ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲು ಸಾವಿರಾರು ದಲಿತರ ನಿರ್ಧಾರ
ಉನಾ ಘಟನೆಯ ನೋವು
ಅಹ್ಮದಾಬಾದ್, ಜು.27: ಉನಾದಲ್ಲಿ ದಲಿತರ ಮೇಲೆ ನಡೆದ ಮಾರಕ ಹಲ್ಲೆಯ ಹಿನ್ನೆಲೆಯಲ್ಲಿ ಬಾಣಸ್ಕಂಠ ಜಿಲ್ಲೆಯಲ್ಲಿ ಸಮುದಾಯದ ಕನಿಷ್ಠ 1 ಸಾವಿರ ಸದಸ್ಯರು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಸಮಾನತೆಯಿಂದ ನಡೆಸಿಕೊಳ್ಳದಿದ್ದಲ್ಲಿ ತಾವು ಹಿಂದೂಗಳಾಗಿ ಮುಂದುವರಿಯುವುದರಲ್ಲಿ ಅರ್ಥವಿಲ್ಲವೆಂದು ಅವರು ಅಭಿಪ್ರಾಯಿಸಿದ್ದಾರೆ.
ಮತಾಂತರಕ್ಕೆ ಸಮ್ಮತಿ ಸೂಚಿಸಿ, ಈ ದಲಿತರು ಫಾರ್ಮ್ಗಳನ್ನು ತುಂಬಿದ್ದು, ಅವುಗಳನ್ನು ಶೀಘ್ರವೇ ಸರಕಾರಿ ಅಧಿಕಾರಿಗಳಿಗೆ ಸಲ್ಲಿಸಲಿದ್ದಾರೆ.
ಇದೇ ವೇಳೆ, ತಮ್ಮ ಚಳವಳಿಯ ಮಾರ್ಗನಕ್ಷೆಯನ್ನು ನಿರ್ಧರಿಸಲು ಜು.31ರಂದು ಇಲ್ಲಿ ಸಭೆಯೊಂದನ್ನು ಸಂಘಟಿಸುವ ಘೋಷಣೆಯನ್ನು ವಿವಿಧ ದಲಿತ ಹಕ್ಕು ಸಂಘಟನೆಗಳು ಮಾಡಿವೆ.
ಉನಾದಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದ ರಾಜ್ಯಾದ್ಯಂತದ ದಲಿತರಿಗೆ ತೀವ್ರ ನೋವಾಗಿದೆ. ಇದು ತಾವಿನ್ನೂ ಜಾತಿ, ಮತ ಹಾಗೂ ವೃತ್ತಿಯ ಹೆಸರಿನಲ್ಲಿ ತಾರತಮ್ಯ ಹಾಗೂ ನಾನಾ ರೀತಿಯ ದೌರ್ಜನ್ಯಕ್ಕೆ ಒಳಗಾಗುತ್ತಿರುವುದನ್ನು ತೋರಿಸುತ್ತಿದೆ. ಅದಕ್ಕಾಗಿ ಬಾಣಸ್ಕಂಠದ ಹಲವು ಮಂದಿ ದಲಿತರು ಬೌದ್ಧ ಧರ್ಮಕ್ಕೆ ಪರಿವರ್ತನೆಗೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದಾರೆಂದು ಸ್ಥಳೀಯ ದಲಿತ ನಾಯಕ ಹಾಗೂ ಬಿಡಿಎಸ್ನ ಕಾರ್ಯದರ್ಶಿ ದಿನೇಶ್ ಮಹ್ವಾನಾ ಎಂಬವರು ಹೇಳಿದ್ದಾರೆ.
ಕಳೆದ ಮೂರು ದಿನಗಳಲ್ಲಿ ಸಾವಿರಾರು ದಲಿತರು ಪ್ರತಿಭಟನಾ ರ್ಯಾಲಿಗಳಲ್ಲಿ ಭಾಗವಹಿಸಿದ್ದಾರೆ. ಸಮಾನವಾಗಿ ನಡೆಸಿಕೊಳ್ಳದಿದ್ದರೆ ತಾವು ಹಿಂದೂ ಧರ್ಮವನ್ನು ಅನುಸರಿಸುವುದರಲ್ಲಿ ಅರ್ಥವಿಲ್ಲವೆಂಬ ನಿರ್ಧಾರಕ್ಕೆ ಸಭೆಯೊಂದರಲ್ಲಿ ತಾವು ಬಂದಿದ್ದೇವೆ. ಅದಕ್ಕಾಗಿ ಮತಾಂತರವಾಗ ಬಯಸುವವರಿಗೆ ತಾವು ಫಾರ್ಮ್ಗಳನ್ನು ಹಂಚಿದ್ದೇವೆ. ಇದುವರೆಗೆ ಅಂತಹ ಸುಮಾರು 1 ಸಾವಿರದಷ್ಟು ಫಾರ್ಮ್ಗಳು ತುಂಬಿಸಲ್ಪಟ್ಟು ತಮಗೆ ಮರಳಿ ಬಂದಿವೆಯೆಂದು ಅವರು ತಿಳಿಸಿದ್ದಾರೆ.
ಗುಜರಾತ್ನಲ್ಲಿ ಮತಾಂತರವು ಗುಜರಾತ್ ಧಾರ್ಮಿಕ ಸ್ವಾತಂತ್ರ ಕಾಯ್ದೆ -2008ರ ಅನ್ವಯ ನಡೆಯುತ್ತದೆ. ಅದರನ್ವಯ ಮತಾಂತರಗೊಳ್ಳಲು ಬಯಸುವ ವ್ಯಕ್ತಿಯು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಬೇಕಾಗುತ್ತದೆ.