ಸೇನೆಯಿಂದ ಆದರ್ಶ ಕಟ್ಟಡದ ಸ್ವಾಧೀನ ಪ್ರಕ್ರಿಯೆ ಪ್ರಾರಂಭ
ಮುಂಬೈ,ಜು.30: ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕನುಗುಣವಾಗಿ ದಕ್ಷಿಣ ಮುಂಬೈಯ ಕೊಲಾಬಾದಲ್ಲಿನ ಹಗರಣ ಕಳಂಕಿತ ಆದರ್ಶ ಕಟ್ಟಡವನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಸೇನೆಯು ಪ್ರಾರಂಭಿಸಿದೆ.
ಶುಕ್ರವಾರ ಈ ವಿವಾದಿತ ಬಹುಮಹಡಿ ಕಟ್ಟಡಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿಯ ತಂಡವು ಆದರ್ಶ ಹೌಸಿಂಗ್ ಸೊಸೈಟಿಯಿಂದ ಅಧಿಕೃತವಾಗಿ ತನ್ನ ವಶಕ್ಕೆ ಪಡೆದುಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿತು. ಕಾರ್ಗಿಲ್ ಯುದ್ಧದ ವೀರಸೇನಾನಿಗಳು ಮತ್ತು ಹುತಾತ್ಮರಾದವರ ಪತ್ನಿಯರಿಗಾಗಿ ಈ ಕಟ್ಟಡ ನಿರ್ಮಾಣಗೊಂಡಿತ್ತು. ಸ್ವಾಧೀನ ಪ್ರಕ್ರಿಯೆ ಶನಿವಾರ ತಡರಾತ್ರಿಯ ವೇಳೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಬಾಂಬೆ ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಈ ಸ್ವಾಧೀನ ಪ್ರಕ್ರಿಯೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.
ಆ.5ರೊಳಗೆ 31 ಅಂತಸ್ತುಗಳ ಆದರ್ಶ ಕಟ್ಟಡವನ್ನು ತನ್ನ ವಶಕ್ಕೆ ಪಡೆದುಕೊಳ್ಳುವಂತೆ ಮತ್ತು ಅದನ್ನು ನೆಲಸಮಗೊಳಿಸದೆ ಅದರ ಸುರಕ್ಷತೆಯನ್ನು ಕಾಯ್ದುಕೊಳ್ಳುವಂತೆ ಜು.22ರಂದು ಬಾಂಬೆ ಉಚ್ಚ ನ್ಯಾಯಾಲಯವು ಕೇಂದ್ರಕ್ಕೆ ನಿರ್ದೇಶಿಸಿತ್ತು.