ಗುಜರಾತ್:ಸತ್ತ ದನಗಳನ್ನೆತ್ತಲು ದಲಿತರ ನಿರಾಕರಣೆ,ಸರಕಾರದಿಂದ ರಕ್ಷಣೆಗೆ ಆಗ್ರಹ
ಅಹ್ಮದಾಬಾದ್,ಜು.29: ಉನಾದಲ್ಲಿ ದಲಿತ ಯುವಕರ ಮೇಲೆ ದೌರ್ಜನ್ಯವನ್ನು ವಿರೋಧಿಸಿ ಪ್ರತಿಭಟನೆಯಲ್ಲಿ ತೊಡಗಿರುವ, ಸಾಂಪ್ರದಾಯಿಕವಾಗಿ ಸತ್ತ ದನಗಳ ಚರ್ಮವನ್ನು ಸುಲಿದು ಹದಗೊಳಿಸುವ ವೃತ್ತಿಯಲ್ಲಿ ತೊಡಗಿಕೊಂಡಿರುವ ದಲಿತ ಸಮುದಾಯದ ಸದಸ್ಯರು ಗುಜರಾತಿನ ವಿವಿಧೆಡೆಗಳಲ್ಲಿ ಸತ್ತು ಬಿದ್ದಿರುವ ಜಾನುವಾರುಗಳ ಕಳೇಬರಗಳನ್ನು ವಿಲೇವಾರಿಗೊಳಿಸಲು ನಿರಾಕರಿಸಿದ್ದಾರೆ. ಗೋರಕ್ಷಕರಿಂದ ಕಿರುಕುಳವನ್ನು ತಡೆಯಲು ಸರಕಾರವು ತಮಗೆ ರಕ್ಷಣೆಯನ್ನು ನೀಡಬೇಕು ಮತ್ತು ಗುರುತಿನ ಚೀಟಿಗಳನ್ನು ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ದಲಿತರ ಈ ನಿರ್ಧಾರ ಆಡಳಿತವನ್ನು ಹೈರಾಣುಗೊಳಿಸಿದೆ. ವಿಶೇಷವಾಗಿ ಸುರೇಂದ್ರನಗರವೊಂದರಲ್ಲೇ ಕಳೆದೊಂದು ವಾರದಲ್ಲಿ 80ಕ್ಕೂ ಅಧಿಕ ಜಾನವಾರುಗಳನ್ನು ಪೌರಾಡಳಿತದ ಸಿಬ್ಬಂದಿಗಳೇ ವಿಲೇವಾರಿಗೊಳಿಸಿದ್ದಾರೆ.
ದಲಿತ ಸಂಘಟನೆಗಳು ಮುಂದಿಟ್ಟಿರುವ ಬೇಡಿಕೆಗಳ ಬಗ್ಗೆ ತಾನು ಸರಕಾರದೊಂದಿಗೆ ಚರ್ಚಿಸುವುದಾಗಿ ಸುರೇಂದ್ರನಗರ ಜಿಲ್ಲಾಧಿಕಾರಿ ಉದಿತ್ ಅಗರವಾಲ್ ಸುದ್ದಿಗಾರರಿಗೆ ತಿಳಿಸಿದರು.
ಜಾನುವಾರುಗಳ ಚರ್ಮ ಸುಲಿಯುವ ವೃತ್ತಿಯಲ್ಲಿ ತೊಡಗಿಕೊಂಡಿರುವ ದಲಿತರು ಕಳೆದೊಂದು ವಾರದಿಂದ ಮುಷ್ಕರ ನಡೆಸುತ್ತಿದ್ದು, ಹಲವಾರು ದಲಿತ ಸಂಘಟನೆಗಳ ಒಕ್ಕೂಟವಾಗಿರುವ ದಲಿತ ಮಾನವ ಅಧಿಕಾರ ಆಂದೋಲನವು ಈ ಮುಷ್ಕರಕ್ಕೆ ಕರೆ ನೀಡಿದೆ. ಗುಜರಾತ್ನಾದ್ಯಂತ ಹೆಚ್ಚೆಚ್ಚು ದಲಿತರು ಮುಷ್ಕರದಲ್ಲಿ ಭಾಗಿಯಾಗುತ್ತಿದ್ದಾರೆ. ಸುರೇಂದ್ರನಗರದಲ್ಲಿ ನಮ್ಮ ಕರೆಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಸಮುದಾಯದ ಹೆಚ್ಚಿನ ಕುಟುಂಬಗಳು ಕಳೆದೊಂದು ವಾರದಿಂದ ಮೃತ ಜಾನುವಾರುಗಳ ವಿಲೇವಾರಿ ಕಾರ್ಯವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿವೆ ಎಂದು ನವಸಾರ್ಜನ ಟ್ರಸ್ಟ್ನ ನಾತು ಪರಮಾರ್ ತಿಳಿಸಿದರು. ಇದರಿಂದಾಗಿ ಜಿಲ್ಲಾಡಳಿತವೀಗ ಪ್ರತಿದಿನ ಕನಿಷ್ಠ 200 ಮೃತ ಜಾನುವಾರುಗಳನ್ನು ವಿಲೇವಾರಿಗೊಳಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ ಎಂದರು.