ಆರೋಪಿ ಪುತ್ರನ ಬದಲಿಗೆ 80ವರ್ಷದ ಆದಿವಾಸಿ ವೃದ್ಧನನ್ನು 48 ಗಂಟೆಕಸ್ಟಡಿಯಲ್ಲಿರಿಸಿದ ಫಾರೆಸ್ಟ್ ಅಧಿಕಾರಿಗಳು !
ಪಾಲಕ್ಕಾಡ್,ಆಗಸ್ಟ್ 1: ಜಿಂಕೆಯನ್ನು ಕೊಂದು ಮಾಂಸ ಮಾಡಿ ತಿಂದ ಪ್ರಕರಣವೊಂದರಲ್ಲಿ ಆರೋಪಿ ಆದಿವಾಸಿ ವ್ಯಕ್ತಿಯೊಬ್ಬನ ಬದಲಿಗೆ ಆತನ ವಯೋವೃದ್ಧ ತಂದೆಯನ್ನು ಫಾರೆಸ್ಟ್ಠಾಣೆಯಲ್ಲಿ ಎರಡು ದಿವಸಗಳವರೆಗೆ ಕಸ್ಟಡಿಯಲ್ಲಿರಿಸಿದ ಘಟನೆ ಕೇರಳದಿಂದ ವರದಿಯಾಗಿದೆ. ಶೋಳಾಯೂರ್ ಬಾಡಿಚ್ಚಾಳ್ ಊರ್ ಎಂಬಲ್ಲಿನ ಎಂಬತ್ತು ವರ್ಷದ ಆದಿವಾಸಿ ವಯೋವೃದ್ಧರಾದ ಕಕ್ಕಿ ಎಂಬವರನ್ನು ಫಾರೆಸ್ಟ್ ವಿಭಾಗ ವಶಕ್ಕೆ ಪಡೆದಿತ್ತು. ಕಕ್ಕಿಯ ಜೊತೆಗೆ ಕಸ್ಟಡಿಗೆ ಪಡೆದ ಇನ್ನೂ ನಾಲ್ಕುಮಂದಿ ಆದಿವಾಸಿಗಳನ್ನು ಫಾರೆಸ್ಟ್ ಠಾಣೆಯಲ್ಲಿ ಥಳಿಸಲಾಗಿದೆ ಎಂದು ಪರಿಶಿಷ್ಟಜಾತಿ-ಪಂಗಡ ಸಚಿವರಿಗೆ ದೂರು ನೀಡಲಾಗಿದ್ದು, ಜುಲೈ 22ಕ್ಕೆಘಟನೆ ಸಂಭವಿಸಿತ್ತು ಎನ್ನಲಾಗಿದೆ. ಜಿಂಕೆಯನ್ನು ಕೊಂದು ಮಾಂಸದ ಪದಾರ್ಥ ಮಾಡಿ ತಿಂದಿದ್ದಾರೆಎಂದು ಆರೋಪಿಸಿ ಫಾರೆಸ್ಟ್ ವಿಭಾಗದವರು ವಯೋವೃದ್ಧ ಕಕ್ಕಿ ಸಹಿತ ವಶಕ್ಕೆ ಪಡೆಯಲಾದ ಐವರ ವಿರುದ್ಧ ಆರೋಪ ಹೊರಿಸಲಾಗಿದೆ ಎಂದು ತಿಳಿದು ಬಂದಿದೆ.
ಎಂಬತ್ತು ವರ್ಷದ ವಯೋವೃದ್ಧ ಕಕ್ಕಿಯನ್ನು ಅವರ ಪುತ್ರ ಜಿಂಕೆಯನ್ನು ಬೇಟೆಯಾಡಿ ಕೊಂದ ಆರೋಪಿಗಳಲ್ಲೊಬ್ಬ ಎಂಬ ಕಾರಣಕ್ಕಾಗಿ ಫಾರೆಸ್ಟ್ ಇಲಾಖೆ ವಶಕ್ಕೆ ಪಡೆದಿತ್ತು. ಈ ವಯೋವೃದ್ಧನಿಗೆ ಆಹಾರವನ್ನೂ ನೀಡದೆ ಅವರನ್ನು ಫಾರೆಸ್ಟ್ ಠಾಣೆಯಲ್ಲಿರಿಸಲಾಗಿತ್ತು. ಕಸ್ಟಡಿಗೆ ಪಡೆದು 24ಗಂಟೆಯೊಳಗೆ ಕೋರ್ಟ್ಗೆ ಹಾಜರುಪಡಿಸಬೇಕೆಂದು ಕಾನೂನಿದ್ದರೂ ಫಾರೆಸ್ಟ್ ಅಧಿಕಾರಿಗಳು ಆದಿವಾಸಿ ವಯೋವೃದ್ಧ ವ್ಯಕ್ತಿಯನ್ನು ಠಾಣೆಯಲ್ಲಿರಿಸಿಕೊಂಡಿದ್ದರು ಎನ್ನಲಾಗಿದೆ. ಜಿಂಕೆ ಬೇಟೆಯಾಡಿದ ಆರೋಪಿಗಳನ್ನು ಭೇಟಿ ಮಾಡಲು ಠಾಣೆಗೆ ಬಂದವರಿಗೂ ಫಾರೆಸ್ಟ್ ಅಧಿಕಾರಿಗಳು ಭೇಟಿಗೆ ಅವಕಾಶ ನೀಡಲಿಲ್ಲ ಎಂದು ದೂರಲಾಗಿದೆ. ಈ ನಡುವೆ ಮಣ್ಣಾರ್ಕ್ಕಾಡ್ ಡಿಎಫ್ಒ ವಿ.ಪಿ. ಜಯಪ್ರಕಾಶ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಆರೋಪಿಗಳಿಂದ ಜಿಂಕೆಯನ್ನು ಬೇಟೆಯಾಡಲು ಬಳಸಿದ ಉರುಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಇವರಿಗೆ ಹೊಡೆದಿರುವ ಸಾಧ್ಯತೆಗಳಿಲ್ಲ ಎಂದಿದ್ದಾರೆ. ಅದೇವೇಳೆ, ಆದಿವಾಸಿ ವಲಯಗಳಲ್ಲಿ ಫಾರೆಸ್ಟ್ ಅಧಿಕಾರಿಗಳಿಂದ ಇಂತಹ ಕೆಲವು ಕೃತ್ಯಗಳು ಆಗಾಗ ನಡೆಯುತ್ತಿರುತ್ತವೆ. ಕಕ್ಕಿಯ ವಿಷಯ ಇತರರು ಎತ್ತದಿರುತ್ತಿದ್ದರೆ ಅಧಿಕಾರಿಗಳಿಂದ ನಡೆಯುವ ಇಂತಹ ದೌರ್ಜನ್ಯಗಳು ಬಹಿರಂಗವಾಗುತ್ತಿರಲಿಲ್ಲ ಎಂದು ಇಲ್ಲಿನ ಸಾಮಾಜಿಕ ಕಾರ್ಯಕರ್ತರು ಹೇಳುತ್ತಿದ್ದಾರೆಂದು ವರದಿ ತಿಳಿಸಿದೆ.