ನ್ಯೂಪಡ್ಪು: ಶಿಕ್ಷಕಿಯ ವರ್ಗಾವಣೆ ಖಂಡಿಸಿ ವಿದ್ಯಾರ್ಥಿಗಳಿಂದ ಧರಣಿ
![ನ್ಯೂಪಡ್ಪು: ಶಿಕ್ಷಕಿಯ ವರ್ಗಾವಣೆ ಖಂಡಿಸಿ ವಿದ್ಯಾರ್ಥಿಗಳಿಂದ ಧರಣಿ ನ್ಯೂಪಡ್ಪು: ಶಿಕ್ಷಕಿಯ ವರ್ಗಾವಣೆ ಖಂಡಿಸಿ ವಿದ್ಯಾರ್ಥಿಗಳಿಂದ ಧರಣಿ](https://www.varthabharati.in/sites/default/files/images/articles/2016/07/30/30mdp2.jpg)
ಕೊಣಾಜೆ, ಜು.30: ಹರೇಕಳ ನ್ಯೂಪಡ್ಪುವಿನ ಶಾಲೆಗೆ ಒಂದು ಇತಿಹಾಸ ಇದೆ. ಹರೇಕಳ ಹಾಜಬ್ಬ ಅವರು ಕಿತ್ತಲೆ ಹಣ್ಣು ಮಾರಾಟ ಮಾಡಿ ಬಡವರ ಮಕ್ಕಳೂ ಶಿಕ್ಷಣ ಕಲಿಯಬೇಕೆನ್ನುವ ಉದ್ದೇಶದಿಂದ ಹಲವಾರು ವರ್ಷದ ಪರಿಶ್ರಮದಿಂದ ನ್ಯೂಪಡ್ಪುವಿನಲ್ಲಿ ಸರಕಾರಿ ಶಾಲೆ ಆರಂಭಗೊಂಡಿತ್ತು. ಆದರೆ ಇದೀಗ ಸರಕಾರ ಇಂತಹ ಶಾಲೆಯ ಶಿಕ್ಷಕಿಯರನ್ನು ವರ್ಗಾಯಿಸುವ ಮೂಲಕ ಕನ್ನಡ ಶಾಲೆಗಳನ್ನು ಮುಚ್ಚುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ ಎಂದು ಎಸ್ಎಫ್ಐನ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್ ಹೇಳಿದರು.
ಹರೇಕಳ ನ್ಯೂಪಡ್ಪುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯನ್ನು ಬೇರೆಡೆಗೆ ವರ್ಗಾಯಿಸಿರುವುದನ್ನು ಖಂಡಿಸಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಶನಿವಾರ ನಡೆಸಿದ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು.
ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂದು ಸರಕಾರ ಹೇಳುತ್ತಿದೆ. ನ್ಯೂಪಡ್ಪುವಿನ ಶಾಲೆಗೆ ಶಿಕ್ಷಕರ ಕೊರತೆಯಿದ್ದು, ದೈಹಿಕ ಶಿಕ್ಷಕರ ನೇಮಕಾತಿ ಇನ್ನೂ ಆಗಿಲ್ಲ. ಹಾಜಬ್ಬರ ಕನಸಿನ ಶಾಲೆ ಇದಾಗಿದ್ದು ಇಲ್ಲಿಯ ಶಿಕ್ಷಕಿ ರೇಷ್ಮಾ ಅವರನ್ನು ದೂರದ ಊರಿಗೆ ವರ್ಗಾಯಿಸಲಾಗಿದೆ. ಇದರಿಂದ ಇಲ್ಲಿಯ ವಿದ್ಯಾರ್ಥಿಗಳೂ ಸಂಕಷ್ಟಕ್ಕೀಡಾಗುತ್ತಾರೆ. ಏಕಾಏಕಿಯಾಗಿ ಸರಕಾರ ಶಿಕ್ಷಕರ ವರ್ಗಾವಣೆಯ ನೆಪದಲ್ಲಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆ ನೀಡುತ್ತಿದ್ದು, ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯರ ಸರಕಾರ ಹಾಜಬ್ಬರಂತಹ ಅಕ್ಷರ ಸಂತರಿಂದ ಕಲಿಯುವುದು ಬಹಳಷ್ಟು ಇದೆ. ಸರಕಾರವು ಇಂತಹ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಎಸ್ಎಫ್ಐ ವತಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ವಿದ್ಯಾರ್ಥಿಗಳು ಮತ್ತು ಪೋಷಕರು ತರಗತಿ ಬಹಿಷ್ಕರಿಸಿ ಜಾಥಾ ನಡೆಸಿ ನ್ಯೂಪಡ್ಪುಜಂಕ್ಷನ್ನಲ್ಲಿ ಧರಣಿ ನಡೆಸಿದರು.
ಧರಣಿಯಲ್ಲಿ ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಶರಣ್ ಶೆಟ್ಟಿ, ಡಿವೈಎಫ್ಐನ ರಫೀಕ್ ಹರೇಕಳ, ಉಮರಬ್ಬ ನ್ಯೂಪಡ್ಪು, ಎವರಿಸ್ ಕುಟಿನ್ಹಾ, ಪಂಚಾಯತ್ ಸದಸ್ಯ ಹನೀಫ್, ಸಿದ್ದೀಕ್ ನ್ಯೂಪಡ್ಪು, ಖಾಲಿದ್, ಎಸ್ಡಿಎಂಸಿ ಸದಸ್ಯರಾದ ಬೇಬಿ, ಶೋಭಾ, ಮುಹಮ್ಮದ್, ಅಸ್ಮಾ ಮುಂತಾದವರು ಉಪಸ್ಥಿತರಿದ್ದರು.