ಗುತ್ತಕಾಡು: ಶಿಕ್ಷಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳಿಂದ ಧರಣಿ
![ಗುತ್ತಕಾಡು: ಶಿಕ್ಷಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳಿಂದ ಧರಣಿ ಗುತ್ತಕಾಡು: ಶಿಕ್ಷಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳಿಂದ ಧರಣಿ](https://www.varthabharati.in/sites/default/files/images/articles/2016/08/3/guttakadu-pratibhatane.jpg)
ಕಿನ್ನಿಗೋಳಿ, ಆ.3: ಗುತ್ತಕಾಡು ದ.ಕ. ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚುವರಿ ಶಾಲಾ ಶಿಕ್ಷಕರ ವರ್ಗಾವಣೆ ವಿರುದ್ಧ ಮಂಗಳವಾರ ವಿದ್ಯಾರ್ಥಿಗಳು, ಹೆತ್ತವರು ಹಾಗೂ ಪೋಷಕರು ಶಾಲಾ ಆವರಣದಲ್ಲಿ ಧರಣಿ ನಡೆಸಿದರು.
ಸರಕಾರದ ಸವಲತ್ತುಗಳಿದ್ದರೂ ಸ್ಥಳೀಯರು ಹಳೆವಿದ್ಯಾರ್ಥಿಗಳು ಎಲ್ಲಾ ಒಟ್ಟು ಸೇರಿ ಮಕ್ಕಳಿಗೆ ಬೇಕಾಗುವ ಸವಲತ್ತುಗಳನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀಡಿದ್ದಾರೆ. ಆದರೆ ಈಗ ಸರಕಾರದ ಹೊಸ ಆದೇಶ ಕಂಡು ಹೆತ್ತವರು ಪೋಷಕರು ಕಂಗಾಲಾಗಿದ್ದಾರೆ. ಈ ಶಾಲೆಯಲ್ಲಿ 1 ರಿಂದ 8 ನೆ ತರಗತಿ ಇದ್ದು 72 ವಿದ್ಯಾರ್ಥಿಗಳಿದ್ದಾರೆ. 8 ನೆ ತರಗತಿಗೆ ಒಬ್ಬರು ಶಿಕ್ಷಕರು ಇದ್ದು 1 ಮುಖ್ಯ ಶಿಕ್ಷಕರಿದ್ದು, 1 ರಿಂದ 7 ನೆ ತರಗತಿಯವರೆಗೆ 3 ಶಿಕ್ಷಕರಿದ್ದಾರೆ. ಈಗ ಒಬ್ಬ ಶಿಕ್ಷಕರಿಗೆ ಹೆಚ್ಚುವರಿ ಶಿಕ್ಷಕ ವರ್ಗಾವಣೆ ಆದೇಶ ಬಂದಿದ್ದು ಕೇವಲ 2 ಸಹಶಿಕ್ಷಕರು ಹಾಗೂ ಒಟ್ಟು 4 ಮಂದಿ ಮಾತ್ರ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಬಂದೊದಗಿದೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದರು.
ಶಾಲಾಭಿವೃದ್ಧಿ ಸಮಿತಿಯ ನಾರಾಯಣ ಪೂಜಾರಿ ಮಾತನಾಡಿ, ಸರಕಾರ ಈ ಹೊಸ ಆದೇಶ ನೀಡಿದರೆ ಮಂದಿನ ವರ್ಷಗಳಲ್ಲಿ ಮಕ್ಕಳ ಹೆತ್ತವರು ಶಿಕ್ಷಕರ ಕೊರತೆ ಕಂಡು ಬೇರೆ ಶಾಲೆಗೆ ಸೇರಿಸುವ ಪ್ರಮೇಯ ಬಂದೊಗಬಹುದು. ಬಡ ಹೆತ್ತವರು ಸಾಲ ಸೋಲ ಮಾಡಿಯಾದರೂ ಇತರ ಖಾಸಗಿ ಶಾಲೆಗಳಿಗೆ ಸೇರಿಸುವ ನಿರ್ಧಾರ ತೆಗೆದುಕೊಳ್ಳಬಹುದು. ಆಗ ಸರಕಾರಿ ಶಾಲೆಗಳು ತನ್ನಿಂತಾನೇ ಮಕ್ಕಳ ಕೊರತೆ ಕಂಡು ಶಾಲೆ ಮುಚ್ಚುವ ಪರಿಸ್ಥಿತಿ ಖಂಡಿತಾ ಎಂದರು.
ಈ ಸಂದರ್ಭ ಶಾಲಾ ಸಮಿತಿಯ ವಿವೇಕಾನಂದ, ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಬೊಳ್ಳೂರು, ತಾಲೂಕು ಪಂಚಾಯತ್ ಸದಸ್ಯ ದಿವಾಕರ ಕರ್ಕೇರಾ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಅರ್ಧದಷ್ಟು ಮಕ್ಕಳು ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಗ್ರಾಮೀಣ ಪ್ರದೇಶದ ಈ ಶಾಲೆಯಲ್ಲಿ ಸುಮಾರು ಅರ್ಧದಷ್ಟು (30) ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಕಲಿಯುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಕಲಿಯುವ ಹುಮ್ಮಸ್ಸು ಇದೆ ಆದರೆ ಕಲಿಸುವ ಶಿಕ್ಷಕರಿಲ್ಲ. ಮನೆಯವರಲ್ಲಿ ಪಾಠ ಕೇಳುವ ಅಂದರೆ ಮಕ್ಕಳ ಈಗಿನ ಶಿಕ್ಷಣ ಮಟ್ಟ ಹೆತ್ತವರ ಶಿಕ್ಷಣಕ್ಕಿಂತ ಕಠಿಣವಾಗಿದೆ. ಹಾಗಾಗಿ ಹೆತ್ತವರಿಗೆ ಮಕ್ಕಳ ಶಿಕ್ಷಣದ ಚಿಂತೆ ಹೆಚ್ಚಿದೆ. ಮನೆಪಾಠ ಕೊಡಿಸಲು ಹಾಗೂ ಖಾಸಗಿ ಶಾಲೆಯ ಫೀಸು ಕಟ್ಟಲು ಹಣದ ಅಭಾವ. ಹೀಗಾದರೆ ಬಡ ಮಕ್ಕಳು ಶಿಕ್ಷಣ ವಂಚಿತರಾಗುವುದು ಸಹಜ. ಎಲ್ಲಾ ರಾಜಕೀಯ ಪಕ್ಷಗಳು ಒಂದು ಗೂಡಿ ಇಂತಹ ಗ್ರಾಮೀಣ ಪ್ರದೇಶಗಳ ಭವಿಷ್ಯಕ್ಕೆ ಉತ್ತಮ ಶಿಕ್ಷಣದ ಭರವಸೆ ಸವಲತ್ತುಗಳನ್ನು ನೀಡಬೇಕಾಗಿದೆ ಎಂಬ ಆಗ್ರಹ ಮಕ್ಕಳ ಪೋಷಕರಿಂದ ವ್ಯಕ್ತವಾಗಿದೆ.