ಶಿಕ್ಷಕರ ವರ್ಗಾವಣೆ ವಿರೋಧಿಸಿ ಹಲವು ಶಾಲೆಗಳಲ್ಲಿ ಪ್ರತಿಭಟನೆ
![ಶಿಕ್ಷಕರ ವರ್ಗಾವಣೆ ವಿರೋಧಿಸಿ ಹಲವು ಶಾಲೆಗಳಲ್ಲಿ ಪ್ರತಿಭಟನೆ ಶಿಕ್ಷಕರ ವರ್ಗಾವಣೆ ವಿರೋಧಿಸಿ ಹಲವು ಶಾಲೆಗಳಲ್ಲಿ ಪ್ರತಿಭಟನೆ](https://www.varthabharati.in/sites/default/files/images/articles/2016/07/28/munoor-school.jpg)
ಮಂಗಳೂರು,ಜು.28: ರಾಜ್ಯ ಸರ್ಕಾರದ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಆದೇಶವನ್ನು ವಿರೋಧಿಸಿ ಕುತ್ತಾರು ಪದವು ಪ್ರದೇಶದ ಸರಕಾರಿ ಪ್ರಾಥಮಿಕ ಶಾಲೆ ಮುನ್ನೂರು, ಬೆಂಗರೆ, ಉಳ್ಳಾಲ ಒಂಬತ್ತುಕೆರೆ, ಪಡುಪಣಂಬೂರು, ಮರಕಡ, ತಡಂಬೈಲ್, ಗುರುಪುರ ನಡುಗುಡ್ಡೆ ಮೊದಲಾದ ಶಾಲೆಗಳಲ್ಲಿ ಇಲ್ಲಿ ಎಸ್ಎಫ್ಐ, ಡಿವೈಎಫ್ಐ ಹಾಗೂ ಎಸ್ಡಿಎಂಸಿ ನೇತೃತ್ವದಲ್ಲಿ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಮುನ್ನೂರು ಶಾಲೆಯಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ಎಫ್ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ರಾಜ್ಯ ಸರಕಾರದ ಹೊಸ ವರ್ಗಾವಣೆ ಆದೇಶವು ಅವೈಜ್ಞಾನಿಕವಾಗಿದ್ದು ಸರಕಾರಿ ಶಾಲೆಗಳನ್ನು ಮುಚ್ಚುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ. ದೈಹಿಕ ಶಿಕ್ಷಣವು ಶಿಕ್ಷಣದ ಭಾಗವಾಗಿದ್ದು ಆದರೆ 200 ರಷ್ಟು ವಿದ್ಯಾರ್ಥಿಗಳು ಇದ್ದರೆ ಮಾತ್ರ ದೈಹಿಕ ಶಿಕ್ಷಕರು ಎಂಬ ನೀತಿಯು ನ್ಯಾಯಯುತವಲ್ಲ ಎಂದು ಹೇಳಿದರು.
ಪಂಚಾಯತ್ ಮಾಜಿ ಅಧ್ಯಕ್ಷ ರಹ್ಮಾನ್ ಮಾತನಾಡಿ, ನನ್ನ ಮಕ್ಕಳನ್ನು ವಿದ್ಯಾರ್ಥಿಗಳಿಗೆ ಪೂರಕವಾದ ವಾತಾವರಣವಿದೆ ಎಂಬ ಕಾರಣದಿಂದ ಸರಕಾರಿ ಶಾಲೆಗೆ ಸೇರಿಸಿದ್ದು, ಆದರೆ ಸರಕಾರ ಶಾಲೆಯ ಗುಣಮಟ್ಟ ಕುಸಿಯುವಂತೆ ಮಾಡುತ್ತಿದ್ದು, ಪೋಷಕರು ಮತ್ತು ಶಿಕ್ಷಕರಲ್ಲಿ ಅವಿನಾಭಾವ ಸಂಬಂಧವಿದ್ದು ಈ ಶಿಕ್ಷಕರು ಹೋದರೆ ವಿದ್ಯಾರ್ಥಿಗಳನ್ನು ಶಾಲೆಯಿಂದ ತೆಗೆಯಬೇಕಾದ ಅನಿವಾರ್ಯತೆ ಬರಬಹುದು ಎಂದರು.
ಡಿವೈಎಫ್ಐ ಮುಖಂಡರಾದ ಮಹಾಬಲ ದೆಪ್ಪೆಲಿಮಾರ್ ಮಾತನಾಡಿ, ಶಾಲೆಯಲ್ಲಿ ಏನೇ ಸಮಸ್ಯೆಯಾದರೂ ಶಿಕ್ಷಕರೇ ಆ ಸಮಸ್ಯೆಯನ್ನು ಬಗೆಹರಿಸುತ್ತಿದ್ದರು. ಹಿಂದೆ ಈ ಶಾಲೆಯ ಮೇಲ್ಛಾವಣಿ ಕುಸಿದ ಸಂದರ್ಭ ಶಿಕ್ಷಕರೇ ನಮ್ಮನ್ನು ಮನವಿ ಮಾಡಿದ ಕಾರಣಕ್ಕಾಗಿ ದುರಸ್ತಿಗೊಳಿಸಿದ್ದು, ಸರಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ.ಆದರೆ ಹೀಗಿರುವಾಗ ಈ ಶಿಕ್ಷಕರನ್ನೇ ವರ್ಗಾವಣೆ ಮಾಡಿದರೆ ಶಾಲೆಯ ಪರಿಸ್ಥಿತಿ ಕೇಳುವವರು ಯಾರು ಇರಲಿಕ್ಕಿಲ್ಲ. ಆದ್ದರಿಂದ ಕೂಡಲೇ ಸರಕಾರ ಈ ಬಗ್ಗೆ ಆಲೋಚಿಸಬೇಕೆಂದು ಅಗ್ರಹಿಸಿದರು.
ಅಲ್ಲದೇ, ಶಾಲೆಯ ವಿದ್ಯಾರ್ಥಿಗಳೂ ತಮ್ಮ ನೆಚ್ಚಿನ ಶಿಕ್ಷಕಿಯ ವರ್ಗಾವಣೆ ವಿರೋಧಿಸಿ ಮಾತನಾಡಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪ್ರತಿಭಟನೆಯ ಮಹತ್ವವನ್ನು ವಿವರಿಸಿ ಮನವಿ ಪತ್ರ ಸಲ್ಲಿಸಲಾಯಿತು. ಈ ಪ್ರತಿಭಟನೆಯ ನೇತೃತ್ವವನ್ನು ಎಸ್ಡಿಎಂಸಿ ಅಧ್ಯಕ್ಷ ಮುಸ್ತಫ, ಸದಸ್ಯರಾದ ಕವಿತ, ಪಂಚಾಯತ್ ಸದಸ್ಯರಾದ ಇಸ್ಮಾಯೀಲ್, ಚಂದ್ರಾವತಿ, ಶಶಿಕಲಾ ಮತ್ತು ಮುಖಂಡರಾದ ಅಭಿಷೇಕ್, ಲಿಮಿತಾ, ದೀಕ್ಷಿತ್, ಡಿವೈಎಫ್ಐ ಮುಖಂಡರಾದ ಭರತ್, ಮಿಥುನ್ ಕಂಪ, ಸಂಕೇತ್ ಮತ್ತು ಪೋಷಕರಾದ ಗಾಯತ್ರಿ, ಮಾಲತಿ ವಹಿಸಿದ್ದರು.
ಬೆಂಗರೆ ಶಾಲೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಡಿವೈಎಫ್ಐ ನಾಯಕರಾದ ಬಿ.ಕೆ. ಇಮ್ತಿಯಾಝ್, ಸಂತೋಷ್ ಬಜಾಲ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಶಾಲಾ ಎಸ್ಡಿಎಂಸಿ ಅಧ್ಯಕ್ಷೆ ಕೈರುನ್ನೀಸಾ, ಡಿವೈಎಫ್ಐನ ಸ್ಥಳೀಯ ಮುಖಂಡರಾದ ರಿಯಾಝ್, ಹನೀಫ್ ಬೆಂಗರೆ, ವಹಾಬ್, ಅಸ್ಲಾಂ, ಜಮೀಳಾ, ಜಾಕಿರ, ರುಕ್ಯಾ, ಉಮೈರ್, ಆಯಿಷಾ ಬಾನು ಮೊದಲಾದವರು ಉಪಸ್ಥಿತರಿದ್ದರು.