ಮುಸ್ಲಿಮ್ ಯುವಕರಿಗೆ ಹಲ್ಲೆ, ಅವಹೇಳನ
ಜೈ ಶ್ರೀರಾಮ್ ಘೋಷಣೆ ಕೂಗಿಸಿದ ಸಂಘ ಪರಿವಾರ ಕಾರ್ಯಕರ್ತರು
ಅಹ್ಮದಾಬಾದ್, ಆ.2: ಸಂಘ ಪರಿವಾರ ಕಾರ್ಯಕರ್ತರೆನ್ನಲಾದ ಕೆಲವರು ಇಬ್ಬರು ಮುಸ್ಲಿಮ್ ಯುವಕರಿಗೆ ಹಲ್ಲೆಗೈದು, ಅವರ ದೇವರಾದ ಅಲ್ಲಾಹ್ ನನ್ನು ಅವಹೇಳನಗೈದು ಅವರಿಂದ ಜೈ ಶ್ರೀರಾಮ್ ಘೋಷಣೆ ಕೂಗಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಬಿಟ್ಟಿದೆ ಎಂದು ಜನತಾ ಕಾ ರಿಪೋರ್ಟರ್ ವರದಿಯೊಂದು ಹೇಳಿದೆ.
ವೀಡಿಯೊದಲ್ಲಿ ಅಮಿತ್ ಸಿಂಗ್ ರಾಥೋಡ್ ಎಂಬ ವ್ಯಕ್ತಿ ಇಬ್ಬರು ಮುಸ್ಲಿಮ್ ಯುವಕರಿಗೆ ಹೊಡೆಯುತ್ತಿರುವ ದೃಶ್ಯವಿದೆ. ಸ್ವಲ್ಪಹೊತ್ತಿನಲ್ಲಿ ಆತನೊಂದಿಗೆ ಸೇರಿದ ಆತನ ಸಹಚರರು ಆ ಮುಸ್ಲಿಮ್ ಯುವಕರ ಅಸಹಾಯಕತೆಗೆ ಜೋರಾಗಿ ನಗುತ್ತಿರುವುದೂ ಕಾಣಿಸುತ್ತದೆ.
‘‘ಈ ವೀಡಿಯೊ ನೋಡಿದಾಗ ಕರುಳು ಚುರುಕ್ಕೆನ್ನುತ್ತದೆ. ಈ ಕ್ರಿಮಿನಲ್ ಗೂಂಡಾ ಗಳನ್ನು ಸಂಘ ಪರಿವಾರ ನಮ್ಮ ಜನರ ಮೇಲೆ ಛೂ ಬಿಟ್ಟಿದೆ’’ ಎಂದು ಈ ವೀಡಿಯೊ ಬಗ್ಗೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಪ್ರತಿಕ್ರಿಯಿಸಿದರು.
ಗೃಹ ಸಚಿವ ರಾಜನಾಥ ಸಿಂಗ್ ಈ ಘಟನೆಯ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಈ ವೀಡಿಯೊವನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ ಕಾಂಗ್ರೆಸ್ ಕಾರ್ಯಕರ್ತ ಗೌರವ್ ಪಾಂಡಿ ಆಗ್ರಹಿಸಿದ್ದಾರೆ.
ಫೇಸ್ಬುಕ್ನಲ್ಲಿ ಈ ವೀಡಿಯೊವನ್ನು ಟ್ರುತ್ ಆಫ್ ಗುಜರಾತ್ ವೆಬ್ ಸೈಟ್ ನಡೆಸುವ ಪ್ರತೀಕ್ ಸಿನ್ಹ ಅಪ್ಲೋಡ್ ಮಾಡಿದ್ದಾರೆ. ‘‘ಇದು ಹಿಂದೂತ್ವ ಉಗ್ರವಾದದ ಮುಖ. ಅವರು ಉಪಯೋಗಿಸಿದ ಭಾಷೆ ತೀರಾ ಅವಮಾನಕಾರಿ. ಎಚ್ಚರಿಕೆಯಿಂದ ವೀಕ್ಷಿಸಿ (ಅವಮಾನಕರ ಕಮೆಂಟ್ ಮಾಡಿದವರನ್ನು ನಿಷೇಧಿಸಲಾಗುವುದು)’’ ಎಂದು ಅವರು ಬರೆದಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಈ ವೀಡಿಯೊಗೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇಂಡಿಯನ್ ಎಕ್ಸ್ಪ್ರೆಸ್ ವರದಿಯೊಂದರ ಪ್ರಕಾರ ಬಿಹಾರದ ಇಬ್ಬರು ಯುವ ವಲಸಿಗ ಕಾರ್ಮಿಕರನ್ನು ವ್ಯಕ್ತಿಯೊಬ್ಬ ಅವಹೇಳನಗೈಯ್ಯುವ ವೀಡಿಯೊ ಬಹಿರಂಗಗೊಂಡ ನಂತರ ಸೋಮವಾರ ಸೂರತ್ ನಗರದ ಲಿಂಬಾಯತ್ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಗೊಡಾದರಾ ಪ್ರದೇಶದಲ್ಲಿನ ಬಾಡಿಗೆ ಮನೆಯೊಂದರಿಂದ ಕೆಲಸಗಾರರನ್ನು ಅಮಿತ್ ಸಿಂಗ್ ರಾಥೋಡ್ ಎಂಬ ವ್ಯಕ್ತಿ ಬಲವಂತವಾಗಿ ಹೊರದಬ್ಬುವ ದೃಶ್ಯ ವೀಡಿಯೊದಲ್ಲಿದೆ. ರಾಥೋಡ್ ಜೊತೆ ಇನ್ನಿತರ ಹಲವರು ಆ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ್ದು ರಾಥೋಡ್ನನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.