ಸಲ್ಮಾನ್ ಕೃಷ್ಣಮೃಗಗಳನ್ನು ಕೊಂದಿದ್ದು ಹೌದು ಎಂದ ಸಾಕ್ಷಿ
'ನಾಪತ್ತೆ' ಡ್ರೈವರ್ ನಿಂದ ಈಗ ಸಲ್ಮಾನ್ ಬೇಟೆ!
ಜೋಧಪುರ, ಜು.28: ಕೃಷ್ಣಮೃಗ ಕಳ್ಳಬೇಟೆ ಆರೋಪದಿಂದ ಮುಕ್ತರಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನೇ ಬೇಟೆಯಾಡಲು ಅವರ ಚಾಲಕರಾಗಿದ್ದ ಹರೀಶ್ ದುಲಾನಿ ಮುಂದಾಗಿದ್ದಾರೆ.
ಚಿಂಕಾರಾ ಕಳ್ಳಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರನ್ನು ಆರೋಪಮುಕ್ತಗೊಳಿಸಿದ, ರಾಜಸ್ಥಾನ ಹೈಕೋರ್ಟ್ ಕ್ರಮವನ್ನು, ಸುಧೀರ್ಘ ಕಾಲದಿಂದ 'ನಾಪತ್ತೆಯಾಗಿದ್ದರು' ಎನ್ನಲಾದ ದುಲಾನಿ ಪ್ರಶ್ನಿಸಿದ್ದಾರೆ. 1998ರಲ್ಲಿ ಘಟನೆ ನಡೆದಿದೆ ಎನ್ನಲಾದ ವೇಳೆ, ಸಲ್ಮಾನ್ ಅವರ ಚಾಲಕರಾಗಿದ್ದ ದುಲಾನಿ ಪ್ರಕರಣದ ಏಕೈಕ ಸಾಕ್ಷಿ ಎನಿಸಿದ್ದರು.
ಹಲವು ಸಮನ್ಸ್ ಗಳನ್ನು ನಿರ್ಲಕ್ಷಿಸಿ ವಿಚಾರಣೆ ತಪ್ಪಿಸಿಕೊಂಡಿದ್ದ ದುಲಾನಿ, ಈ ಪ್ರಕರಣದಲ್ಲಿ ತನ್ನನ್ನು ಸಾಕ್ಷಿಯಾಗಿ ಪರಿಗಣಿಸಿದ ಬಳಿಕ, ಬೆದರಿಕೆ ಹಾಕಿ ನನ್ನನ್ನು ವಿಚಾರಣೆಯಿಂದ ಹೊರಗುಳಿಯುವಂತೆ ಒತ್ತಡ ತರಲಾಯಿತು ಎಂದು ಅವರು ಬುಧವಾರ ಬಹಿರಂಗಗೊಳಿಸಿದ್ದಾರೆ. 1998ರಲ್ಲಿ ಮ್ಯಾಜಿಸ್ಟ್ರೇಟ್ ಅವರ ಮುಂದೆ ನೀಡಿದ ಹೇಳಿಕೆಗೆ ತಾವು ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ಸಲ್ಮಾನ್ ಖಾನ್ ಕೃಷ್ಣ ಮೃಗ ಕೊಂದದ್ದು ನಿಜ ಎಂದು ದುಲಾನಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದರು.
ಸಲ್ಮಾನ್ ಅವರಿಗೆ ಶಿಕ್ಷೆ ವಿಧಿಸಿದ್ದ ಕೆಳ ನ್ಯಾಯಾಲಯದ ತೀರ್ಪನ್ನು ಬದಿಗಿಟ್ಟ ರಾಜಸ್ಥಾನ ಹೈಕೋರ್ಟ್, ಸೋಮವಾರ ಬಾಲಿವುಡ್ ನಟನನ್ನು ಆರೋಪಮುಕ್ತಗೊಳಿಸಿತ್ತು. ದುಲಾನಿ ಕಣ್ಮರೆಯಾಗಿರುವುದರಿಂದ, ಸಲ್ಮಾನ್ ಪರ ವಕೀಲರು ಅವರನ್ನು ಪಾಟಿಸವಾಲಿಗೆ ಗುರಿಪಡಿಸಲು ಸಾಧ್ಯವಾಗಲಿಲ್ಲ. ಆದ ಕಾರಣ ಅವರ ಹೇಳಿಕೆಯನ್ನು ಸಾಕ್ಷಿ ಎಂದು ಪರಿಗಣಿಸುವಂತಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.