ಶ್ರೀನಗರ: ಅಮಾಯಕ ಯುವಕನ ಹತ್ಯೆ ಪ್ರಕರಣ : ತನಿಖೆ ನಡೆಸದ ಪೊಲೀಸ್ ಅಧಿಕಾರಿಯ ವಿರುದ್ಧ ಬಂಧನ ವಾರಂಟ್

ಶ್ರೀನಗರ,ಜು.30: ಕಾಶ್ಮೀರಕಣಿವೆಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯ ವೇಳೆ ಯುವಕನೊಬ್ಬನನ್ನು ಆತ್ಯಂತ ಸನಿಹದಿಂದ ಗುಂಡಿಕ್ಕಿ ಹತ್ಯೆಗೈದ ಆರೋಪದಲ್ಲಿ ಕೆಲವ್ನ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಬೇಕೆಂಬ ನ್ಯಾಯಾಂಗ ಆದೇಶವನ್ನು ಉಲ್ಲಂಘಿಸಿದ ಶ್ರೀನಗರದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಸ್ಥಳೀಯ ನ್ಯಾಯಾಲಯವೊಂದು ಶನಿವಾರ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿದೆ.
ಜುಲೈ 10ರಂದು ನಡೆದ ಶಬೀರ್ ಅಹ್ಮದ್ ಎಂಬ ಯುವಕನ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಬೇಕೆಂದು ನ್ಯಾಯಾಲಯವು ಶ್ರೀನಗರದ ಪೊಲೀಸರಿಗೆ ಆದೇಶಿಸಿತ್ತು. ಆದರೆ ಪೊಲೀಸರು ಈ ಆರೋಪಗಳ ಬಗ್ಗೆ ತನಿಖೆ ನಡೆಸಲಿಲ್ಲ ಹಾಗೂ ಇದಕ್ಕೆ ಬದಲಾಗಿ ಇತರರೊಂದಿಗೆ ಮೃತ ಅಹ್ಮದ್ ವಿರುದ್ಧವೂ ಸಶಸ್ತ್ರ ದಂಗೆ ಹಾಗೂ ಕೊಲೆಯತ್ನದ ಆರೋಪವನ್ನು ಹೊರಿಸಿದ್ದರು. ಅಹ್ಮದ್ನನ್ನು ಅತ್ಯಂತ ಸನಿಹದಿಂದ ಗುಂಡಿಕ್ಕಿ ಹತ್ಯೆಗೈದರೆಂಬ ಆರೋಪ ಎದುರಿಸುತ್ತಿರುವ ಉಪ ಪೊಲೀಸ್ ಅಧೀಕ್ಷಕ ಯಾಸಿರ್ ಖಾದ್ರಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದರು. ಅಹ್ಮದ್ನನ್ನು ತಮ್ಮ ಮನೆಯ ಅಂಗಳದಲ್ಲಿಯೇ ಯಾಸಿರ್ಖಾದ್ರಿ ಗುಂಡಿಕ್ಕಿ ಕೊಂದಿದ್ದರೆಂದು ಆತನ ಹೆತ್ತವರು ಆರೋಪಿಸಿದ್ದರು.
ಹಿಝ್ಬುಲ್ ಮುಜಾಹಿದ್ದೀನ್ ಕಾರ್ಯಕರ್ತ ಬುರ್ಹಾನ್ ವಾನಿಯನ್ನು ಭದ್ರತಾಪಡೆಗಳು ಜುಲೈ 8ರಂದು ಗುಂಡಿಕ್ಕಿ ಹತ್ಯೆಗೈದ ಘಟನೆಯ ಬಳಿಕ ಕಾಶ್ಮೀರ ಕಣಿವೆಯಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ 50ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು ಹಾಗೂ ಸುಮಾರು 2 ಸಾವಿರ ಮಂದಿ ಗಾಯಗೊಂಡಿದ್ದರು. ಈ ಸಂದರ್ಭದಲ್ಲಿ ಶ್ರೀನಗರದಲ್ಲಿ ಶಬೀರ್ ಅಹ್ಮದ್ ಪೊಲೀಸರ ಗುಂಡಿಗೆ ಅಹುತಿಯಾಗಿದ್ದ.
ಶಬೀರ್ ಅಹ್ಮದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದೂರನ್ನು ದಾಖಲಿಸಿಕೊಳ್ಳುವಂತೆ ನ್ಯಾಯಾಲಯವು ಶ್ರೀನಗರದ ಹಿರಿಯ ಪೊಲೀಸ್ ಅಧಿಕ್ಷಕ ಅಮಿತ್ ಕುಮಾರ್ಗೆ ಜುಲೈ 18ರಂದು ಆದೇಶಿಸಿತ್ತು. ಜುಲೈ 28ರಂದು ಮತ್ತೆ ಅದು ಎಫ್ಐಆರ್ ದಾಖಲಿಸಿಕೊಳ್ಳುವಂತೆ ಸೂಚಿಸಿತು ಮತ್ತು ಒಂದು ವೇಳೆ ದೂರು ದಾಖಲಿಸಿಕೊಳ್ಳದೆ ಇದ್ದಲ್ಲಿ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಹೇಳಿತ್ತು. ಆದರೆ ಶನಿವಾರದಂದು ಪೊಲೀಸರು ನ್ಯಾಯಾಲಯಕ್ಕೆ ಮನವಿಯೊಂದನ್ನು ಸಲ್ಲಿಸಿ ಎಸ್ಎಸ್ಪಿಯವರಿಗೆ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಕೋರಿದರು ಹಾಗೂ ಪ್ರಕರಣದ ಕುರಿತ ಎಫ್ಐಆರ್ನ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿಲ್ಲ.
ಇದರಿಂದ ಅಸಮಾಧಾನಗೊಂಡ ಮುಖ್ಯ ನ್ಯಾಯಾಂಗ ಮ್ಯಾಜ್ಟಿೇಟ್ ಮಸರತ್ ಶಹೀನ್ ಅವರು ಎಸ್ಎಸ್ಪಿ ಅಮಿತ್ ಕುಮಾರ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದರು ಹಾಗೂ ಈ ಬಗ್ಗೆ ಎರಡು ದಿನಗಳೊಳಗೆ ಅನುಸರಣಾ ವರದಿಯೊಂದನ್ನು ಸಲ್ಲಿಸುವಂತೆ ಮಧ್ಯ ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸಿದರು.





