ಅರ್ನಬ್, ಟೈಮ್ಸ್ ನೌ ವಿರುದ್ಧ ಝಾಕಿರ್ ನಾಯ್ಕ್ ರಿಂದ 500 ಕೋಟಿ ರೂ. ಮಾನನಷ್ಟ ದಾವೆ
ಮುಂಬೈ, ಜು.29: ತನ್ನ ವಿರುದ್ಧ ‘ಸುಳ್ಳು ಹಾಗೂ ಮಾನಹಾನಿಕರ’ ವರದಿಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಇಸ್ಲಾಮಿಕ್ ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್ ಅವರು ‘ಟೈಮ್ಸ್ ನೌ’ ಟಿವಿ ಚಾನೆಲ್ ವಿರುದ್ಧ ಮಾನನಷ್ಟ ನೋಟಿಸ್ ಜಾರಿಗೊಳಿಸಿದ್ದಾರೆ ಹಾಗೂ 500 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ.
ನೋಟಿಸಿನಲ್ಲಿ ‘ಟೈಮ್ಸ್ ನೌ’ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ, ಅದರ ಮುಂಬೈ ಬ್ಯೂರೋ ಮುಖ್ಯಸ್ಥ ಮೇಘಾ ಪ್ರಸಾದ್ ಹಾಗೂ ಚಾನೆಲ್ ಸಿಇಒ ಸುನಿಲ್ ಲುಲ್ಲ ಅವರನ್ನು ಹೆಸರಿಸಲಾಗಿದ್ದು, ಝಾಕಿರ್ ಅವರ ವಕೀಲ ಮುಬಿನ್ ಸೋಲ್ಕರ್ ಅದನ್ನು ಜಾರಿಗೊಳಿಸಿದ್ದಾರೆ.
‘‘ಟೈಮ್ಸ್ ನೌ ತನ್ನ ‘ದಿ ನ್ಯೂಸ್ಅವರ್ ಡಿಬೇಟ್’ ಕಾರ್ಯಕ್ರಮದಲ್ಲಿ ಇಸ್ಲಾಮಿಕ್ ಧಾರ್ಮಿಕ ವಿದ್ವಾಂಸರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿ ಅವರ ಗೌರವವನ್ನು ಸಾರ್ವಜನಿಕರ ದೃಷ್ಟಿಯಲ್ಲಿ ಕುಂದಿಸಿದ್ದಾರೆ’ ಎಂದು ನೋಟಿಸ್ನಲ್ಲಿ ದೂರಲಾಗಿದೆ.
ಅರ್ನಬ್ ತಮ್ಮ ಪ್ರೈಮ್ ಟೈಮ್ ಡಿಬೇಟ್ ಕಾರ್ಯಕ್ರಮದಲ್ಲಿ ಸ್ಟಾಪ್ ಝಾಕಿರ್ ನಾಯ್ಕಾ ಎಂಬ ಹ್ಯಾಶ್ ಟ್ಯಾಗ್ನೊಂದಿಗೆ ಝಾಕಿರ್ ವಿರುದ್ಧ ಅಭಿಯಾನವೊವಂದನ್ನೇ ನಡೆಸುತ್ತಿದ್ದು, ಚಾನೆಲ್ನ ವರದಿಗಾರರೊಬ್ಬರು ಝಾಕಿರ್ ಅವರೊಂದಿಗೆ ನಡೆಸಿದ ಮೊದಲ ಸಂದರ್ಶನ ಅಷ್ಟೊಂದು ಸೆನ್ಸೇಶನಲ್ ಆಗಿಲ್ಲವೆಂದು ಎರಡನೆ ಬಾರಿ ಸಂದರ್ಶನ ನಡೆಸಿದ್ದರು ಎಂಬ ಅಂಶ ಇತ್ತೀಚೆಗೆ ಬಹಿರಂಗಗೊಂಡಾಗ ಚಾನೆಲ್ ತಲೆ ತಗ್ಗಿಸುವಂತಾಗಿತ್ತು ಎಂದು ಜನತಾ ಕಾ ರಿಪೋರ್ಟರ್ ತನ್ನ ವರದಿಯೊಂದರಲ್ಲಿ ಹೇಳಿದೆ.
ಢಾಕಾ ದಾಳಿಯ ಹಿಂದಿದ್ದ ಉಗ್ರವಾದಿಗಳು ಝಾಕಿರ್ ಅವರಿಂದ ಪ್ರೇರಿತರಾಗಿದ್ದರು ಎಂದು ತಾನು ಆರೋಪಿಸಿ ತಪ್ಪು ಮಾಡಿದೆ ಹಾಗೂ ಝಾಕಿರ್ ಅವರಿಗೆ ಮಲೇಷ್ಯಾದಲ್ಲಿ ನಿಷೇಧ ಹೇರಲಾಗಿದೆ ಎಂಬ ತನ್ನ ವರದಿ ತಪ್ಪುಎಂದು ಬಾಂಗ್ಲಾದೇಶದ ಪತ್ರಿಕೆ ಡೈಲಿ ಸ್ಟಾರ್ ಇತ್ತೀಚೆಗೆ ಹೇಳಿಕೊಂಡಾಗ ಟೈಮ್ಸ್ ನೌ ಭಾರೀ ಮುಜುಗರ ಅನುಭವಿಸುವಂತಾಗಿತ್ತು. ಅದಕ್ಕೆ ಕಾರಣವೂ ಇಲ್ಲದಿಲ್ಲ. ಡೈಲಿ ಸ್ಟಾರ್ ವರದಿಯಾಧರಿಸಿಯೇ ಝಾಕಿರ್ಬಗ್ಗೆ ಟೈಮ್ಸ್ ನೌ ಸಹಿತ ಇತರ ಭಾರತೀಯ ಮಾಧ್ಯಮಗಳು ವರದಿ ಮಾಡಿದ್ದವು.