ಇನ್ನು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಎಕ್ಸಿಟ್ ಎಕ್ಸಾಮ್
ಹೊಸದಿಲ್ಲಿ, ಜು.27: ವೈದ್ಯಕೀಯ ಶಿಕ್ಷಣದ ಗುಣಮಟ್ಟ ಖಾತ್ರಿಪಡಿಸುವ ಸಲುವಾಗಿ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ನಿರ್ಗಮನ ಪರೀಕ್ಷೆಯನ್ನು ಆಯೋಜಿಸುವ ಬಗ್ಗೆ ಕೇಂದ್ರ ಸರಕಾರ ಗಂಭೀರ ಚಿಂತನೆ ನಡೆಸಿದೆ.
ದೇಶದ ಎಲ್ಲ ಸರಕಾರಿ ಹಾಗೂ ಖಾಸಗಿ ವೈದ್ಯಕೀಯ ಶಿಕ್ಷಣ ಕಾಲೇಜುಗಳ ಶಿಕ್ಷಣ ಗುಣಮಟ್ಟ ಖಾತ್ರಿಪಡಿಸಲು ಮತ್ತು ಭಾರತೀಯ ವೈದ್ಯರ ಗುಣಮಟ್ಟದ ಬಗೆಗಿನ ಆತಂಕವನ್ನು ದೂರ ಮಾಡುವ ಸಲುವಾಗಿ ಈ ಕ್ರಮಕ್ಕೆ ಮುಂದಾಗಿದೆ.
ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ ನೇತೃತ್ವದ ಉನ್ನತ ಮಟ್ಟದ ಸಮಿತಿ ವೈದ್ಯಕೀಯ ಶಿಕ್ಷಣ ಕ್ಷೇತ್ರದ ಗುಣಮಟ್ಟ ಸುಧಾರಣೆಗೆ ವ್ಯಾಪಕ ಕ್ರಮಗಳನ್ನು ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಕೇಂದ್ರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಪ್ರಧಾನಿಯವರ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಿಶ್ರಾ ಹಾಗೂ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಭ್ಕಾಂತ್ ಈ ಸಮಿತಿಯ ಸದಸ್ಯರಾಗಿದ್ದರು.
ಭಾರತೀಯ ವೈದ್ಯಕೀಯ ಮಂಡಳಿಯನ್ನು ರದ್ದು ಮಾಡಿ ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ರಚಿಸುವಂತೆಯೂ ಸಮಿತಿ ಶಿಫಾರಸು ಮಾಡಿದೆ. ಈ ಆಯೋಗದಲ್ಲಿ ವೈದ್ಯಕೀಯ ಪದವಿ, ಸ್ನಾತಕೋತ್ತರ ವೈದ್ಯ ಪದವಿ, ಕಾಲೇಜುಗಳ ಮಾನ್ಯತೆ ಮತ್ತು ರೇಟಿಂಗ್ ಹಾಗೂ ವೈದ್ಯಕೀಯ ದಾಖಲೆ ಮತ್ತು ನೀತಿಸಂಹಿತೆಗಾಗಿ ನಾಲ್ಕು ಸ್ವತಂತ್ರ ಮಂಡಳಿಗಳು ಇರಬೇಕು ಎಂದು ಸಲಹೆ ಮಾಡಿದೆ. ಎನ್ಇಇಟಿ ಜಾರಿಗೊಳಿಸುವುದರಿಂದ ವೈದ್ಯಕೀಯ ಪ್ರವೇಶಕ್ಕೆ ವಿವಿಧ ಪರೀಕ್ಷೆಗಳನ್ನು ಎದುರಿಸುವುದು ತಪ್ಪಲಿದೆ. ಇದರಿಂದ ವೈದ್ಯಕೀಯ ಶಿಕ್ಷಣ ಪ್ರವೇಶದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ವಿಧಾನ ಜಾರಿಗೆ ಬರಲಿದೆ. ಇದರ ಜೊತೆಗೆ ನಿರ್ಗಮನ ಪರೀಕ್ಷೆ ಮತ್ತು ಹೊಸ ನಿಯಂತ್ರಣ ವ್ಯವಸ್ಥೆಯನ್ನು ಜಾರಿಗೊಳಿಸುವುದರಿಂದ ಅಂತಿಮ ಪರಿಣಾಮ ಧನಾತ್ಮಕವಾಗಲಿದೆ ಎಂಬ ವಿಶ್ವಾಸವನ್ನು ಉನ್ನತ ಮೂಲಗಳು ವ್ಯಕ್ತಪಡಿಸಿವೆ.
..............
ಸ್ವಾಮಿ ವಿರುದ್ಧದ 6 ಮಾನಹಾನಿ ಪ್ರಕರಣಗಳಿಗೆ ಹೈಕೋರ್ಟ್ ತಡೆ
ಚೆನ್ನೈ,ಜು.27: ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಅವಮಾನಕಾರಿ ಹೇಳಿಕೆಗೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರ ವಿರುದ್ಧ ತಮಿಳುನಾಡು ಸರಕಾರವು ದಾಖಲಿಸಿರುವ ಎಲ್ಲ ಆರೂ ಮಾನಹಾನಿಕರ ಪ್ರಕರಣಗಳ ವಿಚಾರಣೆಗೆ ಮದ್ರಾಸ್ ಉಚ್ಚ ನ್ಯಾಯಾಲಯವು ಬುಧವಾರ ಮಧ್ಯಾಂತರ ತಡೆಯಾಜ್ಞೆಯನ್ನು ನೀಡಿದೆ.
ನ್ಯಾ.ಪಿ.ಎನ್.ಪ್ರಕಾಶ್ ಅವರು 6 ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದಲ್ಲಿ ಸ್ವಾಮಿಯವರ ಖುದ್ದು ಹಾಜರಾತಿಗೆ ವಿನಾಯಿತಿಯನ್ನೂ ನೀಡಿದರು.
ಸಿಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಂ.ಎಲ್.ಜಗನ್ ಅವರು ಜಯಲಲಿತಾರ ಪರವಾಗಿ ಈ ಪ್ರಕರಣಗಳನ್ನು ದಾಖಲಿಸಿದ್ದರು.
ಎಲ್ಲ ಪ್ರಕರಣಗಳ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಿರುವಂತೆ ಸ್ವಾಮಿಯವರಿಗೆ ಸೂಚಿಸಲಾಗಿತ್ತು.
ಸುದ್ದಿಗಾರರೊಡನೆ ಮಾತನಾಡಿದ ಸ್ವಾಮಿ,ಈ ಆದೇಶವನ್ನು ತಾನು ಸ್ವಾಗತಿಸುವುದಾಗಿ ಹೇಳಿದರು.