ಮೂಡುಬಿದಿರೆ ತಾಲೂಕು ಘೋಷಣೆಯಾಗದಿದ್ದರೂ 2 ವರ್ಷದೊಳಗೆ ಮಿನಿ ವಿಧಾನ ಸೌಧ ನಿರ್ಮಾಣ :ಅಭಯಚಂದ್ರ ಜೈನ್
ಮೂಡುಬಿದಿರೆಯಲ್ಲಿ ಕಂದಾಯ ಅದಾಲತ್
![ಮೂಡುಬಿದಿರೆ ತಾಲೂಕು ಘೋಷಣೆಯಾಗದಿದ್ದರೂ 2 ವರ್ಷದೊಳಗೆ ಮಿನಿ ವಿಧಾನ ಸೌಧ ನಿರ್ಮಾಣ :ಅಭಯಚಂದ್ರ ಜೈನ್ ಮೂಡುಬಿದಿರೆ ತಾಲೂಕು ಘೋಷಣೆಯಾಗದಿದ್ದರೂ 2 ವರ್ಷದೊಳಗೆ ಮಿನಿ ವಿಧಾನ ಸೌಧ ನಿರ್ಮಾಣ :ಅಭಯಚಂದ್ರ ಜೈನ್](https://www.varthabharati.in/sites/default/files/images/articles/2016/07/27/0ccadf9f-9bd5-4844-9613-280ce9978c67.jpg)
ಮೂಡುಬಿದಿರೆ,ಜು.27 : ಮೂಡುಬಿದಿರೆ ತಾಲೂಕು ಘೋಷಣೆಯಾಗದಿದ್ದರೂ 2 ವರ್ಷದೊಳಗೆ ಮಿನಿ ವಿಧಾನ ಸೌಧ ನಿರ್ಮಿಸುವುದಾಗಿ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಇಲ್ಲಿನ ಸ್ವರ್ಣ ಮಂದಿರದಲ್ಲಿ ಮಂಗಳವಾರ ನಡೆದ ಮೂಡುಬಿದಿರೆ ಹೋಬಳಿ ಕಂದಾಯ ವ್ಯಾಪ್ತಿಯ ಜನಸಂಪರ್ಕ ಸಭೆ ಹಾಗೂ ಕಂದಾಯ ಅದಾಲತ್ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದ್ದು ಡೀಮ್ಡ್ ಫಾರೆಸ್ಟ್ ಕುರಿತು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಆರು ತಿಂಗಳೊಳಗೆ ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಬಗೆಹರಿಸಲಾಗುವುದು. 9/11 ಸಮಸ್ಯೆಯನ್ನು ಬಗೆಹರಿಸಲೂ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಶ್ರೀ ಕುಮಾರ್ ಕಂದಾಯ ಇಲಾಖೆಯ ಕಾರ್ಯಕ್ರಮಗಳ ವಿವರ ನೀಡಿ ಪೋಡಿ ಮುಕ್ತ ಅಭಿಯಾನದಡಿ ಮೂಡುಬಿದಿರೆ ಹೋಬಳಿಯಲ್ಲಿ 4 ಸಾವಿರ ಅರ್ಜಿಗಳು ಬಂದಿದ್ದು ಸರ್ವೇ ಮಾಡಿ 2 ಸಾವಿರದಷ್ಟು ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದ 688 ಅರ್ಜಿಗಳು ಇತ್ಯರ್ಥಗೊಂಡಿವೆ. 224 ಮಂದಿ ಎಂಡೋಸಲ್ಪಾನ್ ಸಂತ್ರಸ್ತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಕಂದಾಯ ಇಲಾಖೆಯ ಮೂಲಕ 39 ಸೇವೆಗಳು ಲಭ್ಯವಿದ್ದು ಮುಂದಿನ ದಿನಗಳಲ್ಲಿ ಪ್ರತೀ ಗ್ರಾ. ಪಂಗಳ ಬಾಪೂಜಿ ಕೇಂದ್ರಗಳ ಮೂಲಕ ಪಡೆಯಬಹುದು. ಸಾರ್ವಜನಿಕರು ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳನ್ನು ಸಲ್ಲಿಸಿದಲ್ಲಿ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಮಾಸಾಶನ, ಪಡಿತರಚೀಟಿ, ಮನೆ ನಿವೇಶನ, ರಸ್ತೆ ದುರಸ್ಥಿ, ಆರ್ಟಿಸಿ ಸಮಸ್ಯೆಗಳಿಗೆ ಸಂಬಂಧಿಸಿ ಬಂದ ಅರ್ಜಿಗಳನ್ನು ಅಪರ ಜಿಲ್ಲಾಧಿಕಾರಿ ಶ್ರೀಕುಮಾರ್ ಪರಿಶೀಲಿಸಿ ಫಲಾನುಭವಿಗಳನ್ನು ಕರೆಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳದಲ್ಲೇ ಇತ್ಯರ್ಥಪಡಿಸಿದರು.
ಜಿ. ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ಸುಚರಿತ ಶೆಟ್ಟಿ, ಸುಜಾತ, ಮೂಡುಬಿದಿರೆ ಪುರಸಭಾಧ್ಯಕ್ಷೆ ರೂಪಾ ಸಂತೋಷ ಶೆಟ್ಟಿ, ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಪಿ.ಕೆ ಥೋಮಸ್, ತಾ.ಪಂ ಅಧ್ಯಕ್ಷೆ ರೇಖಾ ಸಾಲ್ಯಾನ್, ನಾಗವೇಣಿ, ವನಿತಾ ನಾಯ್ಕಾ, ರೀಟಾ ಕುಟಿನ್ಹೊ, ಬೆಳುವಾಯಿ ಗ್ರಾ. ಪಂ ಅಧ್ಯಕ್ಷ ಭಾಸ್ಕರ ಆಚಾರ್ಯ, ಪಡುಮಾರ್ನಾಡು ಗ್ರಾ. ಪಂ ಅಧ್ಯಕ್ಷ ಶ್ರೀನಾಥ್ ಸುವರ್ಣ, ಹೊಸಬೆಟ್ಟು ಗ್ರಾ. ಪಂ ಅಧ್ಯಕ್ಷ ಮನೋಜ್ ಆಳ್ವಾರಿಸ್, ದರೆಗುಡ್ಡೆ ಗ್ರಾ.ಪಂ ಉಪಾಧ್ಯಕ್ಷ ಮುನಿರಾಜ ಹೆಗ್ಡೆ, ತಹಸೀಲ್ದಾರ್ ಮಹಮ್ಮದ್ ಇಸಾಕ್, ಪುರಸಭೆ ಮುಖ್ಯಾಧಿಕಾರಿ ಶೀನ ನಾಯ್ಕಾ, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಕಂದಾಯ ಅದಾಲತ್ನಲ್ಲಿ 67ಮಂದಿಗೆ ವಿವಿಧ ಮಾಸಾಶನಗಳ ಪತ್ರವನ್ನು ನೀಡಲಾಯಿತು. ಅಂತ್ಯಸಂಸ್ಕಾರ ಯೋಜನೆಯಡಿ ತಲಾ 5ಸಾವಿರದಂತೆ 13ಮಂದಿಗೆ ಚೆಕ್ ವಿತರಿಸಲಾಯಿತು. ಹಾಗೂ ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ ತಲಾ 20ಸಾವಿರದಂತೆ 50ಮಂದಿಗೆ ಚೆಕ್ ನೀಡಲಾಯಿತು. 25 ಫಲಾನುಭವಿಗಳಿಗೆ 94 ಸಿಯಡಿ ಹಕ್ಕು ಪತ್ರ ವಿತರಿಸಲಾಯಿತು. ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದ 54 ಅರ್ಜಿಗಳನ್ನು ಸ್ವೀಕರಿಸಲಾಯಿತು. ಪುರಸಭೆಯ ಕಂದಾಯ ನಿರೀಕ್ಷಕ ಧನಂಜಯ ಕಾರ್ಯಕ್ರಮ ನಿರ್ವಹಿಸಿದರು.