ಉದ್ಧವ್-ರಾಜ್ ಠಾಕ್ರೆ ಭೇಟಿ
ಬಿಜೆಪಿಗೆ ಕೈ ಕೊಟ್ಟು ಮೈತ್ರಿ ಸಾಧ್ಯತೆ
ಮುಂಬೈ, ಜು.30: ಎಂಎನ್ಎಸ್ ಮುಖಂಡ ರಾಜ್ಠಾಕ್ರೆಯವರು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಹಲವು ರಾಜಕೀಯ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ಮಾತೋಶ್ರೀಯಲ್ಲಿ ಮಧ್ಯಾಹ್ನದ ಭೋಜನ ವೇಳೆ ಮಾತುಕತೆ ನಡೆಸಿದ ಇಬ್ಬರು ಮುಖಂಡರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು. ಬೃಹನ್ಮುಂಬೈ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಈ ಮಾತುಕತೆ ಮಹತ್ವ ಪಡೆದಿದೆ. ಬಿಜೆಪಿ-ಶಿವಸೇನೆಯ ತಿಕ್ಕಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬಿಜೆಪಿ ಜತೆಗಿನ ಸಂಬಂಧ ಕಡಿದುಕೊಂಡು ದೇವೇಂದ್ರ ಪಡ್ನವೀಸ್ ಸರಕಾರದಿಂದ ಹೊರಬರುವಂತೆ ಶಿವಸೇನೆ ಮುಖಂಡರಿಂದ ಒತ್ತಡ ಹೆಚ್ಚುತ್ತಿದೆ ಎನ್ನಲಾಗಿದೆ. ಹೊಸ ರಾಜಕೀಯ ಸಮೀಕರಣದ ಬಗ್ಗೆ ವದಂತಿಗಳು ಹುಟ್ಟಿಕೊಂಡಿವೆ.
ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡು ಎಂಎನ್ಎಸ್ ಜತೆ ಕೈಜೋಡಿಸಲು ಶಿವಸೇನೆ ಮುಂದಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ವಾರ್ಷಿಕ 36 ಸಾವಿರ ಕೋಟಿ ರೂಪಾಯಿ ಆದಾಯ ಹೊಂದಿರುವ ದೇಶದ ಶ್ರೀಮಂತ ಪಾಲಿಕೆಯಲ್ಲಿ ಜಯ ಗಳಿಸುವ ಮೂಲಕ ಬಿಜೆಪಿಯ ನೆರವಿಲ್ಲದೆ ರಾಜ್ಯದಲ್ಲಿ ಬೆಳೆಯಲು ಶಿವಸೇನೆ ನಿರ್ಧರಿಸಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಬಾಳಾಸಾಹೇಬ್ ಠಾಕ್ರೆಯವರ ಉಯಿಲು ಪತ್ರದ ಬಗ್ಗೆ ತಗಾದೆ ತೆಗೆದಿರುವ ಜಯದೇವ್ ಠಾಕ್ರೆಯವರು ದಾಖಲಿಸಿರುವ ಪ್ರಕರಣದ ಬಗ್ಗೆ ಚರ್ಚಿಸಲು ಈ ಮುಖಂಡರು ಸಭೆ ಸೇರಿದ್ದರು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಇದು ಮಹಾರಾಷ್ಟ್ರದ ಇಬ್ಬರು ಪ್ರಮುಖ ರಾಜಕೀಯ ಮುಖಂಡರ ಭೇಟಿ ಎಂದು ಹಿರಿಯ ಎಂಎನ್ಎಸ್ ಮುಖಂಡ ಬಾಳ ನಂದಗಾಂವ್ಕರ್ ತಿಳಿಸಿರುತ್ತಾರೆ.