ಶೀಘ್ರವೇ ಸೌದಿ ಅರೇಬಿಯದಲ್ಲಿ ಸಿಲುಕಿರುವ ಭಾರತೀಯರ ತೆರವು: ಸುಷ್ಮಾ
ಹೊಸದಿಲ್ಲಿ, ಆ.1: ಸೌದಿ ಅರೇಬಿಯದಲ್ಲಿ ಸಿಲುಕಿ ಕೊಂಡಿರುವ ಸುಮಾರು 10 ಸಾವಿರ ಭಾರತೀಯರನ್ನು ತೆರವುಗೊಳಿಸಲಾಗುವುದು. ಅವರಿಗೆಲ್ಲ ಆಹಾರ ಪದಾರ್ಥಗಳನ್ನು ಹಂಚಿಕೆ ಮಾಡಿರುವುದರಿಂದ ಯಾರೊಬ್ಬರೂ ಹಸಿದಿರುವಂತಿಲ್ಲವೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಂಸತ್ತಿಗಿಂದು ತಿಳಿಸಿದ್ದಾರೆ.
ತೆರವು ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ವಿದೇಶಾಂಗ ಸಹಾಯಕ ಸಚಿವ ವಿ.ಕೆ. ಸಿಂಗ್ ಸೌದಿ ಅರೇಬಿಯಕ್ಕೆ ಹೋಗಲಿದ್ದಾರೆಂದು ಸಂಸತ್ತಿನ ಉಭಯ ಸದನಗಳಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ಅವರು ಮಾಹಿತಿ ನೀಡಿದರು.
ಈ ಭಾರತೀಯರ ಭವಿಷ್ಯದ ಕುರಿತು ಲೋಕಸಭೆ ಹಾಗೂ ರಾಜ್ಯಸಭೆ ಗಳಲ್ಲಿ ಸದಸ್ಯರು ಕಳವಳ ವ್ಯಕ್ತಪಡಿಸಿದರು. ಅವರಿಗೆ ಆಹಾರ ಒದಗಿಸಲು ಭಾರತೀಯ ದೂತಾವಾಸವು 5 ಶಿಬಿರಗಳನ್ನು ತೆರೆದಿದೆ. ಇಂದು ಮುಂಜಾನೆಯವರೆಗೆ ಅಲ್ಲಿನ ವಿದ್ಯಮಾನದ ಬಗ್ಗೆ ತನಗೆ ಪ್ರತಿ ತಾಸಿಗೊಮ್ಮೆ ಮಾಹಿತಿ ಬಂದಿದೆಯೆಂದು ಸುಷ್ಮಾ ಸದಸ್ಯರನ್ನು ಸಮಾಧಾನಿಸಿದರು.
ನಮ್ಮ ಯಾವನೇ ಕಾರ್ಮಿಕ ಹಸಿದಿರುವಂತಿಲ್ಲ. ಇದು ಸಂಸತ್ತಿನ ಮೂಲಕ ನಾನು ದೇಶಕ್ಕೆ ಕೊಡುವ ಭರವಸೆಯಾಗಿದೆ. ನಾವು ಅವರೆಲ್ಲರನ್ನೂ ಭಾರತಕ್ಕೆ ಕರೆ ತರಲಿದ್ದೇವೆಂದು ಅವರು ತಿಳಿಸಿದರು.
ಸಿಲುಕಿಕೊಂಡಿರುವ ಕಾರ್ಮಿಕರ ಶೀಘ್ರ ತೆರವನ್ನು ಖಚಿತಪಡಿಸಲು ಸರಕಾರವು ಸೌದಿ ಅರೇಬಿಯದ ವಿದೇಶಾಂಗ ಹಾಗೂ ಕಾರ್ಮಿಕ ಕಚೇರಿಗಳ ಸಂಪರ್ಕದಲ್ಲಿದೆಯೆಂದು ಸುಷ್ಮಾ ಹೇಳಿದರು.
ಉದ್ಯೋಗದಾತರ ನಿರಾಕ್ಷೇಪಣೆ ಪತ್ರದ ಹೊರತು, ಉದ್ಯೋಗಿಗಳಿಗೆ ನಿರ್ಗಮನ ವೀಸಾ ನೀಡಲು ಅಲ್ಲಿನ ಕಾನೂನಿನಲ್ಲಿ ಅನುಮತಿಯಿಲ್ಲ. ಆದರೆ, ಮಾಲಕರೆಲ್ಲ ತಮ್ಮ ಕಾರ್ಖಾನೆಗಳನ್ನು ಮುಚ್ಚಿ ದೇಶ ಬಿಟ್ಟದ್ದು, ನೌಕರರು ಅನಾಥ ಸ್ಥಿತಿಯಲ್ಲಿರುವಂತೆ ಮಾಡಿದ್ದಾರೆಂದು ಅವರು ತಿಳಿಸಿದರು.
ಅದರಿಂದಾಗಿ ಅವರ ನಿರಾಕ್ಷೇಪ ಪತ್ರವಿಲ್ಲದೆಯೇ ನೌಕರರಿಗೆ ನಿರ್ಗಮನ ವೀಸಾ ನೀಡುವಂತೆ ಸೌದಿ ಸರಕಾರಕ್ಕೆ ಭಾರತ ಸರಕಾರ ಮನವಿ ಮಾಡಿದೆ. ಸಂಬಂಧಿತ ಕಂಪೆನಿಗಳೊಂದಿಗಿನ ಲೆಕ್ಕಾಚಾರ ಮುಗಿಸುವ ಮೊದಲು ಅನೇಕ ತಿಂಗಳುಗಳಿಂದ ಸಂಬಳ ದೊರೆಯದ ಉದ್ಯೋಗಿಗಳ ಬಾಕಿ ತೀರಿಸುವಂತೆಯೂ ಒತ್ತಾಯಿಸಲಾಗಿದೆಯೆಂದು ಸುಷ್ಮಾ ವಿವರಿಸಿದರು.