ಕೋಟೆಕಾರ್ನಲ್ಲಿರುವ ಹೆದ್ದಾರಿಯ ವಾಣಿಜ್ಯ ತೆರಿಗೆ ಕೇಂದ್ರ ತೆರವಿಗೆ ನಾಗರಿಕರ ಆಗ್ರಹ
ಉಳ್ಳಾಲ, ಆ.1: ರಾಷ್ಟ್ರೀಯ ಹೆದ್ದಾರಿ 66ರ ಕೋಟೆಕಾರಿನಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ವಾಣಿಜ್ಯ ತೆರಿಗೆ ತಪಾಸಣಾ ಕೇಂದ್ರದೆದುರು ಹೆದ್ದಾರಿಯಲ್ಲೇ ದಿನವಿಡೀ ನಿಲ್ಲುತ್ತಿರುವ ಸರಕು ಘನ ವಾಹನಗಳಿಂದಾಗಿ ಇಲ್ಲಿ ದಿನನಿತ್ಯವೂ ಅಪಘಾತಗಳು ಸಂಭವಿಸುತ್ತಿರುತ್ತದೆ. ಇಂತಹ ಅನಧಿಕೃತವಾಗಿ ಹೆದ್ದಾರಿಗಳಲ್ಲಿ ಕಾರ್ಯಾಚರಿಸುತ್ತಿರುವ ಕೇಂದ್ರಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಈ ತಪಾಸಣಾ ಕೇಂದ್ರದ ಎದುರು ನಿಂತಿದ್ದ ಲಾರಿಯೊಂದು ಧಿಡೀರಣೆ ಸೂಚನೆ ನೀಡದ ಹೊರಟ ಕಾರಣ ಹಿಂದಿನಿಂದ ಬರುತ್ತಿದ್ದ ಸ್ಕೂಟರ್ ಅಪಘಾತಕ್ಕೀಡಾಗಿ ಸವಾರೆ ಮಹಿಳೆ ಮತ್ತು ಜೊತೆಯಲ್ಲಿದ್ದ ಮಗು ಗಂಭೀರ ಗಾಯಗೊಂಡ ಘಟನೆ ರವಿವಾರ ನಡೆದಿದೆ. ಈ ಘಟನೆಯ ಬಳಿಕ ಉದ್ರಿಕ್ತ ಗ್ರಾಮಸ್ಥರು ತಕ್ಷಣ ತಪಾಸಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿದ್ದು ಅನಧಿಕೃತವಾಗಿ ಹೆದ್ದಾರಿಗಳಲ್ಲಿ ಕಾರ್ಯಾಚರಿಸುತ್ತಿರುವ ಇಂತಹ ಕೇಂದ್ರಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಪ್ರತಿಭಟಿಸಿದ್ದಾರೆ. ಕೆಲ ವರ್ಷಗಳ ಹಿಂದೆ ತೊಕ್ಕೊಟ್ಟಿನಲ್ಲಿ ಕಾರ್ಯಾಚರಿಸುತ್ತಿದ್ದ ವಾಣಿಜ್ಯ ತೆರಿಗೆ ತಪಾಸಣಾ ಕೇಂದ್ರವು ಹೆದ್ದಾರಿ ವಿಸ್ತರಣೆ ಸಂದರ್ಭದಲ್ಲಿ ಕೋಟೆಕಾರಿಗೆ ಸ್ಥಳಾಂತರಗೊಂಡಿತ್ತು. ತಪಾಸಣೆಗೆಂದು ಬರುವ ಘನ ಸರಕು ವಾಹನಗಳು ರಸ್ತೆಯಲ್ಲೇ ಠಿಕಾಣಿ ಹೂಡುತ್ತಿದ್ದು, ಇದು ಬಹಳಷ್ಟು ಅಪಘಾತ ಪ್ರಕರಣಗಳಿಗೆ ಕಾರಣವಾಗುತ್ತಿವೆ ಎಂಬುದು ನಾಗರಿಕರ ಆರೋಪ. ಬಳಿಕ ಸ್ಥಳಕ್ಕೆ ಆಗಮಿಸಿದ ಇನ್ಸ್ಪೆಕ್ಟರ್ ಪ್ರತಿಭಟನಾಕಾರರನ್ನು ಸೌಜನ್ಯದಿಂದಲೇ ಮನವೊಲಿಸಿ ಸಮಸ್ಯೆಯ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದರು.
ಸಮಸ್ಯೆ ಬಗೆಹರಿಸಲು ಸಭೆ
ನಾಗರಿಕರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ತಪಾಸಣಾ ಕೇಂದ್ರದಲ್ಲಿ ಎಸಿಪಿ ಶೃತಿ ಎನ್.ಎಸ್., ಉಳ್ಳಾಲ ಪೊಲೀಸ್ ಇನ್ಸ್ಪೆಕ್ಟರ್ ಶಿವಪ್ರಕಾಶ್, ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿರುವ ಕಂಪೆನಿಯ ಮುಖ್ಯಸ್ಥರು, ವಾಣಿಜ್ಯ ತೆರಿಗೆ ಇಲಾಖೆಯ ಉಪಆಯುಕ್ತ ಕೃಷ್ಣಕುಮಾರ್ ಮತ್ತು ಸ್ಥಳೀಯ ನಾಗರಿಕ ಸಮಿತಿ ಯುವವೇದಿಕೆಯ ಸದಸ್ಯರ ಸಮಕ್ಷಮದಲ್ಲಿ ಸಭೆ ನಡೆದಿದೆ. ತಪಾಸಣಾ ಕೇಂದ್ರದಲ್ಲಿ ಬಳಿ ನಡೆಯುತ್ತಿರುವಅಪಘಾತಗಳನ್ನು ತಡೆಯುವುದರ ಬಗ್ಗೆ ಚರ್ಚಿಸಲಾಗಿದೆ.
ಇನ್ಸ್ಪೆಕ್ಟರ್ ಶಿವಪ್ರಕಾಶ್ರವರು ರಸ್ತೆ ಅಪಘಾತ ಸುರಕ್ಷತೆಯ ಬಗೆಗೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಾಣಿಜ್ಯ ಇಲಾಖಾ ಉಪ ಆಯುಕ್ತರಿಗೆ ಸೂಚಿಸಿದರು.





.gif.jpg)



