ಮರಕಡ: ಶಾಲಾ ಶಿಕ್ಷಕರ ವರ್ಗಾವಣೆ ಖಂಡಿಸಿ ಪೋಷಕರ, ವಿದ್ಯಾರ್ಥಿಗಳ ಧರಣಿ

ಮಂಗಳೂರು, ಜು.28: ನಗರದ ಮರಕಡ ಸರಕಾರಿ ಶಾಲೆಯಲ್ಲಿ 302 ವಿದ್ಯಾರ್ಥಿಗಳಿದ್ದು, 13 ಶಿಕ್ಷಕರ ಪೈಕಿ 5 ಶಿಕ್ಷಕರನ್ನು ಹೆಚ್ಚುವರಿ ಎಂದು ವರ್ಗಾವಣೆ ಮಾಡುವುದನ್ನು ಖಂಡಿಸಿ ಕುಂಜತ್ತಬೈಲ್ನ ಮರಕಡ ಶಾಲೆಯ ಎಸ್ಡಿಎಂಸಿ, ಹಳೆ ವಿದ್ಯಾರ್ಥಿ ಸಂಘ , ಸ್ಥಳೀಯ ಸಂಘ ಸಂಸ್ಥೆಗಳು ಪೋಷಕರು ಮಕ್ಕಳು ಶಾಲೆಯ ಗೇಟನ್ನು ತೆರೆಯಲು ಬಿಡದೆ ಧರಣಿ ನಡೆಸಿದರು.
ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ದಯಾನಂದ ಶೆಟ್ಟಿ, ಸರಕಾರಿ ಶಾಲೆಗಳನ್ನು ಹಂತಹಂತವಾಗಿ ಮುಚ್ಚುವಂತಹ ಹುನ್ನಾರ ಸರಕಾರ ನಡೆಸುತ್ತಿದೆ. ಸರಕಾರ ಶಾಲೆಗಳನ್ನು ಬಲಪಡಿಸುವ ಬದಲಾಗಿ ದುರ್ಬಲಗೊಳಿಸುತ್ತಿದೆ ಎಂದರು. ಸರಕಾರ ಕೂಡಲೇ ವರ್ಗಾವಣೆ ಪ್ರಕ್ರಿಯೆ ಕೈ ಬಿಡಬೇಕೆಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎ. ಮೊಯ್ದೀನ್ ಬಾವರಿಗೆ ಹೆಚ್ಚುವರಿ ಶಿಕ್ಷಕರನ್ನು ಉಳಿಸುವ ಬಗ್ಗೆ ಮನವಿ ಸಲ್ಲಿಸಲಾಯಿತು. ಶಿಕ್ಷಣ ಸಚಿವರು ಸಮಸ್ಯೆ ಪರಿಹರಿಸುವುದಾಗಿ ಆಶ್ವಾಸನೆಯನ್ನು ನೀಡಿದ್ದಾರೆಂದು ಶಾಸಕ ಮೊಯ್ದೀನ್ ಬಾವ ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಹರಿನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮೀ, ಸ್ಥಳೀಯ ಜನಪ್ರತಿನಿಧಿ ಮುಹಮ್ಮದ್ ಶರೀಫ್ರಿಗೆ ಶಾಲೆಯ ಶಿಕ್ಷಕರನ್ನು ಇಲ್ಲಿಯೇ ಉಳಿಸುವ ಬಗ್ಗೆ ಮನವಿ ಪತ್ರವನ್ನು ನೀಡಲಾಯಿತು.
ಈ ಸಂದರ್ಭ ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಚರಣ್ ಶೆಟ್ಟಿ , ಮಾಜಿ ಕಾರ್ಪೊರೇಟರ್ ಶರತ್ , ಶಾಲಾ ಮೇಲುಸ್ತುವಾರಿ ದಾಮೋದರ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರಾಯಣ ಸಾಲಿಯಾನ್ ಡಿವೈಎಫ್ಐನ ಮುಖಂಡರಾದ ನೌಶಾದ್ ಬಾವಾ, ಸಂತೋಷ್ ಪಂಜಿಮೊಗರು, ಶಂಶದ್, ಎಸ್ಡಿಪಿಐನ ನೌಶದ್ ಕಾವೂರು, ಕುಂಜತ್ತಬೈಲ್ನ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದರು. ಹಳೆ ವಿದ್ಯಾರ್ಥಿ ಸಂಘ ಸಂಘದ ಕಾರ್ಯದರ್ಶಿ ರೆಹ್ಮಾನ್ ಖಾನ್ ಕುಂಜತ್ತಬೈಲ್ ಸ್ವಾಗತಿಸಿ, ನಿರೂಪಿಸಿದರು.







