ಮಹಾದಾಯಿ ಹೋರಾಟ : ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ:ಡಾ.ಜಿ.ಪರಮೇಶ್ವರ್
14 ಪ್ರಕರಣ ದಾಖಲು, 127 ಮಂದಿ ಬಂಧನ

ಬೆಂಗಳೂರು, ಜು.29: ಮಹಾದಾಯಿ ನ್ಯಾಯಾಧೀಕರಣದ ತೀರ್ಪು ವಿರೋಧಿಸಿ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗದಗ, ಬಾಗಲಕೋಟೆ, ಹಾವೇರಿ, ಚಿಕ್ಕಬಳ್ಳಾಪುರ,ಕೋಲಾರದಲ್ಲಿ ಹೋರಾಟಗಳು ನಡೆದಿದ್ದು, 14 ಪ್ರಕರಣಗಳನ್ನು ದಾಖಲಿಸಿ, 127 ಮಂದಿಯನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನರಗುಂದ, ನವಲಗುಂದದಲ್ಲಿ ನಡೆದ ಪ್ರತಿಭಟನೆಯಲ್ಲಿ ಲೋಕೋಪಯೋಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಹಶೀಲ್ದಾರ್, ಬಿಎಸ್ಸೆನ್ನೆಲ್ ಕಚೇರಿಗಳು, ಬಸ್ ನಿಲ್ದಾಣ, ಜೆಎಂಎಫ್ಸಿ ನ್ಯಾಯಾಲಯದ ಕಚೇರಿಗಳಿಗೆ ಹಾನಿಯುಂಟಾಗಿದೆ. ಅಲ್ಲದೆ, ಸರಕಾರಿ ಕಡತಗಳನ್ನು ಸುಟ್ಟು ಹಾಕಲಾಗಿದೆ ಎಂದರು.
2-3 ಕಚೇರಿಗಳು, ಸರಕಾರಿ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇದನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಅಲ್ಲದೆ, ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪ್ರತಿಭಟನೆಗೆ ಸಂಬಂಧಿಸಿದಂತೆ 127 ಮಂದಿಯನ್ನು ಬಂಧಿಸಲಾಗಿದೆ. 14 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಅವರು ಹೇಳಿದರು.
ಹೋರಾಟದ ಸಂದರ್ಭದಲ್ಲಿ ಕ್ರಿಮಿನಾಶಕ ಔಷಧಿ ಸೇವನೆ ಮಾಡಿ ಅಸ್ವಸ್ಥಗೊಂಡಿದ್ದ ನಂದೀಶ್(24) ಹಾಗೂ ಸಂಗಮೇಶ್(26) ಎಂಬವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗದಗ ಜಿಲ್ಲೆಯಲ್ಲಿ 6 ಪ್ರಕರಣಗಳು ದಾಖಲಾಗಿದ್ದು 18 ಮಂದಿಯನ್ನು ಬಂಧಿಸಲಾಗಿದೆ. ಬೆಳಗಾವಿಯಲ್ಲಿ 56, ಹಾವೇರಿಯಲ್ಲಿ 38 ಮಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪರಮೇಶ್ವರ್ ವಿವರಣೆ ನೀಡಿದರು. ಮಹಾದಾಯಿ ನ್ಯಾಯಾಧೀಕರಣದ ತೀರ್ಪಿನಿಂದ ನಮ್ಮ ಮನಸ್ಸಿಗೆ ನೋವಾಗಿದೆ. ರಾಜ್ಯ ಸರಕಾರವು ಕಾನೂನು ಹೋರಾಟವನ್ನು ಮುಂದುವರೆಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವೈಯಕ್ತಿಕ ಕಾರಣಗಳಿಂದಾಗಿ ಬೆಲ್ಜಿಯಂ ದೇಶದ ಬ್ರಸೇಲ್ಸ್ ನಗರಕ್ಕೆ ತೆರಳಿದ್ದಾರೆ. ಅವರು ಹಿಂದಿರುಗಿದ ನಂತರ ಈ ಸಂಬಂಧ ಸೂಕ್ತವಾದ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ನಗರಕ್ಕೆ ಕುಡಿಯುವ ನೀರು ಪೂರೈಸುವುದು ಹಾಗೂ ಮಲಪ್ರಭದ ಕೆಲವು ಭಾಗಗಳಲ್ಲಿ ನೀರಾವರಿ ಉದ್ದೇಶಕ್ಕಾಗಿ ನಾವು ಕೇಳುತ್ತಿರುವುದು ಕೇವಲ 7.56 ಟಿಎಂಸಿ ನೀರು ಮಾತ್ರ. ಆದುದರಿಂದ, ಪ್ರಧಾನಿ ನರೇಂದ್ರಮೋದಿ ಕೂಡಲೆ ಮಧ್ಯಪ್ರವೇಶ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಮಹಾದಾಯಿಗೆ ಸಂಬಂಧಿಸಿದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆದು ನ್ಯಾಯಾಧೀಕರಣದ ಹೊರಗೆ ಸಮಸ್ಯೆಯನ್ನು ಬಗೆಹರಿಸಲು ಪ್ರಧಾನಮಂತ್ರಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕುಡಿಯುವ ನೀರಿನ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದು ಪರಮೇಶ್ವರ್ ಹೇಳಿದರು.
ಪ್ರಗತಿಪರ ಸಂಘಟನೆಗಳು ನಾಳೆ(ಜು.30) ಕರ್ನಾಟಕ ಬಂದ್ಗೆ ಕರೆ ನೀಡಿವೆ. ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಯಲಿ, ಸಾರ್ವಜನಿಕ ಹಾಗೂ ಸರಕಾರಿ ಆಸ್ತಿಪಾಸ್ತಿಗಳಿಗೆ ನಷ್ಟವುಂಟಾಗದಂತೆ ಎಚ್ಚರವಿರಲಿ. ಕಾನೂನು ಕೈಗೆತ್ತಿಕೊಳ್ಳಲು ಯಾರೂ ಮುಂದಾದರೆ ಅವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.
ಬಂದ್ ಸಂದರ್ಭದಲ್ಲಿ ಯಾವುದೆ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಮುಖವಾಗಿ ಮಹಾದಾಯಿ ಹೋರಾಟ ತೀವ್ರಗೊಂಡಿರುವ ಐದು ಜಿಲ್ಲೆಗಳಲ್ಲಿ ಹೆಚ್ಚಿನ ಗಮನ ಕೇಂದ್ರಿಕರಿಸುವಂತೆ ಆದೇಶಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ನವಲಗುಂದದಲ್ಲಿ ಸುಮಾರು 70 ಲಕ್ಷ ರೂ.ನಷ್ಟವಾಗಿದೆ ಎಂದು ಅಂದಾಜಿಸಲಾಗಿದ್ದು, ಇನ್ನು ಪರಿಶೀಲನೆ ನಡೆಯುತ್ತಿದೆ. ಕೇಂದ್ರದಿಂದ ಎರಡು ಕ್ಷಿಪ್ರ ಕಾರ್ಯಪಡೆಗಳು(ಆರ್ಎಎಫ್), ಎರಡು ಗಡಿ ಭದ್ರತಾ ಪಡೆ(ಬಿಎಸ್ಎಫ್)ಯ ತುಕಡಿಗಳು ಆಗಮಿಸಿವೆ ಎಂದು ಪರಮೇಶ್ವರ್ ತಿಳಿಸಿದರು. ನವಲಗುಂದಲ್ಲಿ ಆರ್ಎಎಫ್, ನರಗುಂದದಲ್ಲಿ ಬಿಎಸ್ಎಫ್, ಹುಬ್ಬಳ್ಳಿಯಲ್ಲಿ ಬಿಎಸ್ಎಫ್, ಧಾರವಾಡದಲ್ಲಿ ಆರ್ಎಎಫ್ ತುಕಡಿಯೊಂದಿಗೆ ರಾಜ್ಯದ ಮೀಸಲು ಪೊಲೀಸ್ ಪಡೆಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಅಲ್ಲದೆ, ಎಡಿಜಿಪಿ ದರ್ಜೆ ಅಧಿಕಾರಿಗಳಾದ ಭಾಸ್ಕರ್ರಾವ್, ಔರಾದ್ಕರ್ ಮತ್ತು ಕಮಲ್ಪಂಥ್ರಿಗೆ ಯಾವುದೆ ಅಹಿತಕರ ಘಟನೆಗಳು ಸಂಭವಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಒಂದೊಂದು ಜಿಲ್ಲೆಗಳ ಹೊಣೆಗಾರಿಕೆ ವಹಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯದ ನೆಲ, ಜಲ, ಭಾಷೆಯ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ನಮ್ಮ ಸಂಸದರು ಪ್ರಧಾನಿಯನ್ನು ಭೇಟಿ ಮಾಡಿ, ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿ, ರಾಜ್ಯಕ್ಕೆ ನ್ಯಾಯ ಒದಗಿಸಲು ಶ್ರಮಿಸಬೇಕು ಎಂದು ಪರಮೇಶ್ವರ್ ಮನವಿ ಮಾಡಿದರು.







