ಗುಜರಾತ್: ದಲಿತರಿಗೆ ಹಲ್ಲೆ ಪ್ರತಿಭಟಿಸಿ ಪ್ರಶಸ್ತಿ ಮರಳಿಸಲಿರುವ ಗುಜರಾತ್ನ ದಲಿತ ಸಾಹಿತಿ ಅಮೃತಲಾಲ್!
![ಗುಜರಾತ್: ದಲಿತರಿಗೆ ಹಲ್ಲೆ ಪ್ರತಿಭಟಿಸಿ ಪ್ರಶಸ್ತಿ ಮರಳಿಸಲಿರುವ ಗುಜರಾತ್ನ ದಲಿತ ಸಾಹಿತಿ ಅಮೃತಲಾಲ್! ಗುಜರಾತ್: ದಲಿತರಿಗೆ ಹಲ್ಲೆ ಪ್ರತಿಭಟಿಸಿ ಪ್ರಶಸ್ತಿ ಮರಳಿಸಲಿರುವ ಗುಜರಾತ್ನ ದಲಿತ ಸಾಹಿತಿ ಅಮೃತಲಾಲ್!](https://www.varthabharati.in/sites/default/files/images/articles/2016/07/26/image_0.jpg)
ಅಹ್ಮದಾಬಾದ್, ಜುಲೈ 26: ಉನ ದಲಿತ ಹಲ್ಲೆ ಘಟನೆಯನ್ನು ಪ್ರತಿಭಟಿಸಿ ಗುಜರಾತ್ನ ದಲಿತ ಬರಹಗಾರ ಅಮೃತಲಾಲ್ ಮಕ್ವಾನ ತನಗೆ ಲಭಿಸಿದ ಪ್ರಶಸ್ತಿಯನ್ನು ಗುಜರಾತ್ ಸರಕಾರಕ್ಕೆ ವಾಪಸು ನೀಡಲು ಮುಂದಾಗಿದ್ದಾರೆಂದು ವರದಿಯಾಗಿದೆ. ಗುಜರಾತ್ನ ಗೋಸಂರಕ್ಷಣಾಸಮಿತಿ ಕಳೆದ ವಾರ ಗುಜರಾತ್ನ ಉನದಲ್ಲಿ ಸತ್ತ ದನದ ಚರ್ಮಸುಲಿದರು ಎಂದು ಆರೋಪಿಸಿ ನಾಲ್ವರು ದಲಿತರನ್ನು ಮಾರಣಾಂತಿಕವಾಗಿ ಥಳಿಸಿದ್ದು ಇದನ್ನು ಪ್ರತಿಭಟಿಸಿ ಮಕ್ವಾನ ತನಗೆ 2013ರಲ್ಲಿ ಸಿಕ್ಕಿದ್ದ “ದಾಸಿ ಜೀವನ್ ಶ್ರೇಷ್ಠ ದಲಿತ್ ಸಾಹಿತ್ಯಕೃತಿ ಪ್ರಶಸ್ತಿ”ಯನ್ನು ಸರಕಾರಕ್ಕೆ ಮರಳಿಸಲಿದ್ದಾರೆಂದು ತಿಳಿದು ಬಂದಿದೆ. " ಈ ಘಟನೆಯಲ್ಲಿ ಗುಜರಾತ್ ಸರಕಾರ ದಲಿತರಿಗೆ ನ್ಯಾಯ ಒದಗಿಸಿಲ್ಲ, ಆದ್ದರಿಂದ ಪ್ರಶಸ್ತಿಮತ್ತು ಅದರೊಂದಿಗೆ ತನಗೆ ಲಭಿಸಿದ 25,000 ರೂಪಾಯಿಗಳನ್ನು ಸರಕಾರಕ್ಕೆ ಅಹ್ಮದಾಬಾದ್ ಜಿಲ್ಲಾಧಿಕಾರಿ ಮುಖಾಂತರ ಮರಳಿಸುವೆ" ಎಂದು ಮಕ್ವಾನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
"ಐವತ್ತು ಮಂದಿ ದಲಿತರ ಮೇಲೆ ಹಲ್ಲೆಎಸಗಿದ್ದಾರೆ. ಆದರೆ ಕೇವಲ ಹದಿನಾರು ಮಂದಿಯನ್ನು ಬಂಧಿಸಲಾಗಿದೆ ಇತರರು ಹಲ್ಲೆ ನಡೆಸಿ ಹೊರಗೆ ನಿರ್ಭೀತಿಯಿಂದ ಅಡ್ಡಾಡುತ್ತಿದ್ದಾರೆ. ಈ ಸರಕಾರದಲ್ಲಿ ತನಗೆ ಯಾವ ವಿಶ್ವಾಸವೂ ಇಲ್ಲ. ಆದ್ದರಿಂದ ತಾನು ಪ್ರಶಸ್ತಿ ಮರಳಿಸುತ್ತಿದ್ದೇನೆ"ಎಂದು ಮಕ್ವಾನ ಹೇಳಿದ್ದಾರೆಂದು ವರದಿಯಾಗಿದೆ.