ಇಂದಿನಿಂದ ವಿಪತ್ತು ನಿರ್ವಹಣಾ ತರಬೇತಿ ಶಿಬಿರ ಉದ್ಘಾಟನೆ
ಉಡುಪಿ, ಜು.29: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಮೈಸೂರು ವಿಭಾಗದ ರೋವರ್ಸ್ ಮತ್ತು ರೇಂಜರ್ಸ್ಗಳಿಗೆ 5 ದಿನಗಳ ಕಾಲ ವಿಪತ್ತು ನಿರ್ವಹಣಾ ತರಬೇತಿ ಮತ್ತು ಸ್ವಚ್ಛ ಭಾರತ್ ಸೇವಾ ಶಿಬಿರವನ್ನು ಜು.30ರಿಂದ ಆ.2ರವರೆಗೆ ಅಲೆವೂರು ಪ್ರಗತಿನಗರದಲ್ಲಿರುವ ಡಾ.ವಿ.ಎಸ್.ಆಚಾರ್ಯ ಭಾರತ್ ಸ್ಕೌಟ್ಸ್ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಗೃಹ ರಕ್ಷಕದಳ, ಆರೋಗ್ಯ ಇಲಾಖೆ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ತರಬೇತಿ ಶಿಬಿರದ ಉದ್ಘಾಟನೆ ಇಂದು ಸಂಜೆ 5 ಗಂಟೆಗೆ ನಡೆಯಲಿದೆ. ಶಿಬಿರದಲ್ಲಿ ಕೌಶಲ್ಯ ತರಬೇತಿ, ವಿಕೋಪ ಸಂದರ್ಭಗಳಲ್ಲಿ ಮುನ್ನೆಚ್ಚರಿಕೆ ಮತ್ತು ಮುಂಜಾಗೃತ ಕ್ರಮಗಳ ಬಗ್ಗೆ, ಸ್ವಚ್ಛತೆ ಮತ್ತು ನೈರ್ಮಲ್ಯ ಬಗ್ಗೆ ಜಾಗೃತಿ ಮೂಡಿಸಿ ಶಿಬಿರಾರ್ಥಿಗಳಿಗೆ ‘ಸುರಕ್ಷಾ ಸಂಸ್ಕೃತಿ’ ಕುರಿತು ಅರಿವು ಮೂಡಿಸಲಿದ್ದಾರೆ. ಈ ಸಂಬಂಧ ಡಾ.ವಿ.ಎಸ್.ಆಚಾರ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದ ಮೈದಾನದಲ್ಲಿ ಆ.1ರಂದು ಅಪರಾಹ್ನ 3ರಿಂದ 5ರವರೆಗೆ ಮಾಕ್ಡ್ರಿಲ್ ನಡೆಯಲಿದೆ. ರಾಜ್ಯದ 13 ಜಿಲ್ಲೆಗಳಿಂದ 200 ರೋವರ್ಸ್, ರೇಂಜರ್ಸ್ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಲಿರುವರು.





