ಅಂತಾರಾಷ್ಟ್ರೀಯ ಗಣಿತ ಸ್ಪರ್ಧೆಯಲ್ಲಿ ಗೆದ್ದ ಅಹ್ಮದಾಬಾದಿನ 14ರ ಪೋರ
ಹೊಸದಿಲ್ಲಿ,ಜು.29: ಅಹ್ಮದಾಬಾದಿನ ಹೇಮಚಂದ್ರಾಚಾರ್ಯ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿ ತುಷಾರ ತಲಾವತ್(14) ಇತ್ತೀಚಿಗೆ ಇಂಡೋನೇಷ್ಯಾದಲ್ಲಿ ಜರುಗಿದ ಅಂತಾರಾಷ್ಟ್ರೀಯ ಗಣಿತ ಸ್ಪರ್ಧೆಯನ್ನು ಗೆಲ್ಲುವ ಮೂಲಕ ತನ್ನ ‘ಗುರುಕುಲ’ಕ್ಕೆ ಕೀರ್ತಿಯನ್ನು ತಂದಿದ್ದಾನೆ.
ಅಬಾಕಸ್ ಲರ್ನಿಂಗ್ ಆಫ್ ಹೈಯರ್ ಅರಿಥ್ಮ್ಯಾಟಿಕ್ ಇಂಟರ್ನ್ಯಾಷನಲ್ ಇಂಡೋನೇಷ್ಯಾದ ಯೋಗ್ಯಕಾರ್ತಾದಲ್ಲಿ ಜು.24ರಂದು ಏರ್ಪಡಿಸಿದ್ದ ಈ ಸ್ಪರ್ಧೆಯಲ್ಲಿ ವಿಶ್ವಾದ್ಯಂತದ 18 ರಾಷ್ಟ್ರಗಳ 1,300ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತುಷಾರನ ಸಾಧನೆಯು ದೇಶಕ್ಕೆ ಹೆಮ್ಮೆಯನ್ನುಂಟು ಮಾಡುವ ಜೊತೆಗೆ ಗುರುಕುಲ ಶಿಕ್ಷಣ ಪದ್ಧತಿಯತ್ತ ಗಮನವನ್ನು ಸೆಳೆದಿದೆ. ಆತನ ಸಾಧನೆಯಿಂದ ಪ್ರಾಚೀನ ವೈದಿಕ ಗಣಿತವು ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಪ್ರಜ್ವಲಿಸಿದೆ ಎಂದು ಇಲ್ಲಿಯ ಆರೆಸ್ಸೆಸ್ ಅಧೀನದ ಭಾರತೀಯ ಶಿಕ್ಷಣ ಮಂಡಲದ ಜಂಟಿ ಸಂಘಟನಾ ಕಾರ್ಯದರ್ಶಿ ಮುಕುಲ್ ಕಾನಿಟ್ಕರ್ ಹೇಳಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತುಷಾರ ಅಂಕಗಣಿತದ ಲೆಕ್ಕಾಚಾರಗಳಲ್ಲಿ ತನ್ನ ವೇಗವನ್ನು ಪ್ರದರ್ಶಿಸಿದ್ದು,ಬಿಜೆಪಿ ಸಂಸದ ಮನೋಜ ತಿವಾರಿ ಉಪಸ್ಥಿತರಿದ್ದರು.
ತುಷಾರ ಇಂತಹ ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟಗಳ ಸ್ಪರ್ಧೆಗಳನ್ನು ಗೆದ್ದಿದ್ದಾನೆ. ಗುರುಕುಲದಲ್ಲಿ ತನ್ನ ಹತ್ತು ವರ್ಷಗಳ ಶಿಕ್ಷಣದ ಅವಧಿಯಲ್ಲಿ ಆತ ಒಂದೂವರೆ ವರ್ಷಗಳನ್ನು ಮುಗಿಸಿದ್ದಾನೆ. ಹೇಮಚಂದ್ರಾಚಾರ್ಯ ಸಂಸ್ಕೃತ ಪಾಠಶಾಲೆಯು 90 ವಿದ್ಯಾರ್ಥಿಗಳು ಮತ್ತು 150 ಶಿಕ್ಷಕರನ್ನು ಹೊಂದಿದೆ. ತನ್ನನ್ನು ಭೇಟಿಯಾದ ತುಷಾರನನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ಅವರು ಅಭಿನಂದಿಸಿದ್ದಾರೆ.