ಮಧ್ಯಪ್ರದೇಶದಲ್ಲಿ ಮಹಿಳೆಯರ ಮೇಲಿನ ಹಲ್ಲೆಗೆ ಮಾನವ್ ಸಮಾನತಾ ಮಂಚ್ ಖಂಡನೆ
ಮಂಗಳೂರು,ಜು.28: ಮಧ್ಯಪ್ರದೇಶದ ಮಂಡ್ಸೌರ್ ರೈಲು ನಿಲ್ದಾಣದಲ್ಲಿ ಬೀಫ್ ಮಾರಾಟ ಮಾಡುತ್ತಿದ್ದಾರೆಂಬ ವದಂತಿಯನ್ನು ಆಧರಿಸಿ ತಮ್ಮನ್ನು ತಾವು ಗೋರಕ್ಷಕರೆಂದು ಕರೆಸಿಕೊಳ್ಳುವ ವ್ಯಕ್ತಿಗಳು ಇಬ್ಬರು ಮಹಿಳೆಯರ ಮೇಲೆ ಅಮಾನುಷವಾಗಿ ಹಲ್ಲೆಗೈದದ್ದನ್ನು ಹಾಗೂ ಈ ಘಟನೆಗೆ ಪೊಲೀಸರು ಮೂಕಪ್ರೇಕ್ಷಕರಾಗಿದ್ದನ್ನು ಮಾನವ್ ಸಮಾನತಾ ಮಂಚ್ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರಕಟನೆ ತಿಳಿಸಿದೆ.
ಕಾನೂನಿನ ಚೌಕಟ್ಟಿನೊಳಗೆ ತಮಗೆ ಇಷ್ಟವಾದದ್ದನ್ನು ತಿನ್ನುವ ಹಕ್ಕನ್ನು ನಮ್ಮ ಸಂವಿಧಾನವು ಪ್ರತಿ ಭಾರತೀಯನಿಗೆ ನೀಡಿರುವಾಗ ತಮಗೆ ತಾವೇ ಗೋರಕ್ಷಕರೆಂಬ ಹಣೆಪಟ್ಟಿ ಹಚ್ಚಿಕೊಂಡು ಕಾನೂನನ್ನು ಕೈಗೆತ್ತಿಕೊಂಡ ಈ ಸಮಾಜ ಕಂಟಕರು ಹಾಗೂ ಸಾರ್ವಜನಿಕರ ರಕ್ಷಣೆ ಮಾಡುವ ಬದಲು ಬೀದಿ ನಾಟಕ ವೀಕ್ಷಕರಂತೆ ಕಣ್ಣ ಮುಂದೆ ನಡೆಯುತ್ತಿದ್ದ ಹಿಂಸಾಚಾರದ ಬಗ್ಗೆ ನಿರ್ಲಿಪ್ತ ಧೋರಣೆ ತೋರಿದ ಪೊಲೀಸರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾನವ್ ಸಮಾನತಾ ಮಂಚ್ ಆಗ್ರಹಿಸಿದೆ.
ತಮ್ಮ ಧೋರಣೆಗೆ ವಿರೋಧಿಗಳೆಂದು ಕಂಡು ಬರುವವರನ್ನು ಕುಂಟು ನೆಪ ನೀಡಿ ಸದೆ ಬಡಿಯಲು ಸ್ವಾತಂತ್ರ ನೀಡಿ ಜಾಣ ವೌನ ತಾಳುವ ಪ್ರ.ಮಂತ್ರಿಗಳಿಂದ ಅಚ್ಚೇದಿನ್ ನಿರೀಕ್ಷಿಸಲು ಸಾಧ್ಯವೆ ಎಂದು ಸಂಘದ ಪದಾಧಿಕಾರಿಗಳಾದ ಅಲಿ ಹಸನ್, ರೋಶನ್ ಪತ್ರಾವೊ, ವಸಂತ್ ಟೈಲರ್ ಮತ್ತಿತ್ತರರು ಪ್ರಶ್ನಿಸಿದ್ದಾರೆ.