ಸೆ.2: ಅಖಿಲ ಭಾರತ ಸಾರ್ವತ್ರಿಕ ಮುಷ್ಕರ
ಮಂಗಳೂರು, ಆ.3: ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಆಶ್ರಯದಲ್ಲಿ ಕಾರ್ಮಿಕ ವರ್ಗದ 17 ಬೇಡಿಕೆಗಳ ಈಡೇರಿಕೆಗಾಗಿ ಸೆಪ್ಟಂಬರ್ 2ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಎಚ್ಎಂಎಸ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗನಾಥ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವತ್ರಿಕ ಮುಷ್ಕರದಲ್ಲಿ ಸಾರ್ವಜನಿಕ, ಖಾಸಗಿ ರಂಗ, ಸಂಘಟಿತ ಮತ್ತು ಅಸಂಘಟಿತ ವಲಯ ಕಾರ್ಮಿಕ ಸಂಘಟನೆಗಳು ಭಾಗಿಯಾಗಲಿವೆ. ಎಚ್ಎಂಎಸ್, ಇಂಟಕ್, ಎಐಟಿಯುಸಿ ಹಾಗೂ ಸಿಐಟಿಯು, ಬಿಎಸ್ಸೆನ್ನೆಲ್, ಬ್ಯಾಂಕ್-ವಿಮಾ, ರೈಲ್ವೆ ನೌಕರರು ಹಾಗೂ ಕೇಂದ್ರ ಮತ್ತು ರಾಜ್ಯ ಸೇವಾ ನೌಕರರ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಹೇಳಿದರು.
ಬೇಡಿಕೆಗಳ ಈಡೇರಿಕೆಗಾಗಿ ಆ.9ರಂದು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನಾ ಮೆರವಣಿಗೆ, ಆ.17ರಿಂದ 19ರವರೆಗೆ ಜಿಲ್ಲಾದ್ಯಂತ ವಾಹನ ಜಾಥಾವನ್ನು ಹಮ್ಮಿಕೊಳ್ಳಲಾಗಿದ್ದು, ಬೆಳಗ್ಗೆ 10 ಗಂಟೆಗೆ ಮಂಗಳೂರು ಮಿನಿವಿಧಾನ ಸೌಧದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಮುಖಂಡ ವಸಂತ ಆಚಾರಿ, ಎಚ್ಎಂಎಸ್ನ ಮುಖಂಡ ಸುರೇಶ್ಚಂದ್ರ ಶೆಟ್ಟಿ, ಸಿಐಟಿಯು ಮುಖಂಡ ಬಾಲಕೃಷ್ಣ, ಇಂಟಕ್ನ ಪ್ರಮುಖರಾದ ರಾಜೇಶ್ ಹಾಗೂ ಎಐಟಿಯುಸಿಯ ಎಚ್.ವಿ.ರಾವ್ ಉಪಸ್ಥಿತರಿದ್ದರು.