ಬಾಲಕಿಯ ಅಪಹರಣ: ಆರೋಪಿ ಬಂಧನ
ಕಾಸರಗೋಡು, ಆ.1: ಅಪ್ರಾಪ್ತ ಬಾಲಕಿಯ ಅಪಹರಣ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕೊಲೆ ಪ್ರಕರಣವೊಂದರ ಆರೋಪಿಯೋರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬಂದ್ಯೋಡು ಅಡ್ಕದ ಅಬ್ದುಲ್ ಆಸಿರ್(21) ಎಂದು ಗುರುತಿಸಲಾಗಿದೆ. ಪರಪ್ಪದಿಂದ ಬಾಲಕಿ ಸಹಿತ ಈತನನ್ನು ವಶಕ್ಕೆ ತೆಗೆದು ಕೊಳ್ಳಲಾಯಿತು. ಜುಲೈ 31ರಂದು ಸಂಜೆ ಐದು ಗಂಟೆಯಿಂದ ಬಾಲಕಿ ನಾಪತ್ತೆ ಯಾಗಿದ್ದಳು. ಈ ಬಗ್ಗೆ ಮನೆಯವರು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಸಂಜೆಯಿಂದ ಶೋಧ ನಡೆಸಿದ್ದರು.
ಈ ನಡುವೆ ಪರಪ್ಪದಲ್ಲಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮನೆಯೊಂದರಿಂದ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದು, ಆಸಿರ್ನನ್ನು ಲೈಸನ್ಸ್ ಇಲ್ಲದ ರಿವಾಲ್ವರ್ ಸಹಿತ ಏಪ್ರಿಲ್ 1ರಂದು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಕುಂಬಳೆ ಪೇರಾಲ್ನಲ್ಲಿ ಶಫೀಕ್(25) ಎಂಬಾತನ ಕೊಲೆ ಪ್ರಕರಣದಲ್ಲಿ ಅಬ್ದುಲ್ ಆಸಿರ್ ಎರಡನೆ ಆರೋಪಿಯಾಗಿದ್ದನು. ಶಫೀಕ್ನನ್ನು ಕೊಲೆಗೈದ ಬಳಿಕ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಬಳಿ ರಾಶಿ ಹಾಕಲಾಗಿದ್ದ ಮರಳಿನಲ್ಲಿ ಹೂತುಹಾಕಲಾಗಿತ್ತು ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಸಿರ್ ಸೇರಿದಂತೆ ಮೂವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದರು. ಹನ್ನೆರಡು ದಿನಗಳ ಹಿಂದೆಯಷ್ಟೇ ಜಾಮೀನು ಪಡೆದು ಬಿಡುಗಡೆಗೊಂಡಿದ್ದನು. ಕಳೆದ ಅಕ್ಟೋಬರ್ 6ರಂದು ಪುತ್ತೂರಿನ ರಾಜಧಾನಿ ಜ್ಯುವೆಲ್ಲರಿ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದನು ಎಂದು ತಿಳಿದು ಬಂದಿದೆ.
ಕೇರಳ, ಕರ್ನಾಟಕದ ಹಲವು ಠಾಣೆಗಳಲ್ಲಿ ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.