ಶಿಕ್ಷಣ ಅಂಧಕಾರದಿಂದ ಬೆಳಕಿನಡೆ ಕೊಂಡೋಯ್ಯುತ್ತದೆ-ಮುಫ್ತಿ ಇಬ್ರಾಹಿಂ ರಿಝ್ವಿ
![ಶಿಕ್ಷಣ ಅಂಧಕಾರದಿಂದ ಬೆಳಕಿನಡೆ ಕೊಂಡೋಯ್ಯುತ್ತದೆ-ಮುಫ್ತಿ ಇಬ್ರಾಹಿಂ ರಿಝ್ವಿ ಶಿಕ್ಷಣ ಅಂಧಕಾರದಿಂದ ಬೆಳಕಿನಡೆ ಕೊಂಡೋಯ್ಯುತ್ತದೆ-ಮುಫ್ತಿ ಇಬ್ರಾಹಿಂ ರಿಝ್ವಿ](https://www.varthabharati.in/sites/default/files/images/articles/2016/07/31/31-bkl-01- rabita award.jpg)
ಭಟ್ಕಳ, ಜು.31: ಒಂದೇ ದೇಶದಲ್ಲಿ ಹಲವು ಜಾತಿ, ಧರ್ಮ, ಪಂಗಡ, ವರ್ಗ ಭಾಷೆಯ ಜನರು ಒಗ್ಗಟ್ಟಾಗಿ ಬಾಳುತ್ತಿದ್ದರೆ ಅದು ಕೇವಲ ಏಕ ಮಾತ್ರ ಭಾರತ ದೇಶವಾಗಿದೆ ಎಂದು ಭಾರತೀಯ ಮೂಲದ ಶ್ರೀಲಂಕಾ ರಾಷ್ಟ್ರದ ಶೈಕ್ಷಣಿಕ ಕ್ಷೇತ್ರದ ವಿದ್ವಾಂಸ ಮುಫ್ತಿ ಇಬ್ರಾಹಿಂ ರಿಝ್ವಿ ಹೇಳಿದರು. ಅವರು ರವಿವಾರ ಭಟ್ಕಳದ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲಾ ಮೈದಾನದಲ್ಲಿ ರಾಬಿತಾ ಸೂಸೈಟಿ ಆಯೋಜಿಸಿದ್ದ ರಾಬಿತಾ ಶೈಕ್ಷಣಿಕ ಪುರಸ್ಕಾರ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಜಗತ್ತಿನಲ್ಲಿ ಅತಿ ಹೆಚ್ಚು ಸಹಿಷ್ಣು ರಾಷ್ಟ್ರವೊಂದಿದ್ದರ ಅದು ಕೇವಲ ಭಾರತ ಮಾತ್ರವಾಗಿದ್ದು ಇಲ್ಲಿ ಎಲ್ಲರೂ ಪರಸ್ಪರ ಅನೋನ್ಯತೆಯಿಂದ ಬಾಳುತ್ತಿದ್ದಾರೆ. ಭಾರತ ದೇಶವು ಶೈಕ್ಷಣಿಕ ರಂಗದಲ್ಲಿ ಕ್ರಾಂತಿಯನ್ನುಂಟು ಮಾಡುತ್ತಿದ್ದು ಶಿಕ್ಷಣವು ಮನುಷ್ಯನನ್ನು ಅಂಧಕಾರದಿಂದ ಬೆಳಕಿನಡೆಗೆ ಕೊಂಡೊಯ್ಯುತ್ತದೆ ಎಂದರು. ಅಲಿಮಿಯಾ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಮೌಲಾನ ಮುಹಮ್ಮದ್ ಇಲ್ಯಾಸ್ ನದ್ವಿ ಮಾತನಾಡಿ ಸಮುದಾಯ ತಮ್ಮ ಮಕ್ಕಳಿಗೆ ಐಎಎಸ್, ಐಪಿಎಸ್ ಸೇವೆಯಲ್ಲಿ ಕಳುಹಿಸಬೇಕು. ಅದನ್ನು ವಿದ್ಯಾರ್ಥಿ ಎಂಟನೆಯ ತರಗತಿಯಿಂದಲೆ ಆರಂಭಿಸಬೇಕು ಎಂದರು. ಇಂದು ಪಾಲಕರು ತಮ್ಮ ಮಕ್ಕಳ ಇಚ್ಛಾಶಕ್ತಿಗೆ ವಿರುದ್ಧವಾಗಿ ಅವರನ್ನು ಇಂಜಿನೀಯರೋ, ವೈದ್ಯರನ್ನಾಗಿ ಮಾಡುತ್ತಿದ್ದು ಯಾವುದು ಹೆಚ್ಚು ಹಣಗಳಿಸಿಕೊಡುತ್ತದೆ ಅಂತಹ ಶಿಕ್ಷಣದ ಹಿಂದೆ ನಾವು ಬಿದ್ದಿದ್ದೇವೆ. ಇಂತಹ ಮನೋಭಾವನೆಯಿಂದ ಹೊರಬಂದು ನಮ್ಮ ಮಕ್ಕಳು ಮನುಷ್ಯರಾಗಿ ಬದುಕುವಂತಹ ಶಿಕ್ಷಣ ನೀಡಬೇಕು ಎಂದರು. ರಾಬಿತಾ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಎಂ.ಸೈಯ್ಯದ್ ಖಲೀಲುರ್ರಹ್ಮಾನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜುಕಾಕೋ ಅಬ್ದುಲ್ ರಹೀಮ್, ಶಾಸಕ ಮಾಂಕಾಳ್ ವೈದ್ಯ, ಸಿಪಿಐ ಸುರೇಶ್ ನಾಯಕ, ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಕಾಝಿಯಾ, ಮತ್ತಿತರರು ಉಪಸ್ಥಿತರಿದ್ದರು.