ಪುತ್ತೂರು: ಕುಡಿದ ಮತ್ತಿನಲ್ಲಿ ಪತಿಯಿಂದ ಪತ್ನಿಗೆ ಹಲ್ಲೆ
![ಪುತ್ತೂರು: ಕುಡಿದ ಮತ್ತಿನಲ್ಲಿ ಪತಿಯಿಂದ ಪತ್ನಿಗೆ ಹಲ್ಲೆ ಪುತ್ತೂರು: ಕುಡಿದ ಮತ್ತಿನಲ್ಲಿ ಪತಿಯಿಂದ ಪತ್ನಿಗೆ ಹಲ್ಲೆ](https://www.varthabharati.in/sites/default/files/images/articles/2016/08/3/3ptr2-Janaki.jpg)
ಪುತ್ತೂರು, ಆ.3: ಕುಡಿತದ ಮತ್ತಿನಲ್ಲಿದ್ದ ಪತಿಯೊಬ್ಬ ತನ್ನ ಪತ್ನಿಗೆ ಕತ್ತಿಯಿಂದ ಕಡಿದು ಗಾಯಗೊಳಿಸಿದ ಘಟನೆ ಪುತ್ತೂರು ತಾಲೂಕಿನ ನೆಟ್ಟಿಗೆ ಮುಡ್ನೂರು ಗ್ರಾಮದ ಮೈರೋಳು ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಗಾಯಾಳು ಮಹಿಳೆ ಪುತ್ತೂರಿನ ಸರಕಾರಿ ಆಸತ್ರೆಗೆ ದಾಖಲಾಗಿದ್ದಾರೆ.
ಮೈರೋಳು ನಿವಾಸಿ ಕುಶಲ ಎಂಬವರ ಪತ್ನಿ ಜಾನಕಿ(38) ಹಲ್ಲೆಗೊಳಗಾದ ಮಹಿಳೆ.
ಕುಶಲ ಕುಡಿತದ ಚಟ ಹೊಂದಿದ್ದು, ಮದ್ಯ ಸೇವಿಸಿ ಮನೆಗೆ ಬಂದು ಪ್ರತಿದಿನ ತನ್ನ ಮತ್ತು ಮಕ್ಕಳ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಪತಿ ಕುಶಲ ಮಂಗಳವಾರ ರಾತ್ರಿ ತಾನು ಮಕ್ಕಳಿಗೆ ಊಟ ಬಡಿಸುತ್ತಿದ್ದ ವೇಳೆ ತನ್ನನ್ನು ಬೈಯಲಾರಂಭಿಸಿದ್ದರು. ಆ ವೇಳೆ ಕಿರಿಯ ಪುತ್ರ ಕೃಷ್ಣಪ್ಪ ಎಂಬಾತ ಆಕ್ಷೇಪ ವ್ಯಕ್ತಪಡಿಸಿದ್ದ. ಇದರಿಂದಾಗಿ ಕ್ರೋಧಗೊಂಡ ಕುಶಲ ಅವರು ಕತ್ತಿಯನ್ನು ಕೈಯಲ್ಲಿ ಹಿಡಿದು ಕೊಂಡು ಕೃಷ್ಣಪ್ಪನಿಗೆ ಕಡಿಯಲು ಮುಂದಾಗಿದ್ದರು. ಆ ವೇಳೆ ತಾನು ತಡೆಯಲು ಹೋಗಿದ್ದು, ಪುತ್ರ ಕೃಷ್ಣಪ್ಪನಿಗೆಂದು ಕಡಿದ ಕತ್ತಿಯೇಟು ತನ್ನ ತಲೆಗೆ ಬಿದ್ದಿದೆ ಎಂದು ಗಾಯಾಳು ಜಾನಕಿ ಆರೋಪಿಸಿದ್ದಾರೆ.
ಕಡಿದ ವೇಳೆ ಕತ್ತಿ ಎರಡು ತುಂಡಾಗಿ ಹೋಗಿದ್ದು, ಒಂದು ತುಂಡು ತಲೆಯ ಗಾಯದಲ್ಲೇ ಉಳಿದುಕೊಂಡಿತ್ತು. ವೈದ್ಯರು ಅದನ್ನು ಚಿಕಿತ್ಸೆಯ ವೇಳೆ ಹೊರತೆಗೆದಿರುವುದಾಗಿ ಗಾಯಾಳು ಜಾನಕಿ ತಿಳಿಸಿದ್ದಾರೆ. ಘಟನೆಯ ಕುರಿತು ಸಂಪ್ಯ ಪೊಲೀಸರಿಗೆ ದೂರು ನೀಡಲಾಗಿದೆ.