ದಲಿತರ ಮೇಲೆ ದೌರ್ಜನ್ಯ:ಪ್ರಧಾನಿ ಹೇಳಿಕೆಗೆ ಮಾಯಾವತಿ ಆಗ್ರಹ
ಹೊಸದಿಲ್ಲಿ,ಜು.25: ದಲಿತರ ಮೇಲಿನ ದೌರ್ಜನ್ಯಗಳ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರ ‘ವೌನ’ವನ್ನು ಸೋಮವಾರ ಇಲ್ಲಿ ಪ್ರಶ್ನಿಸಿದ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಯವರು, ಬಿಜೆಪಿಯು ಅಧಿಕಾರಕ್ಕೆ ಬಂದಾಗಿನಿಂದ ಇಂತಹ ಘಟನೆಗಳು ಹೆಚ್ಚುತ್ತಿವೆ ಎಂದು ಆರೋಪಿಸಿದರಲ್ಲದೆ, ಈ ಕುರಿತು ಪ್ರಧಾನಿ ಹೇಳಿಕೆಯನ್ನು ನೀಡಬೇಕು ಎಂದು ಆಗ್ರಹಿಸಿದರು.
ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಗುಜರಾತಿನ ಉನಾದಲ್ಲಿ ಗೋರಕ್ಷಕರ ಗುಂಪಿನಿಂದ ದಲಿತ ಯುವಕರ ಮೇಲಿನ ಹಲ್ಲೆ ಘಟನೆಯನ್ನು ಪ್ರಸ್ತಾಪಿಸಿ, ಗೋರಕ್ಷಣೆಯ ಹೆಸರಿನಲ್ಲಿ ದಲಿತ ಯುವಕರನ್ನು ಹಿಂಸಿಸಲಾಗುತ್ತಿದೆ ಎಂದರು.
ದಲಿತರು ಮತ್ತು ಉಪೇಕ್ಷಿತ ವರ್ಗಗಳ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ ಮತ್ತು ಸರಕಾರದಲ್ಲಿರುವವರೂ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಮಂಗಳೂರು ಡಿವೈಎಸ್ಪಿ ಎಂ.ಕೆ.ಗಣಪತಿಯವರ ಆತ್ಮಹತ್ಯೆ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಅವರು ಹೇಳಿದರು.
ಬಿಜೆಪಿ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿ ವಾಹನವೊಂದನ್ನು ಓವರ್ಟೇಕ್ ಮಾಡಿದ್ದಕ್ಕೆ ಇಬ್ಬರು ದಲಿತ ಬೈಕ್ ಸವಾರರ ಮೇಲೆ ಹಲ್ಲೆ ನಡೆದಿದೆ. ಬೈಕ್ನಲ್ಲಿ ಅಂಬೇಡ್ಕರ್ ಚಿತ್ರವನ್ನು ಕಂಡ ಬಳಿಕ ಅವರಿಗೆ ಇನ್ನಷ್ಟು ಹಿಂಸೆ ನೀಡಲಾಗಿದೆ. ಉತ್ತರ ಪ್ರದೇಶದಲ್ಲಂತೂ ದೊಡ್ಡ ಪ್ರಮಾಣದಲ್ಲಿ ದಲಿತರ ವಿರುದ್ಧ ದೌರ್ಜನ್ಯಗಳು ನಡೆಯುತ್ತಿವೆ.
ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಇದು ದೇಶಾದ್ಯಂತ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ದೇಶದಲ್ಲಿ ಪ್ರತಿದಿನವೂ ಎಂಬಂತೆ ದೌರ್ಜನ್ಯಗಳು ನಡೆಯುತ್ತಿದ್ದು, ಪ್ರಧಾನಿಯವರು ವೌನವಾಗಿರುವುದು ಸಲ್ಲದು. ಅವರು ಮಾತನಾಡಲೇಬೇಕು. ಬಿಜೆಪಿ ಆಡಳಿತದ ರಾಜ್ಯಗಳಲ್ಲಿಯೇ ಇಂತಹ ದೌರ್ಜನ್ಯಗಳು ಹೆಚ್ಚಿವೆ. ಗುಜರಾತ್ ಘಟನೆ ಕುರಿತಂತೆ ಅವರಿಂದ ಹೇಳಿಕೆಯನ್ನು ನಾವು ನಿರೀಕ್ಷಿಸಿದ್ದೆವು. ಆದರೆ ಅವರು ತುಟಿಪಿಟಕ್ಕೆಂದಿಲ್ಲ ಎಂದು ಮಾಯಾವತಿ ಹೇಳಿದರು.