ರೈಲ್ವೆ ಟಿಕೆಟ್ ಕಾದಿರಿಸುವವರಿಗೆ ಪ್ರಯಾಣ ವಿಮೆ ಸೌಲಭ್ಯ
ಹೊಸದಿಲ್ಲಿ, ಜು.28: ಆನ್ಲೈನ್ನಲ್ಲಿ ಐಆರ್ಸಿಟಿಸಿ ಮೂಲಕ ರೈಲ್ವೆ ಟಿಕೆಟ್ ಕಾಯ್ದಿರಿಸುವವರು ಸೆಪ್ಟ್ಟಂಬರ್ 1ರಿಂದ ಒಂದು ರೂಪಾಯಿ ವಿಮಾಕಂತು ಪಾವತಿಸಿ ಪ್ರಯಾಣವಿಮಾ ಸೌಲಭ್ಯ ಪಡೆಯಬಹುದಾಗಿದೆ.
ಈ ಯೋಜನೆಯಡಿ ಪ್ರಯಾಣದ ವೇಳೆ ಯಾವುದೇ ಅವಘಡ ಸಂಭವಿಸಿ ಪ್ರಯಾಣಿಕ ಮೃತಪಟ್ಟರೆ ಅಥವಾ ಸಂಪೂರ್ಣ ಅಂಗವೈಕಲ್ಯಕ್ಕೆ ಒಳಗಾದರೆ 10 ಲಕ್ಷ ರೂಪಾಯಿವರೆಗೂ ಪರಿಹಾರ ಪಡೆಯಬಹುದು. ಭಾಗಶಃ ಅಂಗವೈಕಲ್ಯಕ್ಕೆ ಒಳಗಾದರೆ 7.5 ಲಕ್ಷ ಹಾಗೂ ಆಸ್ಪತ್ರೆಗೆ ದಾಖಲಾದರೆ 2 ಲಕ್ಷ ರೂ.ವರೆಗೂ ಪರಿಹಾರ ಪಡೆಯಬಹುದು. ಇದರ ಜತೆಗೆ ಪ್ರಯಾಣಿಕ ಮೃತಪಟ್ಟರೆ ಮೃತದೇಹವನ್ನು ಸಾಗಿಸಲು 10 ಸಾವಿರ ರೂ.ವರೆಗೂ ಪರಿಹಾರ ಪಡೆಯಬಹುದಾಗಿದೆ. ರೈಲು ಅಪಘಾತ, ಭಯೋತ್ಪಾದಕ ದಾಳಿ, ಡಕಾಯಿತಿ, ದೊಂಬಿ, ಶೂಟೌಟ್ಗಳಂತಹ ಅನಾಹುತಗಳಿಗೆ ಇದು ಅನ್ವಯಿಸುತ್ತದೆ. ಐಆರ್ಸಿಟಿಸಿ ವೆಬ್ಸೈಟ್ ಮೂಲಕ ಇ- ಟಿಕೆಟ್ ಕಾಯ್ದಿರಿಸುವ ಎಲ್ಲರೂ ಈ ಸೌಲಭ್ಯ ಪಡೆಯಬಹುದು. ಉಪನಗರ ರೈಲುಗಳಿಗೆ ಮಾತ್ರ ಇದು ಅನ್ವಯಿಸುವುದಿಲ್ಲ.
ಈ ಯೋಜನೆಯನ್ನು ಐಆರ್ಸಿಟಿಸಿ, ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್, ರಾಯಲ್ ಸುಂದರಮ್ ಹಾಗೂ ಶ್ರೀರಾಮ್ ಜನರಲ್ ಸಹಯೋಗದಲ್ಲಿ ಅನುಷ್ಠಾನಕ್ಕೆ ತರಲಿದೆ. ಬಿಡ್ಡಿಂಗ್ನಲ್ಲಿ ಭಾಗವಹಿಸಿದ್ದ 19 ವಿಮಾ ಕಂಪೆನಿಗಳ ಪೈಕಿ ಮೂರನ್ನು ಆಯ್ಕೆ ಮಾಡಲಾಗಿದೆ.