ಹೆದ್ದಾರಿ ಅಗಲೀಕರಣ: ಮರು ಸರ್ವೇಗೆ ಮನವಿ
ಮಂಗಳೂರು, ಜು.29: ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ಬಿ.ಸಿರೋಡ್ನಿಂದ ಅಡ್ಡಹೊಳೆ ಹಾಗೂ ಕುಲಶೇಖರದಿಂದ ಕಾರ್ಕಳದವರೆಗಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಬಗ್ಗೆ ಮತ್ತೊಮ್ಮೆ ಸರ್ವೇ ಮಾಡುವಂತೆ ಹಾಗೂ ಈ ರಸ್ತೆಗಳ ಅಗಲ 30 ಮೀ. ಸೀಮಿತಗೊಳಿಸುವಂತೆ ಮನವಿ ಮಾಡಿದ್ದಾರೆ.
ಅಲ್ಲದೇ ಈ ಹಿಂದೆ ಘೋಷಿಸಿದ ಮೆಲ್ಕಾರು-ತೊಕ್ಕೊಟು, ಮುಲ್ಕಿ-ಕಟೀಲು-ಬಿ.ಸಿ ರೋಡ್ ಹಾಗೂ ಬಿ.ಸಿರೋಡ್-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಶಿಲಾನ್ಯಾಸಕ್ಕೆ ದಿನಾಂಕ ನಿಗದಿಪಡಿಸುವಂತೆ ಸಂಸದರು ಕೋರಿದ್ದಾರೆ.
ಮಹಿಳೆಯರ ಮೇಲಿನ ಹಲ್ಲೆಗೆ ಖಂಡನೆ ಹೊಸದಿಲ್ಲಿ, ಜು.29: ಮಧ್ಯಪ್ರದೇಶದ ಮಾಂಡ್ಸೌರ್ ರೈಲ್ವೆ ನಿಲ್ದಾಣದಲ್ಲಿ ಮುಸ್ಲಿಮ್ ಮಹಿಳೆಯರ ಮೇಲೆ ನಡೆದ ಅಮಾನವೀಯ ದಾಳಿಯನ್ನು ನ್ಯಾಷನಲ್ ವಿಮೆನ್ಸ್ ಫ್ರಂಟ್ನ ಅಧ್ಯಕ್ಷೆ ಝೈನಬ್ ಖಂಡಿಸಿದ್ದಾರೆ.
ಪೊಲೀಸರ ಉಪಸ್ಥಿತಿಯಲ್ಲೇ ಮಹಿಳೆಯರಿಗೆ ದಾಳಿ ನಡೆಸಿರುವ ಅಪರಾಧಿಗಳನ್ನು ಬಂಧಿಸುವುದನ್ನು ಬಿಟ್ಟು ಸಂತ್ರಸ್ತರನ್ನೇ ಬಂಧಿಸಿದ್ದು ಸಂಪೂರ್ಣವಾಗಿ ಅಸಂಬದ್ಧ ಎಂದು ಅವರು ಹೇಳಿದ್ದಾರೆ. ವಾರದ ಹಿಂದೆ ಗೋ ರಕ್ಷಕರ ಗುಂಪೊಂದು ಹಸುವಿನ ಚರ್ಮ ಹೊಂದಿದ್ದರು ಎಂದು ಆರೋಪಿಸಿ ಗುಜರಾತ್ನಲ್ಲಿ ದಲಿತರ ಮೇಲೆ ಇದೇ ರೀತಿಯ ದಾಳಿಯನ್ನು ನಡೆಸಿದ್ದಾರೆ. ಇಂತಹ ದಾಳಿಗಳನ್ನು ಸಹಿಸಿಕೊಳ್ಳುವುದು ನಾಗರಿಕ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ. ಇಂತಹ ಹಿಂಸೆಯನ್ನು ತಡೆಗಟ್ಟಲು ಮತ್ತು ಎಲ್ಲಾ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಝೈನಬಾ ಅವರು ಆಗ್ರಹಿಸಿದ್ದಾರೆ.