ಇದೀಗ ಪೊಲೀಸರಿಗೆ ಬ್ಯಾರಿ ಭಾಷಾ ಕಲಿಕೆ ಸರದಿ
ಭಾಷಾ ಕಲಿಕೆಯ ಮಹತ್ವಕ್ಕೊಂದು ನಿದರ್ಶನ

ಮಂಗಳೂರು, ಆ.2: ಭಾಷೆ ಎನ್ನುವುದು ಪರಸ್ಪರ ಸಂವಹನದ ಒಂದು ಪ್ರಕ್ರಿಯೆ. ಹೊರಜಿಲ್ಲೆಯ ಪೊಲೀಸರು ಸ್ಥಳೀಯ ಜನರೊಂದಿಗೆ ವ್ಯವಹರಿಸುವಾಗ ಸಂವಹನದ ಸಂಕಟ ಎದುರಾಗದಿರಲಿ ಎಂಬ ನಿಟ್ಟಿನಲ್ಲಿ ಪೊಲೀಸ್ ಕಮಿಷನರ್ ಚಂದ್ರಶೇಖರ್ ಮುತುವರ್ಜಿ ಯಲ್ಲಿ ನಡೆಯುತ್ತಿರುವ ತುಳು ಮತ್ತು ಬ್ಯಾರಿ ಭಾಷಾ ಕಲಿಕೆಯ ತರಬೇತಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಇತ್ತೀಚೆಗೆ ಬೊಂಡಂತಿಲ ಸಂತ ಥೋಮಸ್ ಶಾಲೆಯಲ್ಲಿ ಅರಬಿಕ್ ಭಾಷೆ ಕಲಿಸಲಾಗುತ್ತಿದೆ ಎಂಬ ನೆಪವೊಡ್ಡಿ ಶ್ರೀರಾಮ ಸೇನೆಯ ಕಾರ್ಯಕರ್ತರು ಪುಂಡಾಟಿಕೆ ಮೆರೆದಿರುವ ಘಟನೆ ವಿವಾದಕ್ಕೆ ಕಾರಣವಾಗಿತ್ತು. ಈ ನಡುವೆ ಬ್ಯಾರಿ ಭಾಷೆಯ ತರಬೇತಿಗೆ ಪೊಲೀಸ್ ಇಲಾಖೆ ಮುಂದಾಗಿರುವುದು ಭಾಷೆಗೆ ಧಾರ್ಮಿಕತೆಯ ಹಂಗಿಲ್ಲ ಎನ್ನುವುದನ್ನು ನಿರೂಪಿಸಿದೆ.
ಹೊರ ಜಿಲ್ಲೆಗಳಿಂದ ಆಗಮಿಸುವ ಸಿಬ್ಬಂದಿ ಇಲ್ಲಿನ ಸಾರ್ವಜನಿಕರ ಜೊತೆ ವ್ಯವಹರಿಸುವಾಗ ಉಂಟಾಗುವ ಭಾಷಾ ಸಮಸ್ಯೆ, ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಮಹತ್ವದ್ದಾಗಿದೆ. ನಗರ ಪೊಲೀಸ್ ಕಮಿಷನರೇಟ್ ಕಚೇರಿಯ ಸಭಾಂಗಣದಲ್ಲೇ ಪೊಲೀಸರಿಗೆ ತುಳು ಹಾಗೂ ಬ್ಯಾರಿ ಭಾಷಾ ಕಲಿಕಾ ತರಬೇತಿಯನ್ನು ನೀಡ ಲಾಗುತ್ತಿದೆ. ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜಿನ ಪ್ರಾಂಶುಪಾಲ ಡಾ.ಉದಯ ಕುಮಾರ್ ಇರ್ವತ್ತೂರು ಮೇಲುಸ್ತುವಾರಿಯಲ್ಲಿ, ಸಹ ಪ್ರಾಧ್ಯಾಪಕ ಡಾ.ಯತೀಶ್ ಕುಮಾರ್ ಮಾರ್ಗದರ್ಶನದಲ್ಲಿ ಕಾರ್ಯಾಗಾರ ನಡೆಯುತ್ತಿದೆ.
‘ತುಳು, ಬ್ಯಾರಿ ಹಾಗೂ ಕೊಂಕಣಿ ಜೊತೆಗೆ ಇಂಗ್ಲಿಷ್ ಭಾಷಾ ಕಲಿಕೆಯ ಬಗ್ಗೆಯೂ ಇದೀಗ ಪೊಲೀಸ್ ಸಿಬ್ಬಂದಿ ಆಸಕ್ತಿ ವ್ಯಕ್ತಪಡಿಸಿದ್ದಾರೆ. ತಲಾ 30ರಂತೆ ಎರಡು ತಂಡಗಳಿಗೆ ಈಗಾಗಲೇ ತುಳು ಭಾಷಾ ತರಬೇತಿ ನೀಡಲಾಗಿದೆ. ಜೂ.16ರಿಂದ ಕಾರ್ಯಾಗಾರ ಆರಂಭಗೊಂಡಿತ್ತು. ತುಳು ಭಾಷೆ ಮುಖ್ಯವಾಗಿ ಹೊರ ಜಿಲ್ಲೆಗಳ ಸಿಬ್ಬಂದಿಗಾಗಿ ನಡೆದಿದ್ದರೆ, ಬ್ಯಾರಿ ಭಾಷಾ ಕಲಿಕೆಯಲ್ಲಿ ಸ್ಥಳೀಯ ಪೊಲೀಸ್ ಸಿಬ್ಬಂದಿ ಮಾತ್ರವಲ್ಲದೆ ಓರ್ವ ಪೊಲೀಸ್ ನಿರೀಕ್ಷಕರೂ ಭಾಗವಹಿಸುವ ಮೂಲಕ ಭಾಷಾ ಕಲಿಕೆಯ ತಮ್ಮ ಅಭಿರುಚಿಯನ್ನು ವ್ಯಕ್ತಪಡಿಸಿದ್ದಾರೆ’ ಎನ್ನುತ್ತಾರೆ ಡಾ.ಯತೀಶ್ ಕುಮಾರ್. ‘‘ತುಳು ಭಾಷಾ ಕಲಿಕೆಯ ಪ್ರಥಮ ತಂಡದಲ್ಲಿ ನಗರ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರೆ, ಎರಡನೆ ತಂಡದಲ್ಲಿ ದ.ಕ. ಜಿಲ್ಲಾ ವ್ಯಾಪ್ತಿಯ ಸಿಬ್ಬಂದಿ ಭಾಗವಹಿಸಿದ್ದರು. ಜುಲೈ 28ರಿಂದ ಆರಂಭಗೊಂಡಿರುವ ಬ್ಯಾರಿ ಭಾಷಾ ಕಲಿಕಾ ತರಬೇತಿಯ ಪ್ರಥಮ ತಂಡದಲ್ಲಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 34 ಸಿಬ್ಬಂದಿಯಿದ್ದಾರೆ. ಬೆಳಗ್ಗೆ 10ರಿಂದ 1:30 ಹಾಗೂ ಅಪರಾಹ್ನ 3ರಿಂದ 5 ಗಂಟೆಯವರೆಗೆ (ತುರ್ತು ಸಂದರ್ಭಗಳನ್ನು ಹೊರತುಪಡಿಸಿ) ತಂಡಕ್ಕೆ 10 ದಿನಗಳ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ.
ಸಂಪನ್ಮೂಲ ವ್ಯಕ್ತಿಯಾಗಿ ಇರ್ಷಾದ್ ವೇಣೂರು ಭಾಗವಹಿಸುತ್ತಿದ್ದಾರೆ. ಈ ತಂಡದ ತರಬೇತಿಯ ನಂತರ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ಸಿಬ್ಬಂದಿಗೆ ಬ್ಯಾರಿ ಭಾಷಾ ಕಲಿಕೆ ತರಬೇತಿ ನೀಡಲಾಗುವುದು’ ಎಂದು ಡಾ.ಯತೀಶ್ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ್ದಾರೆ. ಐಎಎಸ್, ಐಪಿಎಸ್ ಮಾಡಿದವರು ತಮ್ಮ ರಾಜ್ಯದಿಂದ ಹೊರ ರಾಜ್ಯಗಳಿಗೆ ಅಧಿಕಾರಿಗಳಾಗಿ ನಿಯುಕ್ತರಾಗುವಾಗ ಆಯಾ ರಾಜ್ಯಗಳ ಭಾಷೆಯನ್ನು ಕಲಿಯುವುದು ಕಡ್ಡಾಯ. ಅಷ್ಟಕ್ಕೂ ಭಾಷಾ ಕಲಿಕೆ ನಮ್ಮ ಜ್ಞಾನವನ್ನು ಹೆಚ್ಚಿಸುವುದಲ್ಲದೆ, ಪರಸ್ಪರ ಒಡನಾಟಕ್ಕೂ ಸುಲಭ ದಾರಿ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಸಹಭಾಗಿತ್ವದಲ್ಲಿ ಭಾಷಾ ಕಲಿಕಾ ತರಬೇತಿಗೆ ತನ್ನ ಸಿಬ್ಬಂದಿಗೆ ಅವಕಾಶ ಕಲ್ಪಿಸಿರುವುದು ಪ್ರಶಂಸನೀಯ.
ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಭಾಷಾ ಜ್ಞಾನ ಅಗತ್ಯ
‘‘ಜಿಲ್ಲೆಯ ಪೊಲೀಸ್ ಇಲಾಖೆಯ ಸಿಬ್ಬಂದಿಯಲ್ಲಿ ಬಹುತೇಕರು ಹೊರ ಜಿಲ್ಲೆಯವರು. ಅವರು ಸ್ಥಳೀಯ ಭಾಷೆಗಳನ್ನು ಅರಿತು ಕೊಂಡಿದ್ದರೆ ಸಾರ್ವಜನಿಕರ ಜೊತೆ ಮುಕ್ತವಾಗಿ ಬೆರೆಯಲು ಸಾಧ್ಯ ವಾಗುತ್ತದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಯಲ್ಲಿ ಸ್ಥಳೀಯ ಭಾಷೆಗಳ ಅರಿವು, ಜ್ಞಾನ ಕೂಡಾ ಪ್ರಮುಖವಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಗೆ ತುಳು ಹಾಗೂ ಬ್ಯಾರಿ ಭಾಷಾ ಕಲಿಕಾ ತರಬೇತಿಗೆ ಅವಕಾಶ ಕಲ್ಪಿಸಲಾಗಿದೆ. 10 ದಿನಗಳ ಕಾರ್ಯಾಗಾರದಿಂದ ಸಂಪೂರ್ಣ ಭಾಷೆಯನ್ನು ಕಲಿಯಲು ಸಾಧ್ಯವಾಗದಿದ್ದರೂ ಭಾಷೆ ಅರ್ಥ ಮಾಡಿಕೊಳ್ಳು ವುದು ಹಾಗೂ ಜನರ ಜೊತೆ ವ್ಯವಹರಿಸಲು ಸುಲಭವಾಗಲಿದೆ.’’
-ಎಂ. ಚಂದ್ರಶೇಖರ್, ಪೊಲೀಸ್ ಆಯುಕ್ತರು, ಮಂಗಳೂರು ನಗರ.
ಪೊಲೀಸ್ ಇಲಾಖೆಯಿಂದ ಉತ್ತಮ ಸ್ಪಂದನೆ
‘‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರು ಸ್ಥಳೀಯ ಭಾಷೆಗಳಾದ ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷೆಗಳಲ್ಲೇ ವ್ಯವಹರಿಸುತ್ತಾರೆ, ಸಂವಹನ ನಡೆಸುತ್ತಾರೆ. ಬೇರೆ ಊರುಗಳಿಂದ ಬರುವ ಪೊಲೀಸ್ ಸಿಬ್ಬಂದಿಗೆ ಪ್ರಕರಣಗಳ ತನಿಖೆ ಹಾಗೂ ಸಾರ್ವಜನಿಕರ ಜೊತೆ ಬೆರೆಯುವ ವೇಳೆ ಭಾಷಾ ಸಮಸ್ಯೆ ಕಾಡಬಾರದು ಎಂಬ ನೆಲೆಯಲ್ಲಿ ಪೊಲೀಸ್ ಇಲಾಖೆಯ ಸಹಭಾಗಿತ್ವದಲ್ಲಿ ಈ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ. ಇದಕ್ಕೆ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’’
-ಡಾ. ಉದಯ ಕುಮಾರ್ ಇರ್ವತ್ತೂರು,
ಪ್ರಾಂಶುಪಾಲರು, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು.







