ಮುಖ್ಯಮಂತ್ರಿಯ ಹೆಸರು ಹೇಳಿ ಕರೆಯಬಾರದು: ತಮಿಳ್ನಾಡು ಸ್ಪೀಕರ್!
ಚೆನ್ನೈ, ಜುಲೈ 26: ಮುಖ್ಯಮಂತ್ರಿ ಜಯಲಲಿತಾರ ಹೆಸರು ಹೇಳಿ ಕರೆಯಬಾರದು ಎಂದು ತಮಿಳ್ನಾಡು ವಿಧಾನ ಸಭಾ ಸ್ಪೀಕರ್ ಪಿ.ಧನಪಾಲ್ ಹೇಳಿದ್ದಾರೆಂದು ವರದಿಯಾಗಿದೆ. ಸ್ಪೀಕರ್ರ ನಿಲುವನ್ನು ಪ್ರತಿಭಟಿಸಿ ಸೋಮವಾರ ಡಿಎಂಕೆ ಶಾಸಕರು ಸದನದಿಂದ ಹೊರನಡೆದರು ಎಂದು ವರದಿ ತಿಳಿಸಿದೆ. "ಮುಖ್ಯಮಂತ್ರಿ ಹೆಸರನ್ನು ಉಲ್ಲೇಖಿಸಿ ಅವರನ್ನು ಕರೆಯಬಾರದು. ಇದು ನನ್ನ ಆದೇಶವಾಗಿದೆ" ಎಂದು ಮುಖ್ಯಮಂತ್ರಿ ಜಯಲಲಿತಾರನ್ನು ಅವರ ಹೆಸರನ್ನು ಹೇಳಿ ಕರೆಯಬಹುದೇ ಎಂದು ಡಿಎಂಕೆ ಶಾಸಕರು ಕೇಳಿದ ಪ್ರಶ್ನೆಗೆ ಹೀಗೆ ಸ್ಪೀಕರ್ ಉತ್ತರಿಸಿದ್ದಾರೆ.
ಎಐಡಿಎಂಕೆ ಶಾಸಕ ನರಸಿಂಹನ್ ಮಾಜಿ ಮುಖ್ಯಮಂತ್ರಿ ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿಯವರನ್ನು ಅವರ ಹೆಸರು ಹೇಳಿ ಕರೆದಾಗ ಸದನದಲ್ಲಿ ಸೋಮವಾರದಂದು ಈ ಕುತೂಹಲಕರ ಘಟನೆಗಳಾದವು . ಕರುಣಾನಿಧಿಯವರ ಹೆಸರನ್ನು ಹೇಳಿ ಕರೆಯಬಾರದು. ಅವರನ್ನು ಎಲ್ಲರೂ ಕಲೈಂಜರ್ ಎಂದೋ ತಲೈವರ್ ಎಂದೋ ಕರೆಯುತ್ತಾರೆ ಎಂದು ಡಿಎಂಕೆ ಶಾಸಕರು ವಾದಿಸಿದರು. ಮಾಜಿ ಮುಖ್ಯಮಂತ್ರಿಯನ್ನು ಅವರ ಹೆಸರು ಹೇಳಿ ಕರೆಯಬಹುದೇ ಎಂದು ಸ್ಪೀಕರ್ರನ್ನು ಕೇಳಿದಾಗ ಹಾಗೆ ಕರೆಯಬಹುದೆಂದು ಸ್ಪೀಕರ್ ಉತ್ತರಿಸಿದ್ದಾರೆ ಎನ್ನಲಾಗಿದೆ. ಹಾಗಿದ್ದರೆ ಮುಖ್ಯಮಂತ್ರಿಯ ಹೆಸರನ್ನು ಹೇಳಿ ಕರೆದರೆ ಏನು ಸಮಸ್ಯೆಯಿದೆ ಎಂದು ಡಿಎಂಕೆ ಶಾಸಕರು ಮರು ಪ್ರಶ್ನೆಹಾಕಿದ್ದರು. ಆದರೆ ಮುಖ್ಯಮಂತ್ರಿಯನ್ನು ಹೆಸರು ಹೇಳಿ ಕರೆಯಬಾರದು ಎಂದು ಸ್ಪೀಕರ್ ಘೋಷಿಸಿದರು. ಇದರೊಂದಿಗೆ ಸ್ಪೀಕರ್ ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದ್ದಾರೆ ಎಂದು ಆರೋಪಿಸಿ ಡಿಎಂಕೆ ಸದಸ್ಯರು ಸಭಾ ತ್ಯಾಗ ಮಾಡಿದರೆಂದು ವರದಿ ತಿಳಿಸಿದೆ.
ಮುಖ್ಯಮಂತ್ರಿಯನ್ನು ಹೆಸರು ಹೇಳಿ ಕರೆಯಬಾರದೆಂದು ಸಭಾ ನಿಯಮಗಳಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ. ಆದ್ದರಿಂದ ಸ್ಪೀಕರ್ರ ನಿಲುವುಕಾನೂನು ಬಾಹಿರವಾದುದೆಂದು ಡಿಎಂಕೆ ವಕ್ತಾರ ಸ್ಟಾಲಿನ್ ಹೇಳಿದ್ದಾರೆಂದು ವರದಿ ತಿಳಿಸಿದೆ.