ಬೆಳ್ತಂಗಡಿ: ದಲಿತರ ಕುಂದು ಕೊರತೆ ಸಭೆ
ಬೆಳ್ತಂಗಡಿ, ಜು.29: ಗ್ರಾಮ ಪಂಚಾಯತ್ಗಳಲ್ಲಿ ಸಿಬ್ಬಂದಿ ನೇಮಕಾತಿಯಲ್ಲಿ ದಲಿತರಿಗೆ ಅನ್ಯಾಯ ಮಾಡಲಾಗುತ್ತಿದೆ. ಕೇವಲ ಕಸ ಗುಡಿಸುವ ಕೆಲಸವನ್ನು ಮಾತ್ರ ದಲಿತರಿಗೆ ಮೀಸಲಿಡಲಾಗುತ್ತಿದೆ. ಇತರ ಹುದ್ದೆಗಳ ನೇಮಕಾತಿಯ ಸಂದರ್ಭದಲ್ಲಿ ಮೀಸಲಾತಿಯನ್ನು ತಪ್ಪಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಈ ಕಸ ಗುಡಿಸುವ ಕೆಲಸಕ್ಕೆ ನಮಗೆ ಮೀಸಲಾತಿ ಬೇಡ. ಅದನ್ನು ಮೇಲ್ವರ್ಗದವರಿಗೆ ಕೊಡಿ. ಇತರೆ ಕೆಲಸಗಳಿಗೆ ಮೀಸಲಾತಿ ನೀಡಿ ಎಂದು ತಾಲೂಕು ಮಟ್ಟದ ದಲಿತರ ಕುಂದು ಕೊರತೆ ಸಭೆಯಲ್ಲಿ ಸೇರಿದ್ದ ಜನರು ಒಕ್ಕೊರಲಿನಿಂದ ಅಧಿಕಾರಿಗಳನ್ನು ಆಗ್ರಹಿಸಿದರು.
ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ತಹಶೀಲ್ದಾರ್ ಪ್ರಸನ್ನಮೂರ್ತಿ ಅಧ್ಯಕ್ಷತೆಯಲ್ಲಿ ಶುಕ್ರವಾರ ದಲಿತರ ಕುಂದುಕೊರತೆ ಸಭೆ ನಡೆಯಿತು. ಸಭೆಯಲ್ಲಿ ನೂತನ ಗ್ರಾಮ ಪಂಚಾಯತ್ಗಳು ಮಾಡುತ್ತಿರುವ ಸಿಬ್ಬಂದಿ ನೇಮಕ ಪ್ರಕ್ರಿಯೆಯಲ್ಲಿ ದಲಿತರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ದಲಿತ ಮುಖಂಡ ಬಿ.ಕೆ ವಸಂತ್ ಪ್ರಸ್ತಾಪಿಸಿದರು.
ಕಸ ಗುಡಿಸುವ ಕೆಲಸವಿದ್ದರೆ ಮಾತ್ರ ಮೀಸಲಾತಿ ಇತರ ಕೆಲಸಗಳಿಗೆ ಅರ್ಜಿ ಆಹ್ವಾನಿಸುವಾಗ ಮೀಸಲಾತಿಯ ವಿಚಾರವೇ ಇರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆಂಜ ಗ್ರಾಮ ಪಂಚಾಯತ್ನಲ್ಲಿ ಸಿಬ್ಬಂದಿ ಆಯ್ಕೆ ಪ್ರಕ್ರಿಯೆಯಲ್ಲಿ ಪಂಚಾಯತ್ ಆಡಳಿತ ಅರ್ಹರಿಗೆ ಅನ್ಯಾಯ ಮಾಡಿದ್ದಾರೆ. ದ್ವಿತೀಯ ಪಿಯುಸಿ ಅರ್ಹತೆಯನ್ನು ಕೇಳಲಾಗಿತ್ತು. ಈ ಹುದ್ದೆಗೆ ಅರ್ಹತೆಯಿರುವವರು ಅರ್ಜಿ ಸಲ್ಲಿಸಿದ್ದರೂ ಅದನ್ನು ಬದಿಗಿಟ್ಟು ತಮಗೆ ಬೇಕಾದವರಿಗೆ ಹುದ್ದೆಗಳನ್ನು ನೀಡುವ ಪ್ರಯತ್ನ ನಡೆಯುತ್ತಿದೆ. ಇದನ್ನು ನಿಲ್ಲಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಈಬಗ್ಗೆ ಪರಿಶೀಲಿಸಿ ಕಾನೂನು ಮೀರಿ ನೇಮಕಾತಿ ನಡೆದಿದ್ದರೆ ಅದನ್ನು ಸರಿ ಪಡಿಸುವುದಾಗಿ ತಾ. ಪಂ ಕಾರ್ಯನಿರ್ವಹಣಾಧಿಕಾರಿ ಸಿ. ಆರ್. ನರೇಂದ್ರ ಭರವಸೆ ನೀಡಿದರು.
ದಲಿತರಿಗೆ ಮೀಸಲಿರಿಸಲಾಗಿರುವ ಡಿ.ಸಿ ಮನ್ನಾ ಜಮೀನು ಹಂಚುವಂತೆ ದಶಕಗಳಿಂದ ಕೇಳುತ್ತಿದ್ದೇವೆ. ಆದರೆ ಇನ್ನೂ ಹಂಚಿಕೆಯಾಗಿಲ್ಲ, ಕಂದಾಯ ಇಲಾಖೆಯ ಬಳಿ ಇರುವ ಜಮೀನನ್ನಾದರೂ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಿ ಎಂದು ಸಂಜೀವ ಆರ್. ಒತ್ತಾಯಿಸಿದರು. ದಲಿತರಿಗೆ ಜಮೀನು ನೀಡಲು ಆದಾಯ ಮಿತಿ ಎಂಟು ಸಾವಿರ ಎಂದು ನಿಗದಿಪಡಿಸಲಾಗಿದೆ. ಎಂಟು ಸಾವಿರ ಆದಾಯವಿರುವ ಆದಾಯ ಪ್ರಮಾಣ ಪತ್ರವನ್ನು ಯಾರೂ ನೀಡುವುದಿಲ್ಲ ಅದರಿಂದಾಗಿ ಎಲ್ಲ ಅರ್ಜಿಗಳೂ ತಿರಸ್ಕೃತವಾಗುತ್ತಿದೆ. ಈ ಆದಾಯದ ಮಿತಿಯನ್ನು ಮೂವತ್ತು ಸಾವಿರಕ್ಕೆ ಏರಿಸಬೇಕು ಎಂದು ಚಂದು ಎಲ್. ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ತೆಗೆದುಕೊಂಡು ಸರಕಾರಕ್ಕೆ ಕಳುಹಿಸಲು ನಿರ್ಧರಿಸಲಾಯಿತು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗಿನ ಆದಿವಾಸಿಗಳ ಸಮಸ್ಯೆಗಳ ಬಗ್ಗೆ ಶೇಖರ ಎಲ್. ಗಮನ ಸೆಳೆದರು. ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಕಾರ್ಯಕ್ಕೆ ಯಾವುದೇ ಕಾರಣಕ್ಕೂ ಸರಕಾರ ಮುಂದಾಗಬಾರದು. ಅವರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿದರು. ಮೂಲನಿವಾಸಿಗಳಿಗೆ ಹಕ್ಕು ಪತ್ರ ನೀಡಲು ಅರಣ್ಯ ಇಲಾಖೆ ಅನಗತ್ಯವಾಗಿ ಅಡ್ಡಿಪಡಿಸುತ್ತಿದೆ. 94 ಸಿ ಯಲ್ಲಿಯೂ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಹಕ್ಕುಪತ್ರ ನೀಡಲು ಬಿಡುತ್ತಿಲ್ಲ ಎಂದು ತಾ.ಪಂ ಸದಸ್ಯ ಜಯರಾಮ ಆರೋಪಿಸಿದರು.
ಕೆಲ್ಲಕೆರೆ ಕೊರಗರ ಕಾಲನಿಯ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದಾಗ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ ಮಾತನಾಡಿ, ಅಲ್ಲಿನ ಸಮಸ್ಯೆಗೆ ಪರಿಹಾರ ಕಾಣಲು ಈಗಾಗಲೇ ಅನುದಾನ ಮೀಸಲಿರಿಸಲಾಗಿದೆ ಎಂದು ತಿಳಿಸಿದರು. ಶಿಶಿಲ ಗ್ರಾಮದಲ್ಲಿ ಅಕ್ರಮ ಸಕ್ರಮ ಕಡತಗಳನ್ನು ತಯಾರಿಸಲು ಗ್ರಾಮ ಸಹಾಯಕರು ಲಂಚ ಕೇಳುತ್ತಿದ್ದಾರೆ ಎಂದು ಗ್ರಾ.ಪಂ. ಉಪಾಧ್ಯಕ್ಷೆ ಗೀತಾ ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಕೂಡಲೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ತಿಳಿಸಿದರು. ಲಾಯಿಲ ಗ್ರಾಮದ ಸಮಸ್ಯೆಗಳ ಬಗ್ಗೆ ನಾಗರಾಜ ಎಸ್. ಲಾಯಿಲ ಗಮನ ಸೆಳೆದರು.
ಸಭೆಯಲ್ಲಿ ತಾಲೂಕು ಪಂಚಾಯತು ಅಧ್ಯಕ್ಷೆ ದಿವ್ಯಜ್ಯೋತಿ, ಜಿಲ್ಲಾ ಪಂಚಾಯತ್ ಸದಸ್ಯ ಕೊರಗಪ್ಪನಾಯ್ಕ, ಸಮಾಜಕಲ್ಯಾಣ ಅಧಿಕಾರಿ ಮೋಹನ ಉಪಸ್ಥಿತರಿದ್ದರು.