‘ಪಂಜಾಬ್ ಕಡೆ ಕಣ್ಣೆತ್ತಿ ನೋಡಬಾರದು’
ಆದೇಶಿಸಿದ್ದ ಬಿಜೆಪಿ; ಸಿಧು ಆರೋಪ
ಹೊಸದಿಲ್ಲಿ, ಜು.25: ವಾರದ ಬಳಿಕ ವೌನ ಮುರಿದಿರುವ ನವಜೋತ್ ಸಿಂಗ್ ಸಿಧು, ಮುಂದಿನ ವರ್ಷ ಚುನಾವಣೆ ನಡೆಯಲಿರುವ ಪಂಜಾಬ್ನತ್ತ ‘ಕಣ್ಣೆತ್ತಿಯೂ ನೋಡಬಾರದು’ ಎಂದು ತನಗೆ ತಾಕೀತು ಮಾಡಿದ್ದ ಕಾರಣದಿಂದ ತಾನು ಬಿಜೆಪಿ ಸಂಸದನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆಂದು ಇಂದು ಹೇಳಿದ್ದಾರೆ.
ಅವರ ಹೆಗ್ಗುರುತಾದ ದ್ವಿಪದಿಗಳಿಂದ ಕೂಡಿದ್ದ ಕ್ರೋಧತಪ್ತ ಹೇಳಿಕೆಯೊಂದರಲ್ಲಿ ಸಿಧು, ಅವರು ಅರವಿಂದ ಕೇಜ್ರಿವಾಲರ ಆಮ್ಆದ್ಮಿ ಪಕ್ಷ(ಎಎಪಿ) ಸೇರುತ್ತಾರೆಯೇ ಎಂಬ ಕುರಿತಾದ ಪ್ರಶ್ನೆಗಳಿಂದ ನುಣುಚಿ ಕೊಳ್ಳಲು ಯಶಸ್ವಿಯಾದರು.
ತನಗೆ ಪಂಜಾಬ್ನಿಂದ ದೂರವಿರುವಂತೆ ಸೂಚಿಸಲಾಗಿತ್ತು. ತನ್ನ ಬೇರುಗಳನ್ನು ತಾನು ಹೇಗೆ ತ್ಯಜಿಸಲಿ? ಮೊದಲ ಸಲ ಏನೋ ತಪ್ಪಾಗಿದೆ ಎನ್ನಬಹುದು. ಆದರೆ, ಇದು ನಾಲ್ಕನೆ ಬಾರಿ ನಡೆದಿದೆ. ಅದನ್ನು ಅರಗಿಸಿಕೊಳ್ಳುವುದು ಕಷ್ಟ ಎಂದು ಕೋಪ ಕಾರುತ್ತಿದ್ದ ಕಣ್ಣುಗಳೊಂದಿಗೆ ಸಿಧು ಹೊಸದಿಲ್ಲಿಯಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಸಂಕಷ್ಟವೊದಗಿದ್ದಾಗ ಸಿಧು, ಸಿಧು ಎಂದಿದ್ದವರೇ ಈಗ, ಪಂಜಾಬ್ನತ್ತ ತಿರುಗಿಯೂ ನೋಡದಂತೆ ತನಗೆ ತಿಳಿಸುತ್ತಾರೆ. ತಾನೇನಾದರೂ ತಪ್ಪು ಮಾಡಿದ್ದೇನೆಯೇ? ಕನಿಷ್ಠ ತನ್ನ ಅಪರಾಧವನ್ನಾದರೂ ಹೇಳಲಿ. ಕೆಲವರ ಸ್ವಹಿತಾಸಕ್ತಿಯ ರಕ್ಷಣೆಗಾಗಿ ತಾನು ದೂರ ಉಳಿಯಬೇಕೇ ಎಂದವರು ಪ್ರಶ್ನಿಸಿದರು.
ಪ್ರಪಂಚದಲ್ಲಿ ಪಂಜಾಬ್ಗಿಂತ ಯಾವುದೇ ಪಕ್ಷವೂ ದೊಡ್ಡದಲ್ಲ. ತಾನು ಪರಿಣಾಮವನ್ನು ಎದುರಿಸ ಬಯಸಿದ್ದೇನೆ ಎಂದು ಸಿಧು ಘೋಷಿಸಿದರು.
2004ರ ರಾಷ್ಟ್ರೀಯ ಚುನಾವಣೆಯ ವೇಳೆ, 14 ದಿನಕ್ಕೆ ಮೊದಲು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ತನಗೆ ಕರೆ ಮಾಡಿ ಅಮೃತಸರದಿಂದ ಸ್ಪರ್ಧಿಸುವಂತೆ ವಿನಂತಿಸಿದ್ದರು. ತಾನಲ್ಲಿ ಸ್ಪರ್ಧಿಸಿ ಗೆದ್ದಿದ್ದೆ. ಉತ್ತರಭಾರತದಲ್ಲಿ ತಾನೊಬ್ಬನೇ ಅವರ ಗೆಲುವಿನ ಅಭ್ಯರ್ಥಿಯೆಂಬ ದಿನಗಳಿದ್ದವು. ಬಳಿಕ ಮೋದಿ ಅಲೆ ಬಂದಿತು. ಅದು ಕೇವಲ ವಿಪಕ್ಷಗಳನ್ನು ಮಾತ್ರ ಮುಳುಗಿಸಿದುದಲ್ಲ. ಸಿಧುವನ್ನೂ ಮುಳುಗಿಸಿತು ಎಂದವರು ಹೇಳಿದರು.