ಗೋರಕ್ಷಣೆಯ ಹೆಸರಲ್ಲಿ ಮಾನವ ಹತ್ಯೆ ತಪ್ಪು
ವೆಂಕಯ್ಯ ನಾಯ್ಡು
ಹೊಸದಿಲ್ಲಿ, ಆ.2: ಗೋ ಸಂರಕ್ಷಣೆಯ ಹೆಸರಿನಲ್ಲಿ ದಲಿತರ ವಿರುದ್ಧ ನಡೆಯುತ್ತಿರುವ ಹಿಂಸಾಚಾರವನ್ನು ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಮಂಗಳವಾರ ಬಲವಾಗಿ ಖಂಡಿಸಿದ್ದಾರೆ. ಆದರೆ ಮತಾಂತರಗೊಳ್ಳುವು ದರಿಂದ ದಲಿತರ ವಿರುದ್ಧ ನಡೆಯುತ್ತಿರುವ ಪಕ್ಷಪಾತಗಳು ಕೊನೆಗೊಳ್ಳಲಾರವು ಎಂದವರು ಅಭಿಪ್ರಾಯಿಸಿದ್ದಾರೆ. ದಲಿತರು ಬೌದ್ಧ ಮತವನ್ನು ಸ್ವೀಕರಿಸಬೇಕೆಂದು, ತನ್ನ ಸಂಪುಟ ಸಹದ್ಯೋಗಿ ರಾಮದಾಸ್ ಅಠವಳೆ ಕರೆ ನೀಡಿದ ಕೆಲವೇ ದಿನಗಳ ಬಳಿಕ ವೆಂಕಯ್ಯ ನಾಯ್ಡು ಈ ಹೇಳಿಕೆಯನ್ನು ನೀಡಿದ್ದಾರೆ.
ಹಿಂದೂಧರ್ಮದಲ್ಲಿ ತಾರತಮ್ಯಕ್ಕೆ ಅವಕಾಶವಿಲ್ಲವೆಂದು ಪ್ರತಿಪಾದಿಸಿದ ಅವರು ‘‘ಇನ್ನೋರ್ವ ಮಾನವ ಜೀವಿಯ ವಿರುದ್ಧ ಭೇದಭಾವ ಮಾಡುವವನನ್ನು ಹಿಂದೂ ಎಂದು ಕರೆಯಲು ಸಾಧ್ಯವಿಲ್ಲ’’ ಎಂದರು.
‘‘ನೀವು ಗೋವನ್ನು ಗೌರವಿಸುವಿರಾದರೆ, ತುಂಬಾ ಒಳ್ಳೆಯದು. ಆದರೆ ಇತರ ಮಾನವರಿಗೂ ಬದುಕುವ ಹಾಗೂ ತಮ್ಮ ಉದ್ಯೋಗವನ್ನು ನಿರ್ವಹಿಸುವ ಹಕ್ಕಿದೆ.ನೀವು ಗೋವನ್ನು ಗೌರವಿಸಲು ಬಯಸುವಿರಾದರೆ ಅದನ್ನು ಗೌರವಿಸಿ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ ಗೋವನ್ನು ಸಂರಕ್ಷಿಸುವ ಹೆಸರಿನಲ್ಲಿ ನೀವು ಯಾರನ್ನಾದರೂ ಕೊಲ್ಲಬಹುದೆಂದು ಇದರ ಅರ್ಥವಲ್ಲ’’ ಎಂದು ನಾಯ್ಡು ಅಸಮಾಧಾನ ವ್ಯಕ್ತಪಡಿಸಿದರು.
ಹೊಸದಿಲ್ಲಿಯಲ್ಲಿ ನಡೆದ ಐಎಎಸ್ ರ್ಯಾಂಕ್ ವಿಜೇತೆ, ದಲಿತ ಯುವತಿ ಟೀನಾ ಡಾಬಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಗೋಸಂರಕ್ಷಣೆಯ ಹೆಸರಿನಲ್ಲಿ ದೌರ್ಜನ್ಯ ನಡೆಸುವುದು ಸಂಪೂರ್ಣ ತಪ್ಪೆಂದು ಹೇಳಿದರು.
ಗುಜರಾತ್ ಹಾಗೂ ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ತಥಾಕಥಿತ ಗೋಸಂರಕ್ಷಕರು ದಲಿತರ ಮೇಲೆ ಹಿಂಸಾಚಾರ ನಡೆಸಿದ ಸರಣಿ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮತಾಂತರವುಈ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಕೆಲವು ಮಂದಿ ದಲಿತರಿಗೆ ಸೂಚಿಸಿದ್ದಾರೆ. ಆದರೆ ಹಾಗಾಗಲಾರದು. ಇತರ ಧರ್ಮಗಳಲ್ಲೂ ತಾವು ಇಂತಹದೇ ಪರಿಸ್ಥಿತಿಯನ್ನು ಎದುರಿಸಿದ್ದಾಗಿ ಹೇಳಿಕೊಂಡು ಎಷ್ಟೋ ಮಂದಿ ದಲಿತರು ಹಿಂದೂಧರ್ಮಕ್ಕೆ ವಾಪಾಸಾದ ಹಲವು ಪ್ರಕರಣಗಳಿವೆಯೆಂದವರು ತಿಳಿಸಿದರು.