ್ದಾರೆಂದು ವರದಿ ವಿವರಿಸಿದೆ.