ಕಾಶ್ಮೀರ: ಕರ್ಫ್ಯೂ ಮರುಜಾರಿ
ಶ್ರೀನಗರ, ಜು.27: ಕುಲ್ಗಾಂವ್ ಜಿಲ್ಲೆಗೆ ಪ್ರತ್ಯೇಕತಾವಾದಿಗಳ ಮೆರವಣಿಗೆಯೊಂದನ್ನು ತಡೆಯಲು ನಗರದ 5 ಪೊಲೀಸ್ ಠಾಣಾ ವ್ಯಾಪ್ತಿಗಳು ಸೇರಿದಂತೆ ಕಾಶ್ಮೀರದ ಭಾಗಗಳಲ್ಲಿ ಇಂದು ಕರ್ಫ್ಯೂವನ್ನು ಮತ್ತೆ ಜಾರಿಗೊಳಿಸಲಾಗಿದೆ. ಇದೇ ವೇಳೆ, ಜು.8ರಿಂದ ಹಿಂಸಾಚಾರದಲ್ಲಿ ನಲುಗಿರುವ ಕಣಿವೆಯಲ್ಲಿ ಮೊಬೈಲ್ ಸೇವೆಗಳನ್ನು ಭಾಗಶಃ ಪುನಾರಂಭಿಸಲಾಗಿದೆ.
ಅಧಿಕಾರಿಗಳು ನಿನ್ನೆ ಅನಂತನಾಗ್ ಪಟ್ಟಣ ಹೊರತುಪಡಿಸಿ ಕಾಶ್ಮೀರದಲ್ಲಿ ಕರ್ಫ್ಯೂವನ್ನು ಹಿಂದೆಗೆದಿದ್ದರು. ಅದರಿಂದಾಗಿ ಅಲ್ಲಿ ಹೊಸದಾಗಿ ಪ್ರತಿಭಟನೆ ಆರಂಭವಾಗಿದೆ.
ನಿನ್ನೆ ನಗರದಲ್ಲಿ ನಡೆದ ಘರ್ಷಣೆಯ ವೇಳೆ 61ರ ಹರೆಯದ ವ್ಯಕ್ತಿಯೊಬ್ಬ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದು, ಇತರ 14 ಮಂದಿ ಕಾಶ್ಮೀರದಾದ್ಯಂತ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದಾರೆ.
ಕಾನೂನು-ಸುವ್ಯವಸ್ಥೆಯನ್ನು ಕಾಪಾಡಲು ಮುನ್ನೆಚ್ಚರಿಕೆಯ ಕ್ರಮವಾಗಿ ಸಂಪೂರ್ಣ ಕುಲ್ಗಾಂವ್ ಜಿಲ್ಲೆ ಹಾಗೂ ಅನಂತನಾಗ್ ಪಟ್ಟಣದಲ್ಲಿ ಕರ್ಫ್ಯೂವನ್ನು ಪುನಃ ಜಾರಿಗೊಳಿಸಲಾಗಿದೆಯೆಂದು ಪೊಲೀಸ್ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ. ಕಣಿವೆಯ ಇತರ ಜಿಲ್ಲೆಗಳಲ್ಲೂ ನಿರ್ಬಂಧಗಳಿವೆಯೆಂದು ಅವರು ಹೇಳಿದ್ದಾರೆ.





